ನೊಯ್ಡಾ: ಏಪ್ರಿಲ್ 14ರಂದು ಭಾರತದಲ್ಲಿ 21 ದಿನಗಳ ಲಾಕ್ ಡೌನ್ ಮುಗಿಯುತ್ತದೆ, ನಂತರ ಏನು ಮಾಡಲಿದೆ ಸರ್ಕಾರ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ, ದಿನದಿಂದ ದಿನಕ್ಕೆ ಸಾವು, ಸೋಂಕಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಈ ಸಂದರ್ಭದಲ್ಲಿ ಬೆಂಗಳೂರಿನ ನಾರಾಯಣ ಆಸ್ಪತ್ರೆಯ ಅಧ್ಯಕ್ಷ ಡಾ ದೇವಿ ಶೆಟ್ಟಿ, ಲಾಕ್ ಡೌನ್ ನಿಂದ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ನಿರ್ಬಂಧವನ್ನು ಹಂತಹಂತವಾಗಿ ನಿಧಾನವಾಗಿ ತೆಗೆದುಹಾಕಬೇಕು ಎಂದು ಹೇಳಿದ್ದಾರೆ.
ಲಾಕ್ ಡೌನ್ ಮುಗಿದ ನಂತರ ಸರ್ಕಾರ ಗುರುತಿಸಿರುವ ಹಾಟ್ ಸ್ಪಾಟ್ ಗಳನ್ನು ಸೀಲ್ ಮಾಡಬೇಕು. ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಉಳಿದ ಭಾಗಗಳಲ್ಲಿ ನಿರ್ಬಂಧವನ್ನು ನಿಧಾನವಾಗಿ ತೆಗೆದುಹಾಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾ ಆರಂಭದ ಹಂತದಲ್ಲಿಯೇ ಎಚ್ಚೆತ್ತುಕೊಂಡು ಲಾಕ್ ಡೌನ್ ಮಾಡಿದ್ದರಿಂದ ಭಾರತದಲ್ಲಿ ಸಾವಿನ ಸಂಖ್ಯೆ ಶೇಕಡಾ 50ರಷ್ಟು ಕಡಿಮೆಯಾಗಿದೆ. ಕೆಲ ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪರಿಸ್ಥಿತಿ ಅಷ್ಟೊಂದು ವಿಕೋಪಕ್ಕೆ ಹೋಗಿಲ್ಲ. ನಿರ್ಬಂಧವನ್ನು ನಿಧಾನವಾಗಿ ತೆಗೆದು ಅಸಂಪ್ರದಾಯಿಕ ಕಾರ್ಯತಂತ್ರಗಳನ್ನು ಅಳವಡಿಸಬೇಕು ಎಂದಿದ್ದಾರೆ.
ಹಾಟ್ ಸ್ಪಾಟ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಲಾಕ್ ಡೌನ್ ಮುಂದುವರಿಸುವುದಕ್ಕೆ ಯಾವುದೇ ವೈದ್ಯಕೀಯ ಕಾರಣಗಳಿಲ್ಲ. ಕರ್ನಾಟಕದಲ್ಲಿ ಸಾರ್ವಜನಿಕ ಸಾರಿಗೆಯನ್ನು ಶೇಕಡಾ 50ರ ಜನ ಪ್ರಮಾಣದಲ್ಲಿ ಆರಂಭಿಸಬೇಕು. ಅಂಗಡಿ-ಮುಂಗಟ್ಟುಗಳು ಬೆಳಗ್ಗೆ ತಡ ಸಮಯದವರೆಗೂ ತೆರೆದಿರಬೇಕು, ಇದರಿಂದ ಜನದಟ್ಟಣೆಯನ್ನು ನಿಯಂತ್ರಿಸಬಹುದು ಎಂದು ಡಾ ದೇವಿಶೆಟ್ಟಿ ಹೇಳಿದ್ದಾರೆ.
Advertisement