ಕಾರ್ಪೊರೇಟರ್ ನ್ನು ಭೇಟಿ ಮಾಡಿದ ಪುಷ್ಕರ್ ತಾವು ತಮ್ಮ ಕೆಲಸವನ್ನಷ್ಟೇ ಮಾಡುತ್ತಿದ್ದಾಗಿ ವಿವರಿಸಿದ್ದಾರೆ. ಆದರೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರ್ಪೊರೇಟರ್ ಹಾಗೂ ಆತನ ಬೆಂಬಲಿಗರು ವರದಿ ಪ್ರಕಟಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ, ಜೈಲಿಗೆ ಹೋಗಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಸುಮಾರು 30 ನಿಮಿಷಗಳ ಕಾಲ ನಡೆದ ಚರ್ಚೆಯ ನಂತರ ಪುಷ್ಕರ್ ನ್ನು ತೆರಳಲು ಬಿಟ್ಟಿದ್ದಾರೆ. ಇಷ್ಟೆಲ್ಲಾ ಆದರೂ ಸಹ ವಾಪಸ್ ತೆರಳುತ್ತಿದ್ದ ಪುಷ್ಕರ್ ನ್ನು ಕರೆದು ಕಾಮಗಾರಿ ಕುರಿತಂತೆ ಏನನ್ನೂ ಪ್ರಕಟಿಸದಂತೆ ವಾರ್ಡ್ ಕಾರ್ಪೊರೇಟರ್ ಎಚ್ಚರಿಕೆ ನೀಡಿದ್ದಾರೆ. ತಮ್ಮ ಬೆದರಿಕೆ ವಿಷಯ ಬಹಿರಂಗವಾಗುತ್ತಿದ್ದಂತೆಯೇ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಸೇರಿ ವಿರೋಧಿಗಳು ನನ್ನ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದಾರೆ ಎಂದು ಕಾರ್ಪೊರೇಟರ್ ಪ್ರಮೋದ್ ಆರೋಪಿಸಿ, ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಎಚ್ಚರಿಸಿದ್ದಾರೆ.