ಕೊರಟಗೆರೆ: ಕೊರಟಗೆರೆ ಕ್ಷೇತ್ರದ ಎಲ್ಲ ಹೋಬಳಿ ಕೇಂದ್ರಗಳಿಗೆ ಬುಧವಾರ ಭೇಟಿ ನೀಡಿದ್ದ ಮಾಜಿ ಡಿಸಿಎಂ ಜಿ ಪರಮೇಶ್ವರ್ ಕೊವಿಡ್-19 ಹಿನ್ನೆಲೆಯಲ್ಲೆ ಏನೆಲ್ಲ ಕ್ರಮ ವಹಿಸಲಾಗಿದೆ ಎಂದು ಪರಿಶೀಲಿಸಿದರು.
ಹೊರಗಿನಿಂದ ತಾಲ್ಲೂಕಿಗೆ ಬಂದವರ ಮಾಹಿತಿ, ಅಂಕಿ– ಅಂಶ ನೀಡದ ಕಾರಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. `ಹೇ.. ನಾನು ಕೇಳಿದಕ್ಕಷ್ಟೇ ಉತ್ತರ ಕೊಡ್ರಿ. ಇಲ್ಲಿಯವರೆಗೂ ಏನೇನ್ ಮಾಡಿದ್ದೀರಿ ಅಂಕಿ ಅಂಶ ಕೊಡಿ. ಯೂಸ್ಲೆಸ್ ಫೆಲೊಸ್ ತಂದು’ ಎಂದು ಶಾಸಕ ಡಾ.ಜಿ.ಪರಮೇಶ್ವರ ಅಧಿಕಾರಿಗಳ ವಿರುದ್ಧ ಗರಂ ಆದರು.
20 ದಿನಗಳ ಹಿಂದೆ ಕ್ಷೇತ್ರಕ್ಕೆ ಬಂದಾಗ 9 ಸಾವಿರ ಜನ ತಾಲ್ಲೂಕಿಗೆ ಬೇರೆ ಬೇರೆ ಕಡೆಯಿಂದ ಬಂದಿದ್ದಾರೆ ಎಂದು ಮಾಹಿತಿ ನೀಡಲಾಗಿತ್ತು. ಬಂದವರ ವೈಯಕ್ತಿಕ ಮಾಹಿತಿ ಕಲೆ ಹಾಕುವಂತೆ ಸೂಚಿಸಿದ್ದರೂ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಬಂದವರ ಹೆಸರು, ವಿಳಾಸ, ಅಂಕಿ ಅಂಶಗಳನ್ನು ನೀಡದ ಕಾರಣ ಕೋಪಗೊಂಡ ಶಾಸಕರು, ‘ಅಧಿಕಾರಿಗಳು ಈ ಸಂದರ್ಭದಲ್ಲಿ ಬೇಜವಾಬ್ದಾರಿ ತೋರಿದರೆ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಶಾಸಕರು ಊಟ ವಿತರಿಸುವುದನ್ನು ನಿಲ್ಲಿಸುವಂತೆ ಕಟ್ಟಪ್ಪಣೆ ಮಾಡಿದ್ದ ತಹಶೀಲ್ದಾರ್ಗೆ ತರಾಟೆ ತೆಗೆದುಕೊಂಡರು. ನಿರ್ಗತಿಕರ ಪಟ್ಟಿ ತಯಾರಿಸಿ ಕೂಡಲೇ ಅವರಿಗೆ ದವಸ, ಧಾನ್ಯದ ವ್ಯವಸ್ಥೆ ಮಾಡಿ. ಖಾಸಗಿಯವರು ಮಾನವೀಯತೆಯಿಂದ ನಿರ್ಗತಿಕರಿಗೆ ಊಟ ನೀಡುವ ಕೆಲಸ ಮಾಡುತ್ತಿರುವುದನ್ನು ತಡೆಯಬಾರದು. ಅವರಿಗೆ ಸಹಕಾರ ನೀಡಿ ಎಂದು ಸೂಚಿಸಿದರು.
Advertisement