ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಬೆಲೆ ಬಾಳುವ ಆಭರಣಗಳನ್ನು ಪಡೆದು ಹಠಸಂಭೋಗ ಮಾಡಿ ಬಳಿಕ ಸೈನೈಡ್ ನೀಡಿ ಅಮಾಯಕ ಅವಿವಾಹಿತ ಮಹಿಳೆಯರನ್ನು ಕೊಲ್ಲುತ್ತಿದ್ದ ಕುಖ್ಯಾತ ಸರಣಿ ಸ್ತ್ರೀ ಹಂತಕ ಸೈನೈಡ್ ಮೋಹನ್ ಕುಮಾರ್ ಗೆ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಕೊಡಗು ಜಿಲ್ಲೆಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಸೈನೈಡ್ ಮೋಹನ್ ಕುಮಾರ್ ವಿರುದ್ದದ 20 ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಹಿಂದೆ ನ್ಯಾಯಾಲಯ 3 ಪ್ರಕರಣಗಳಲ್ಲಿ ಈತನಿಗೆ ಮರಣದಂಡನೆ ಶಿಕ್ಷೆ ಸಹ ವಿಧಿಸಿದೆ.
ಮೋಹನ್ ಕುಮಾರ್ ತನ್ನನ್ನು ಸುಂದರ ರೈ, ಆನಂದ, ಸುಧಾಕರ್ ಕುಲಾಲ್, ಸುಧಾಕರ ಆಚಾರ್ಯ, ಶಶಿಧರ ಪೂಜಾರಿ, ಮನೋಹರ.ಜಿ, ಶಶಿಧರ ಭಂಡಾರಿ, ಆನಂದ.ಎಸ್ ಹೀಗೆ ವಿವಿಧ ಹೆಸರುಗಳಿಂದ ಪರಿಚಯಿಸಿಕೊಂಡು ರಾಜ್ಯಾದ್ಯಂತ 20 ಜನ ಅವಿವಾಹಿತ ಹೆಣ್ಣು ಮಕ್ಕಳನ್ನು ಪುಸಲಾಯಿಸಿ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಮಾಡುತ್ತಿದ್ದ.
ಇಂತಹ ಅವಿವಾಹಿತರಿಗೆ ಮನೆಯಿಂದ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ತರುವಂತೆ ತಿಳಿಸಿ ಅವರೊಂದಿಗೆ ಮದುವೆಯಾಗುವ ಆಮಿಷ ಒಡ್ಡಿ, ಬೇರೆಡೆಗೆ ಕರೆದುಕೊಂಡು ಹೋಗಿ ಅವರ ಇಚ್ಚೆಗೆ ವಿರುದ್ದವಾಗಿ ಹಠ ಸಂಭೋಗ ಮಾಡುತ್ತಿದ್ದ. ನಂತರ ಅವರನ್ನು ನಂಬಿಸಿ ವಂಚಿಸಿ, ಗರ್ಭ ನಿರೋಧಕ ಔಷಧಿ ಎಂದು ಸೈನೈಡ್ ವಿಷಯುಕ್ತ ರಾಸಾಯನಿಕ ವಸ್ತು ನೀಡಿ ಹತ್ಯೆ ಮಾಡುತ್ತಿದ್ದ. ಬಳಿಕ ಅವರ ಬೆಲೆಬಾಳುವ ಆಭರಣಗಳನ್ನು ಅಪಹರಿಸುವ ಚಾಳಿ ಮೈಗೂಡಿಸಿಕೊಂಡಿದ್ದ.
ಈತ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಕನ್ಯಾನ ಗ್ರಾಮಕ್ಕೆ ಸೇರಿದ್ದು, ಪ್ರಸ್ತುತ ಈ ಆರೋಪಿ ಬೆಳಗಾವಿ ಜಿಲ್ಲೆ, ಹಿಂಡಲಗಾ ಕಾರಾಗೃಹದಲ್ಲಿದ್ದಾನೆ.