ಬೆಂಗಳೂರು: ಕೊರೊನಾ ಲಾಕ್ಡೌನ್ನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಸರ್ಕಾರದ ಬೊಕ್ಕಸ ತುಂಬಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬುಧವಾರ ಕಷ್ಣಾದಲ್ಲಿ ಬಿಡಿಎ ಸಕ್ರಮೀಕರಣ ಉಪಸಮಿತಿ ಸಭೆಯಲ್ಲಿ ಅಧಿಕಾರಿಗಳು ಕೆಲವೊಂದು ಮಹತ್ವದ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಬಿಡಿಎ ವ್ಯಾಪ್ತಿಯಲ್ಲಿರುವ ಅಕ್ರಮವಾಗಿ ನಿರ್ಮಿಸಿರುವ ಮನೆಗಳು ಹಾಗೂ ಕಟ್ಟಡಗಳನ್ನು ಸಕ್ರಮದಡಿ ತಂದು ದಂಡ ವಸೂಲಿ ಮಾಡುವುದು, ನಕ್ಷೆ ಉಲ್ಲಂಘಿಸಿರುವ ಪ್ರಕರಣಗಳಿಂದಲೂ ದಂಡ ವಸೂಲಿ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಇದನ್ನು ತಕ್ಷಣವೇ ಜಾರಿಗೆ ತಂದರೆ ಲಾಕ್ ಡೌನ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆದಾಯ ದೊರಕುವ ಮೂಲಕ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ಅಧಿಕಾರಿಗಳು ಸಿಎಂಗೆ ಸಲಹೆ ನೀಡಿದ್ದಾರೆ.
ಸರ್ಕಾರ ಈ ನಿರ್ಧಾರವನ್ನು ಜಾರಿಗೊಳಿಸಿದರೆ ಸುಮಾರು 20 ಸಾವಿರ ಕೋಟಿಯಷ್ಟು ಆದಾಯ ಸಿಗಬಹುದು ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 1980 ರಿಂದ ಉತ್ತರಾರ್ಧದಲ್ಲಿ 1973 ರಿಂದ 1986 ರವರೆಗಿನ ಒತ್ತುವರಿ ಕ್ರಮಬದ್ಧಗೊಳಿಸಲು ಇದೇ ರೀತಿಯ ಕ್ರಮ ಕೈಗೊಳ್ಳಲಾಯಿತು.
75 ಸಾವಿರ ಅಕ್ರಮ ಅಸ್ತಿಗಳಿದದ್ದು ಬಿಡಿಎ ನಿಯಮಕ್ಕೆ ತಿದ್ದುಪಡಿ ತಂದು ಬೊಕ್ಕಸಕ್ಕೆ ಹಣ ತುಂಬಲು ನಿರ್ಧರಿಸಿದ್ದಾರೆ. ಈ ಸಂಬಂಧ ಇನ್ನು 2-3 ದಿನಗಳಲ್ಲಿ ಎಲ್ಲಾ ರೀತಿಯ ಮಾಹಿತಿ ನೀಡಬೇಕೆಂದು ಸಿಎಂ ಸೂಚಿಸಿದ್ದಾಗಿ ಬಿಡಿಎ ಆಯುಕ್ತ ಜಿಸಿ ಪ್ರಕಾಶ್ ತಿಳಿಸಿದ್ದಾರೆ. ಆದರೆ ಕೆಲವು ಹಿರಿಯ ಸಚಿವರು ಇದಕ್ಕೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದು ಇದನ್ನು ಜಾರಿಗೊಳಿಸುವುದರಿಂದ ಇಷ್ಟು ಪ್ರಮಾಣದ ಆದಾಯ ನಿರೀಕ್ಷೆ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ ಎಂಬ ಮಾಹಿತಿ ಇದೆ.
ಈ ನಿಟ್ಟಿನಲ್ಲಿ ಸಭೆಯಲ್ಲಿ ಯಾವುದೇ ನಿರ್ಧಾರವನ್ನು ಕೈಗೊಳ್ಳಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಸೂಕ್ತ ಪ್ರಸ್ತಾವನೆಯೊಂದಿಗೆ ಬರುವಂತೆ ಬಿಡಿಎ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಎಸ್ ಎಂ ಕೃಷ್ಣ ಸಿಎಂ ಆಗಿದ್ದಾಗ ಇದೇ ರೀತಿ ನಿರ್ಧಾರ ಕೈಗೊಳ್ಳಲಾಗಿತ್ತು, ಆದರೆ ಅನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳಿಸಲಿಲ್ಲ ಎಂದು ಹೇಳಲಾಗಿದೆ
Advertisement