ಬೆಂಗಳೂರು: ಗಗನಸಖಿ ಕಿವಿ ಕತ್ತರಿಸಿದ್ದ ರೌಡಿಶೀಟರ್ ಪೋಲೀಸರಿಗೆ ಶರಣು

ಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ಗಗನಸಖಿಯ ಕಿವಿಯನ್ನೇ ಕತ್ತರಿಸಿದ್ದ ಪಾಗಲ್ ಪ್ರೇಮಿ, ರೌಡಿಶೀಟರ್ ನಿನ್ನೆ ತಡರಾತ್ರಿ ತಾನಾಗಿಯೇ ಪೋಲೀಸರ ಮುಂದೆ ಶರಣಾಗಿದ್ದಾನೆ.
ಅಜಯ್
ಅಜಯ್
ಬೆಂಗಳೂರು: ಮದುವೆಯಾಗಲು ಒಲ್ಲೆ ಎಂದಿದ್ದಕ್ಕೆ ಗಗನಸಖಿಯ ಕಿವಿಯನ್ನೇ ಕತ್ತರಿಸಿದ್ದ ಪಾಗಲ್ ಪ್ರೇಮಿ, ರೌಡಿಶೀಟರ್ ನಿನ್ನೆ ತಡರಾತ್ರಿ ತಾನಾಗಿಯೇ ಪೋಲೀಸರ ಮುಂದೆ ಶರಣಾಗಿದ್ದಾನೆ.
ಆರೋಪಿ ಅಜಯ್ ಅಲಿಯಾಸ್ ಜಾಕಿ ಕೋಡಿಗೆಹಳ್ಳಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಘಟನೆ ಹಿನ್ನೆಲೆ
ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ  ಗಗನಸಖಿಯಾಗಿದ್ದ ಯುವತಿಯೊಡನೆ ಸ್ನೇಹ ಬೆಳೆಸಿದ್ದ ಅಜಯ್ ಆಕೆ ತನ್ನನ್ನು ಮದುವೆಯಾಗಬೇಕೆಂದು ಕೋರಿದ್ದಾನೆ. ಆದರೆ ಅಜಯ್ ಕೋರಿಕೆಯನ್ನು ಯುವತಿ ನಿರಾಕರಿಸಿದ್ದು ಈ ಸಂಬಂಧ ಅಜಯ್ ಮನೆಯವರಿಗೆ ಆಕೆ ದೂರಿತ್ತಿದ್ದಳು.
ಆದರೆ ಇಷ್ಟಕ್ಕೂ ಬಗ್ಗದ ಅಜಯ್ ಮತ್ತೆ ಮತ್ತೆ ಆಕೆಯ ಬೆನ್ನು ಬಿದ್ದು ಕಾಡುತ್ತಿದ್ದ. ಇದರಿಂದ ಬೇಸತ್ತ ಆಕೆಯ ಕುಟುಂಬ ಜಾಲಹಳ್ಳಿ ಪೋಲೀಸರಿಗೆ ದೂರಿತ್ತಿದೆ. ಆ ವೇಳೆ ಪೋಲೀಸರು ಅಜಯ್ ಹೆಸರನ್ನು ರೌಡಿಶೀಟರ್ ಪಟ್ಟಿಗೆ ದಾಖಲಿಸಿದ್ದಾರೆ.
ಯುವಕ ಅಜಯ್ ಗೆ ಇದರಿಂದ ಇನ್ನಷ್ಟು ಆಘಾತವಾಗಿದೆ. ಯುವತಿ ಮೇಲೆ ಸೇಡು ತೀರಿಸಿಕೊಳ್ಲಲು ತೀರ್ಮಾನಿಸಿದ್ದಾನೆ.  ಮೇ. 12ರಂದು ಗಗನಸಖಿ ಕ್ಯಾಬ್​ನಲ್ಲಿ ಬರುವ ವೇಳೆ ಕ್ಯಾಬ್ ಅಡ್ಡಗಟ್ಟಿದ ಅಜಯ್ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದ. ಅಲ್ಲದೆ "ನಿನ್ನಿಂದ ನಾನು ರೌಡಿಯಾಗಬೇಕಾಯಿತು" ಎಂದು ಗಗನಸಖಿ ಮೇಲೆ ಸಹ ಹಲ್ಲೆ ಮಾಡಿದ್ದಾನೆ. ಅಲ್ಲದೆ ಮತ್ತೆ ಆಕೆ ತನ್ನನ್ನು ಮದುವೆಯಾಗಬೇಕು ಎಂದು ಒತ್ತಾಯಿಸಿದ್ದಾನೆ. ಆ ವೇಳೆ ಯುವತಿ ಅದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಅಜಯ್ ಆಕೆಯ ಕಿವಿ ಕತ್ತರಿಸಿದ್ದ. 
ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಯುವತಿ ಕುಟುಂಬ ಅಜಯ್ ವಿರುದ್ಧ ಕೋಡಿಗೆಹಳ್ಳಿ ಪೋಲೀಸರಲ್ಲಿ ದೂರು ನೀಡಿತ್ತು. ಪೋಲೀಸರು ಆರೋಪಿಯ ಪತ್ತೆ ಕ್ರಮ ಕೈಗೊಂಡಿದ್ದ ಸಮಯದಲ್ಲೇ ಅಜಯ್ ಗುರುವಾರ ತಡರಾತ್ರಿ ತಾನಾಗಿ ಶರಣಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com