ಮೈಸೂರು: ಸಹಕಾರ ಸಚಿವ ಹಾಗೂ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇಂದು ಬೆಳ್ಳಂಬೆಳಗ್ಗೆ ಮೈಸೂರು ನಗರ ಪ್ರದಕ್ಷಿಣೆ ಹಾಕಿದರು.
ಎಪಿಎಂಸಿಗೆ ಭೇಟಿ ನೀಡಿ ರೈತರು ಹಾಗೂ ವರ್ತಕರ ಅಹವಾಲು ಆಲಿಸಿದ ಸಚಿವರು, ಕೊರೋನಾ ಸೋಂಕು ನಿವಾರಕ ಟನಲ್ ಅನ್ನು ಉದ್ಘಾಟನೆ ಮಾಡಿದರು.
ಪೊಲೀಸರು ಸೇರಿದಂತೆ ಯಾರಿಂದಲೂ ರೈತರಿಗೆ ಸಮಸ್ಯೆ ಆಗಬಾರದು ಎಂಬುದು ಮುಖ್ಯಮಂತ್ರಿಗಳ ಉದ್ದೇಶ ಸಹ. ಹೀಗಾಗಿ ಖುದ್ದು ನಾನೇ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದೇನೆ. ಎಪಿಎಂಸಿಗೆ ಶೀಥಲೀಕರಣ ಘಟಕ ಸ್ಥಾಪಿಸುವ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗದಿರುವ ತರಕಾರಿಗಳನ್ನ ಸರ್ಕಾರದಿಂದಲೇ ಖರೀದಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಇದಕ್ಕೂ ಮುನ್ನ ಇಲ್ಲಿನ ಸುತ್ತೂರು ಮಠಕ್ಕೆ ಭೇಟಿ ಕೊಟ್ಟು ಜಗದ್ಗುರು ಶ್ರೀ ಶಿವರಾತ್ರಿದೇಶೀಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ಮಾಜಿ ಸಚಿವ ಎಚ್. ವಿಶ್ವನಾಥ್, ಸಂಸದ ಪ್ರತಾಪ್ ಸಿಂಹ ಜೊತೆಗಿದ್ದರು.ಬಳಿಕ ಸುತ್ತೂರು ಮಠದ ಮೈಸೂರು ಶಾಖೆಗೆ ಸಚಿವರು ಭೇಟಿ ನೀಡಿ ಜಗದ್ಗುರು ಶಿವರಾತ್ರಿದೇಶೀಕೇಂದ್ರ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಈ ವೇಳೆ ಮಾತನಾಡಿದ ಸ್ವಾಮೀಜಿ, ಕೊರೋನಾ ಸೋಂಕು ಆದಷ್ಟು ಬೇಗ ತೊಲಗಬೇಕು. ಸರ್ಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಶ್ಲಾಘಿಸಿದರು.
ಬಳಿಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮೈಸೂರು ಚಾಮರಾಜನಗರ ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿಯ ಮಠಾಧಿಪತಿಗಳು ನೀಡಿರುವ ದೇಣಿಗೆ 1.50 ಲಕ್ಷ ರೂ. ಚೆಕ್ ಅನ್ನು ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಜಗದ್ಗುರುಗಳ ಸಮ್ಮುಖದಲ್ಲಿ ಸಹಕಾರ ಸಚಿವರಿಗೆ ಹಸ್ತಾಂತರ ಮಾಡಲಾಯಿತು.
Advertisement