ಲಾಕ್ ಡೌನ್: ಶೇ.50ರಷ್ಟು ಐಟಿ-ಬಿಟಿ ಸಿಬ್ಬಂದಿಗೆ ಅನುಮತಿ ಕುರಿತು ಏ.20ರ ನಂತರ ನಿರ್ಧಾರ - ಸಿಎಂ ಯಡಿಯೂರಪ್ಪ
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ(ಐಟಿ, ಬಿಟಿ) ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಬಗ್ಗೆ ಏಪ್ರಿಲ್ 20ರ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ಹೇಳಿದ್ದಾರೆ.
ಕೊವಿಡ್ -19 ಪ್ರಕರಣ ಕಳೆದ ಮೂರು ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾದ ಹಿನ್ನಲೆಯಲ್ಲಿ, ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರದ ಸಂಬಂಧಪಟ್ಟ ಸಚಿವರು, ಹಿರಿಯ ಅಧಿಕಾರಿಗಳು, ತಜ್ಞ ವೈದ್ಯರ ಜೊತೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಲಾಕ್ ಡೌನ್ ಸಡಲಿಗೊಳಿಸಿದ ನಂತರ ಪ್ರಕರಣ ಹೆಚ್ಚದಂತೆ ನಿಭಾಯಿಸಲು ತೀರ್ಮಾನಿಸಲಾಯಿತು, ಲಾಕ್ ಡೌನ್ ಸಡಿಲಿಕೆ ಸಂದರ್ಭದಲ್ಲಿ ಕಂಪನಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲು ತಜ್ಞರು ಅಭಿಪ್ರಾಯ ಕೊಟ್ಟಿದ್ದು ಅದರಂತೆ ಲಾಕ್ ಡೌನ್ ನಂತರ ಯಾವ ರೀತಿ ಮುನ್ನಡೆಯಬೇಕು ಎನ್ನುವ ಕುರಿತು ಮಾರ್ಗಸೂಚಿ ರಚಿಸಲು ತೀರ್ಮಾನಿಸಲಾಯಿತು. ಏಪ್ರಿಲ್ 20 ರಂದು ಮತ್ತೊಂದು ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಇಂದು ಮತ್ತೆ ಹಲವಾರರು ಪ್ರಕರಣ ಪತ್ತೆಯಾಗಿದ್ದು, ಸೋಂಕು ಪತ್ತೆ ವಿಧಾನಕ್ಕ ಹೆಚ್ಚು ಆದ್ಯತೆ ನೀಡಲು ಸೂಚನೆ ನೀಡಲಾಗಿದೆ, ರೋಗ ಲಕ್ಷಣ ಕಂಡು ನಾಲ್ಕೈದು ದಿನದ ನಂತರ ಬರುತ್ತಿದ್ದಾರೆ. ಆದರೆ ಲಕ್ಷಣ ಕಂಡ ಕೂಡಲೇ ವೈದ್ಯರ ಸಂಪರ್ಕಿಸಬೇಕಾಗುತ್ತದೆ. ಇಷ್ಟಾದರೂ ಇಡೀ ದೇಶದಲ್ಲಿ ಸೋಂಕು ಪತ್ತೆ ವಿಧಾನದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇರಳದಲ್ಲಿ 47.16 ರಷ್ಟು ಪತ್ತೆಯಾಗುತ್ತಿದ್ದರೆ ರಾಜ್ಯದಲ್ಲಿ ಶೇ. 43 ರಲ್ಲಿ 1ಪಾಸಿಟಿವ್ ಬರುತ್ತಿದೆ. ಇದು ಸ್ವಲ್ಪ ಸಮಾಧಾನ ತರುವ ಸಂಗತಿಯಾಗಿದೆ ಈವರೆಗೆ 17168 ಪರೀಕ್ಷೆ ಮಾಡಲಾಗಿದೆ ಎಂದರು.
1 ಲಕ್ಷ ರಾಪಿಡ್ ಟೆಸ್ಟ್ ಕಿಟ್ ಗೆ ಆರ್ಡರ್ ನೀಡಲಾಗಿದೆ. ಆದರೆ ನಾವು ನಡೆಸುತ್ತಿರುವ ರಿಯಲ್ಟೈಮ್ ಪಿಸಿಆರ್ ಟೆಸ್ಟ್ ಶೇ. 100 ರ ಖಚಿತತೆ ಇದೆ, ಈಗ ರ್ಯಾಪಿಡ್ ಟೆಸ್ಡ್ ಕೇವಲ ಆಂಟಿ ಬಾಡಿ ಕುರಿತು ಪ್ರಾಥಮಿಕ ಪತ್ತೆಗೆ ಮಾತ್ರ ಬಳಸಿಕೊಳ್ಳಲಾಗುತ್ತದೆ ಎಂದರು.
ಯುಸಿಯುನಲ್ಲಿ ರೋಗಿಗಳಿಗಾಗಿ ವಿಶೇಷ ಚಿಕಿತ್ಸೆ ನೀಡಲು ಸೂಚನೆ ನೀಡಲಾಗಿದೆ, ಪ್ಲಾಸ್ಮ ಚಿಕಿತ್ಸೆಗೆ ಅನುಮತಿ ಕೋರಿ ಮನವಿ ಮಾಡಿದ್ದು, ಐಸಿಎಂ ಆರ್ ಅನುಮತಿಗಾಗಿ ಕಾಯುತ್ತಿದ್ದೇವೆ.ಯಾವುದೇ ಪ್ರಕರಣ ಇರದ ಜಿಲ್ಲೆಯಲ್ಲೂ ಈ ಲಕ್ಷಣದ ತಪಾಸಣೆ ನೀಡಲು ಸೂಚನೆ ನೀಡಲಾಗಿದೆ. 11 ಜಿಲ್ಲೆಗಳಲ್ಲಿ ಯಾವುದೇ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ಆದರೆ ತಪಾಸಣೆ ನಡೆಸಿದಾಗಲೇ ವಾಸ್ತವ ಸ್ಥಿತಿ ಗೊತ್ತಾಗಲಿದೆ, ಏಪ್ರಿಲ್ ಅಂತ್ಯದೊಳಗೆ ಹೊಸದಾಗಿ 10 ಪ್ರಯೋಗಾಲಯ ಆರಂಭಕ್ಕೆ ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಅಕ್ರಮ ಸಕ್ರಮ ಕುರಿತು ಚರ್ಚೆ ನಡೆಸಲಾಯಿತು, ಹಲವು ಅನಧಿಕೃತ ಬಡವಾಣೆ, ಕಟ್ಟಡಗಳಿಗೆ ಈಗಾಗಲೇ ಸರ್ಕಾರ ಮೂಲಸೌಕರ್ಯ ಕಲ್ಪಿಸಿದೆ. ಆದರೆ ಸರ್ಕಾರಕ್ಕೆ ತೆರಿಗೆ ಬರುತ್ತಿಲ್ಲ. ಹಾಗಾಗಿ ಅವುಗಳ ಸಕ್ರಮದ ಮೂಲಕ ರಾಜಸ್ವ ಸಂಗ್ರಹದ ಉದ್ದೇಶವನ್ನು ಹೊಂದಿದ್ದೇವೆ ಬೆಂಗಳೂರಿನಲ್ಲಿ,2.93 ಲಕ್ಷ ಅಂದಾಜು ಅಕ್ರಮ ಕಟ್ಟಡ, ರಾಜ್ಯದಲ್ಲಿ 35 ಲಕ್ಷ ಅಕ್ರಮಕಟ್ಟಡ ಇರುವ ಅಂದಾಜಿದೆ. ಇತರ ರಾಜ್ಯ ಯಾವ ರೀತಿ ದಂಡ ವಿಧಿಸಿ ಸಕ್ರಮ ಮಾಡಿವೆ ಎನ್ನುವ ಕುರಿತು ಅಧ್ಯಯನ ನಡೆಸಿ ನಂತರ ಅಂತಿಮ ತೀರ್ಮಾನ ಮಾಡಲಾಗುತ್ತದೆ ಇದಕ್ಕಾಗಿ ನಗರಾಭಿವೃದ್ಧಿ ಇಲಾಖೆ ಒಂದು ವಾರದಲ್ಲಿ ಹೊಸ ಮಾರ್ಗಸೂಚಿ ರಚಿಸಲಿದೆ ಎಂದು ತಿಳಿಸಿದರು.
ಸಣ್ಣ ಕೈಗಾರಿಕೆ ಆರಂಭದ ಮಾಡುವ ಬೇಡಿಕೆ ಕುರಿತು ಚರ್ಚೆ ನಡೆಸಿದ್ದೇವೆ. ಜೊತೆಗೆ ಕಟ್ಟಡ ಕಾರ್ಮಿಕರಿಗೆ ಅವರು ಕೆಲಸ ಮಾಡುವ ಸ್ಥಳದಲ್ಲೇ ಅವರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ ಕೆಲಸ ಆರಂಭಕ್ಕೆ ಅವಕಾಶ ನೀಡುವ ಚಿಂತನೆ ಇದೆ. ಪರಿಸ್ಥಿತಿ ಸೂಕ್ತವಾಗಿದ್ದರೆ ಎಲ್ಲವೂ 20 ರಂದು ಅಂತಿಮ ನಿರ್ಧಾರವಾಗಲಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ