ಬಸವ ಮಂಟಪಕ್ಕೆ ಇಟ್ಟಿಗೆ, ಸಿಮೆಂಟ್ ಹೊತ್ತಿದ್ದ ಮಾತೆ ಮಹಾದೇವಿ ಸಾಗಿ ಬಂದ ಹಾದಿ

ದಕ್ಷಿಣ ಭಾರತ ಮೊದಲ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಅವರು 1946, ಮಾ.13ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ....
ಮಾತೆ ಮಹಾದೇವಿ
ಮಾತೆ ಮಹಾದೇವಿ
ಬೆಂಗಳೂರು: ದಕ್ಷಿಣ ಭಾರತ ಮೊದಲ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಅವರು 1946, ಮಾ.13ರಂದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಾಸಲಹಟ್ಟಿಯಲ್ಲಿ ಜನಿಸಿದರು.
ತಂದೆ ಎಸ್‍.ಆರ್.ಬಸಪ್ಪ ತಾಯಿ ಗಂಗಮ್ಮ ದಂಪತಿಯ ಪುತ್ರಿ ಮಾತೆ ಮಹಾದೇವಿ, ಗುರು ಲಿಂಗಾನಂದರಿಂದ ಪ್ರೇರಿತರಾಗಿ 20ನೇ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿದ್ದರು. 
ಚಿಕ್ಕವಯಸ್ಸಿನಲ್ಲೇ ಅವರು ವಚನಗಳನ್ನು ಬರೆಯಲು ಆರಂಭಿಸಿದ್ದರು. 1965 ಆಗಸ್ಟ್ 21ರಂದು ಲಿಂಗಾನಂದ ಸ್ವಾಮೀಜಿಯಿಂದ ಇಷ್ಟಲಿಂಗ ದೀಕ್ಷೆ ಸ್ವೀಕರಿಸಿದ್ದರು. 
1970ರಲ್ಲಿ ದಕ್ಷಿಣ ಭಾರತದ ‘ಪ್ರಥಮ ಮಹಿಳಾ ಜಗದ್ಗುರು’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 
1972ರಲ್ಲಿ ಬಾಗಲಕೋಟೆ ಹುನಗುಂದ ತಾಲೂಕಿನ ಕೂಡಲಸಂಗಮದ ಬಸವಪೀಠ ನಿರ್ಮಾಣದ ಸಂದರ್ಭದಲ್ಲಿ ಮಾತೆ ಮಹಾದೇವಿ ಅವರು ಸ್ವತಃ ಕಲ್ಲು, ಇಟ್ಟಿಗೆಯನ್ನು ಹೊತ್ತು ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ್ದರು. ಯುವ ಜನಾಂಗದಲ್ಲಿ ಬಸವ ತತ್ವ ಸಾರುವ ಹಾಗೂ ಶರಣ ಸಂಸ್ಕೃತಿ ಮೂಡಿಸುವ ಸಲುವಾಗಿ ಲಿಂಗಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಬಸವದಳ ಸಂಘಟನೆ ಆರಂಭಿಸಿದ್ದರು. 
1983ರಲ್ಲಿ 'ಕ್ರಾಂತಿಕಾರಿ ಬಸವಣ್ಣ' ಚಲನಚಿತ್ರ ನಿರ್ಮಿಸಿದ್ದರು. 
12ನೇ ಶತಮಾನದ ಶೂನ್ಯಪೀಠ ಪರಂಪರೆ ಮುಂದುವರಿಸುವ ಸಲುವಾಗಿ 2002ರಲ್ಲಿ ಬಸವಕಲ್ಯಾಣದಲ್ಲಿ ಅಲ್ಲಮ್ಮ ಪ್ರಭು ಶೂನ್ಯ ಪೀಠ ಸ್ಥಾಪಿಸಿದ್ದರು.
ಬಸವಕಲ್ಯಾಣದಲ್ಲಿ 108 ಅಡಿ ಎತ್ತರದ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಿದ ಕೀರ್ತಿ ಕೂಡ ಇವರದ್ದು. ಮಹಾರಾಷ್ಟ್ರದ ಕೋಲ್ಹಾಪುರ ಜಿಲ್ಲೆಯ ಅಳತ್ ಗ್ರಾಮದ ಅಲ್ಲಮಗಿರಿಯಲ್ಲಿ ಅಲ್ಲಮ್ಮ ಪ್ರಭು ಯೋಗಪೀಠವನ್ನು ಕೂಡ ಸ್ಥಾಪಿಸಿದ್ದಾರೆ. 
2006ರಲ್ಲಿ ನವದೆಹಲಿಯಲ್ಲಿ ಬಸವ ಧರ್ಮ ಪೀಠದ ಶಾಖೆ ತೆರೆದು ಬಸವ ಮಂಟಪ ಸ್ಥಾಪಿಸುವ ಮೂಲಕ ಬಸವ ತತ್ವವನ್ನು ನಾಡಿಗೆ ಪ್ರಸರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಕೂಡಲ ಸಂಗಮ ಹಾಗೂ ಬಸವ ಕಲ್ಯಾಣದಲ್ಲಿ ಶರಣ ಧರ್ಮ ಪ್ರಚಾರಕ್ಕಾಗಿ ಪ್ರತಿ ವರ್ಷ ಶರಣ ಸಮ್ಮೇಳನ ಹಮ್ಮಿಕೊಳ್ಳುತ್ತಿದ್ದರು. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ನೇತೃತ್ವ ವಹಿಸಿದ್ದ ಮಾತೆ ಮಹಾದೇವಿ, ಭಾರಿ ವಿವಾದಕ್ಕೆ ಸಿಲುಕಿದ್ದರು. ಪ್ರತ್ಯೇಕ ಲಿಂಗಾಯತ ಧರ್ಮ ಆಗುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂಬ ಶಪಥ ಮಾಡಿದ್ದರು. ಇದಕ್ಕೆ ತಮ್ಮದೇ ಧರ್ಮದವರಿಂದ ವಿರೋಧವನ್ನು ಕೂಡ ಎದುರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com