ಬೆಂಗಳೂರು: ಉತ್ತರ ಪ್ರದೇಶದಲ್ಲಿ ಹಿಂದೂ ಸಮಾಜವಾದಿ ಪಕ್ಷದ ಕಮಲೇಶ್ ತಿವಾರಿ ಹತ್ಯೆ ಪ್ರಕರಣದ ಆರೋಪಿಗಳ ಸಂಪರ್ಕ ಹುಬ್ಬಳ್ಳಿವರೆಗೂ ಹರಡಿದಿರುವುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶೇಖ್ ಅಶ್ಫಕ್ ಹುಸೇನ್ ಪ್ರಕರಣದ ಮತ್ತೋರ್ವ ಶಂಕಿತ ನಾಗ್ಪುರದಲ್ಲಿರುವ ಸಯೀದ್ ಆಸೀಮ್ ಅಲಿ ಗೆ ಕರೆ ಮಾಡಿದ್ದ. ಸಯೀದ್ ಆಸೀಮ್ ಅಲಿ ತನಗೆ ಹುಬ್ಬಳ್ಳಿಯಲ್ಲಿ ಸಂಪರ್ಕದಲ್ಲಿದ್ದ ಮೊಹಮ್ಮದ್ ಸಾದಿಕ್ ಕುಪ್ಪೆಲೂರ್ ಗೆ ಕಂಗಾಲಾಗಿ, ಹತ್ಯೆಯ ಆರೋಪಿಗೆ ಸಹಾಯ ಮಾಡುವಂತೆ ಕರೆ ಮಾಡಿದ್ದಾನೆ.
ಹುಬ್ಬಳ್ಳಿಯ ಮೊಹಮ್ಮದ್ ಸಾದಿಕ್ ಗೆ ಕರೆ ಮಾಡಿರುವ ಸಯೀದ್ ಆಸೀಮ್ ಅಲಿ ಆರೋಪಿಯ ಶರಣಾಗತಿಗಾಗಿ ವಕೀಲಕರನ್ನು ನೇಮಕ ಮಾಡಿ ಎಂದು ಕೇಳಿಕೊಂಡಿದ್ದಾನೆ. ಈ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಪಡೆದಿದ್ದು, ತಕ್ಷಣವೇ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಗುಪ್ತಚರ ಇಲಾಖೆಯಿಂದ ಸ್ಪಷ್ಟ ಮಾಹಿತಿ ಪಡೆದ ಕರ್ನಾಟಕದ ಆಂತರಿಕ ಭದ್ರತಾ ವಿಭಾಗ (ಐಎಸ್ ಡಿ) ಮೊಹಮ್ಮದ್ ಸಾದಿಕ್ ನ್ನು ತಿವಾರಿ ಹತ್ಯೆ ಪ್ರಕರಣದಲ್ಲಿ ವಿಚಾರಣೆಗಾಗಿ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಗಿದೆ. ಸಾದಿಕ್ ನಿಂದ ಪಡೆದ ಮಾಹಿತಿಗಳನ್ನು ಉತ್ತರ ಪ್ರದೇಶ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿದೆ.
ಹುಬ್ಬಳ್ಳಿಯ ಸಾದಿಕ್ ಗೆ ಕ್ರಿಮಿನಲ್ ಹಿನ್ನೆಲೆ ಇದ್ದು, 2009-10 ರಲ್ಲಿ ಹುಬ್ಬಳ್ಳಿಯ ಅನೇಕ ಕೋಮುಗಲಭೆ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ.
Advertisement