ಬೆಂಗಳೂರು: ಚಂದ್ರಯಾನ-2 ಅಂತಿಮ ಕ್ಷಣದಲ್ಲಿ ನಿಗದಿತ ಸ್ಥಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗದೆ ವಿಫಲವಾದದ್ದು ಗೊತ್ತೇ ಇದೆ.
ಮೊನ್ನೆ ಸೆಪ್ಟೆಂಬರ್ 07ರಂದು ನಿಗದಿಯಂತೆ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧೃವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿತ್ತು. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾನಾ ಮೂಲೆಯಿಂದ ಆಯ್ದ 60ಕ್ಕೂ ಅಧಿಕ ವಿಧ್ಯಾರ್ಥಿಗಳನ್ನು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಆಹ್ವಾನಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡಿತ್ತು.
ಅಪಾರ ಆಕಾಂಕ್ಷೆ, ನಿರೀಕ್ಷೆ ಇಟ್ಟುಕೊಂಡಿದ್ದ ಇಸ್ರೊ ಅಧ್ಯಕ್ಷ ಡಾ.ಕೈಲಾಸವಡಿವೂ ಶಿವನ್ ಅವರನ್ನು ಪ್ರಧಾನಿ ಮೋದಿಯವರು ಸಂತೈಸಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಸುದ್ದಿಯಾಗಿತ್ತು.
ಇಷ್ಟಾದ ಬೆನ್ನನ್ನೇ ಇಸ್ರೊ ಅಧ್ಯಕ್ಷರ ಹೆಸರಲ್ಲಿ ಹಲವಾರು ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್ ಗಳು ಸೃಷ್ಟಿಯಾಗಿವೆ. ಟ್ವಿಟರ್’ನಲ್ಲಿ ಇಸ್ರೋ ಅಧ್ಯಕ್ಷ ಕೆ. ಸಿವನ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ತೆರದಿದ್ದಾರೆ. ಅಕೌಂಟ್ ತೆರೆದ ಮೊದಲ ದಿನ ಸಾವಿರಾರು ಫಾಲೋವರ್ಸ್ ಗಳಾಗಿದ್ದಾರೆ. ನಕಲಿ ಅಕೌಂಟ್ ಮೂಲಕ ಹತ್ತಾರು ಸುಳ್ಳು ಸುದ್ದಿಗಳು ಸೃಷ್ಟಿಯಾಗಬಹುದು ಎಂದು ಇಸ್ರೊ ಸಂಸ್ಥೆಯೇ ಇದಕ್ಕೆ ಸ್ಪಷ್ಟನೆ ನೀಡಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಕೈಲಾಸವಾಡಿವೂ ಶಿವನ್ ಹೆಸರಿನಲ್ಲಿ ಹಲವು ಖಾತೆಗಳು ಸಕ್ರಿಯವಾಗಿವೆ. ಇಸ್ರೊ ಅಧ್ಯಕ್ಷರು ಯಾವುದೇ ವೈಯಕ್ತಿಕ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹೊಂದಿಲ್ಲ. ಹೀಗಾಗಿ ಅಂತಹ ಖಾತೆಗಳಲ್ಲಿರುವ ಎಲ್ಲಾ ಮಾಹಿತಿಗಳು ನಿಖರವಾಗಿರಲು ಸಾಧ್ಯವಿಲ್ಲ ಎಂದು ಹೇಳಿ ಇಸ್ರೊದ ಅಧಿಕೃತ ಖಾತೆಗಳ ಬಗ್ಗೆ ವಿವರಣೆ ನೀಡಿದೆ.
Advertisement