ಮಂಡ್ಯ: ರಸ್ತೆಯಲ್ಲಿ ಬಿದ್ದಿದ್ದ ೫೦೦ ರೂ. ಮುಖ ಬೆಲೆಯ ನೋಟುಗಳನ್ನು ಕೊರೋನಾ ಭೀತಿಯಿಂದಾಗಿ ಮುಟ್ಟದೆ ಜನತೆ ಭಯಭೀತರಾದ ಘಟನೆ ಪಾಂಡವಪುರ ಪಟ್ಟಣದಲ್ಲಿಂದು ಜರುಗಿದೆ.
ಪಾಂಡವಪುರ ಪಟ್ಟಣದ ಗಾಣಿಗರ ಬೀದಿಯಲ್ಲಿ ೫೦೦ ರೂಪಾಯಿ ಮುಖಬೆಲೆಯ ೬ ನೋಟುಗಳು ಬಿದ್ದಿದ್ದರೂ ಕೂಡಾ ಜನರು ಅದನ್ನು ತಗೆದುಕೊಳ್ಳದೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು.
ಸ್ಥಳಕ್ಕಾಗಮಿಸಿದ ಪಟ್ಟಣ ಠಾಣೆಯ ಪಿಎಸ್ಐ ಸುಮಾರಾಣಿ ಸೂಕ್ಷ್ಮವಾಗಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ನೋಟಿನ ಮೇಲೆ ಸ್ಯಾನಿಟೈಜರ್ ಸಿಂಪಡಿಸಿ, ಕೈಗೆ ಗ್ಲೌಸ್ ಧರಿಸಿ ನೋಟು ಎತ್ತಿಕೊಂಡು ಹೋದರು. ಬಳಿಕ ಸ್ಥಳಿಯರು ನಿಟ್ಟುಸಿರು ಬಿಟ್ಟರು.
ಈ ಹಣವನ್ನು ಯಾರೋ ಆಕಸ್ಮಿಕವಾಗಿ ಬೀಳಿಸಿಕೊಂಡಿದ್ದು, ಯಾವುದೇ ಸುಳ್ಳು ಸುದ್ದಿಗೆ ಜನತೆ ಕಿವಿಗೊಡಬಾರದು, ಹಣ ಕಳೆದುಕೊಂಡವರು ಯಾರಾದರೂ ಇದ್ದರೆ ಠಾಣೆಗೆ ಬಂದು ಪಡೆಯಲು ಪಿಎಸ್ಐ ಸುಮಾರಾಣಿ ತಿಳಿಸಿದ್ದಾರೆ.
ಐದು ರೂಪಾಯಿ ನಾಣ್ಯ ರಸ್ತೆಯಲ್ಲಿ ಬಿದ್ದಿದ್ದರೆ ಬಿಡದ ಜನರೀಗ ಕೊರೋನಾ ವೈರಸ್ ಭೀತಿಯಿಂದಾಗಿ ಐದು ನೂರು ರೂಪಾಯಿ ಕಂಡರೂ ಹೆದರುವ ಕಾಲ ಬಂದಿದೆ.
-ನಾಗಯ್ಯ
Advertisement