'ಕ್ವಾರಂಟೈನ್ ವಾಚ್ ಆಪ್'ನಲ್ಲಿ ಲೋಪದೋಷ: ಮಾಹಿತಿ ಕಲೆಹಾಕಲು ನಾಗರಿಕ ಕ್ವಾರಂಟೈನ್ ತಂಡಕ್ಕೆ ಹರಸಾಹಸ

ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ನಾಗರಿಕ ಕ್ವಾರಂಟೈನ್ ಸ್ಕ್ವಾಡ್(ಸಿಕ್ಯುಎಸ್) ಕಾರ್ಯಕರ್ತರು ಹೋಂ ಕ್ವಾರಂಟೈನ್ ಗೆ ಒಳಪಡಬೇಕಾದವರನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ.
ಶಿವಾಜಿನಗರದಲ್ಲಿ ಸೀಲ್ ಮಾಡಿದ ಪ್ರದೇಶದ ಮುಂದೆ ವಾಹನಗಳನ್ನು ನಿಲ್ಲಿಸಿರುವುದು
ಶಿವಾಜಿನಗರದಲ್ಲಿ ಸೀಲ್ ಮಾಡಿದ ಪ್ರದೇಶದ ಮುಂದೆ ವಾಹನಗಳನ್ನು ನಿಲ್ಲಿಸಿರುವುದು
Updated on

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ನಾಗರಿಕ ಕ್ವಾರಂಟೈನ್ ಸ್ಕ್ವಾಡ್(ಸಿಕ್ಯುಎಸ್) ಕಾರ್ಯಕರ್ತರು ಹೋಂ ಕ್ವಾರಂಟೈನ್ ಗೆ ಒಳಪಡಬೇಕಾದವರನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದರೆ ಕ್ವಾರಂಟೈನ್ ವಾಚ್ ಆಪ್ ಸರಿಯಾಗಿ ಕೆಲಸ ಮಾಡದಿರುವುದರಿಂದ ಹೋಂ ಕ್ವಾರಂಟೈನ್ ಗೆ ಒಳಪಡಬೇಕಾದವರನ್ನು ಮತ್ತು ಒಳಗಾದವರನ್ನು ಹುಡುಕುವುದು ಕಾರ್ಯಕರ್ತರಿಗೆ ಕಷ್ಟವಾಗುತ್ತಿದೆ.

ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿರುವ ಈ ಆಪ್ ನಲ್ಲಿ ಹೋಂ ಕ್ವಾರಂಟೈನ್ ಗೆ ಒಳಪಡಬೇಕಾದವರು ತಮ್ಮ ಸೆಲ್ಫಿಗಳನ್ನು ತೆಗೆದು ತಾವು ಪ್ರತ್ಯೇಕವಾಗಿ ನೆಲೆಸಿದ್ದೇವೆಯೇ, ನಿಯಮ ಪಾಲಿಸುತ್ತಿದ್ದೇವೆಯೇ ಎಂದು ಬಿಬಿಎಂಪಿಗೆ ಮಾಹಿತಿ ನೀಡಬೇಕು. ಆದರೆ ಅನೇಕರು ಈ ಆದೇಶ ಮೀರುತ್ತಿರುವುದರಿಂದ ಹೋಂ ಕ್ವಾರಂಟೈನ್ ಗೆ ಒಳಪಡಬೇಕಾದವರನ್ನು ಪತ್ತೆಹಚ್ಚಲು ಕಾರ್ಯಕರ್ತರ ತಂಡ ರಚಿಸಲಾಯಿತು. ಆದರೆ ಆಪ್ ನಲ್ಲಿ ಇದೀಗ ಸಮಸ್ಯೆಯಿರುವುದರಿಂದ ಕಾರ್ಯಕರ್ತರಿಗೂ ಕಷ್ಟವಾಗುತ್ತಿದೆ.

ಆಪ್ ಹಠಾತ್ತನೆ ಕ್ರಾಶ್ ಆಗಿ ಮತ್ತೆ ಸ್ಟಾರ್ಟ್ ಆಗುವುದರಿಂದ ಅಂಕಿಅಂಶ ಸಲ್ಲಿಕೆ ಕಷ್ಟವಾಗುತ್ತಿದೆ. ಆಂಡ್ರೋಯ್ಡ್ ಫೋನ್ ನಲ್ಲಿ ಮಾತ್ರ ಈ ಸೌಲಭ್ಯ ಇರುವುದರಿಂದ ಐಒಎಸ್ ನಲ್ಲಿ ಸಾಧ್ಯವಾಗುವುದಿಲ್ಲ. ಆಪ್ ನಲ್ಲಿ ಅಂಕಿಅಂಶ ತಪ್ಪು ಬರುತ್ತದೆ, ನಕಲಿ ಹೆಸರುಗಳು, ಲೋಪದೋಷ ಹೊಂದಿದ ಫೋನ್ ನಂಬರ್ ಗಳು, ವಿಳಾಸಗಳು ಬರುತ್ತವೆ ಎಂದು ಕಾರ್ಯಕರ್ತರು ಹೇಳುತ್ತಾರೆ.

ಇದುವರೆಗೆ 23 ಸಾವಿರ ಕಾರ್ಯಕರ್ತರು ದಾಖಲಾತಿ ಮಾಡಿಕೊಂಡಿದ್ದರೂ 13,500 ಮಂದಿ ಕಾರ್ಯಕರ್ತರು ಮಾತ್ರ ಸಕ್ರಿಯರಾಗಿದ್ದಾರೆ. ಆಪ್ ನಲ್ಲಿ ಲೋಪದೋಷ ಕಂಡುಬಂದ ನಂತರ ಮತ್ತೆ 3 ಸಾವಿರ ಮಂದಿ ಕಾರ್ಯಕರ್ತರು ಕಡಿಮೆಯಾಗಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಕಾರ್ಯಕರ್ತರೊಬ್ಬರು ಹೇಳುತ್ತಾರೆ.

ಯಲಹಂಕ ವಲಯದ ಕಾರ್ಯಕರ್ತರೊಬ್ಬರು, ನಾವು ಪ್ರತಿ ಮನೆಗೆ ಹೋಗಿ ಹೋಂ ಕ್ವಾರಂಟೈನ್ ನಲ್ಲಿ ಯಾರ್ಯಾರಿದ್ದಾರೆ ಎಂದು ನೋಡಿ ಕ್ವಾರಂಟೈನ್ ಸ್ಟಿಕರ್ ಫೋಟೋ ಕ್ಲಿಕ್ ಮಾಡಬೇಕು. ಆದರೆ ನಾವು ಅವರ ಮನೆಗೆ ತಲುಪಿದಾಗ ಆಪ್ ಸಿಗುವುದಿಲ್ಲ, ಅಂಕಿಅಂಶ ಅಪ್ ಲೋಡ್ ಮಾಡಲು ಸಹ ಸಾಧ್ಯವಾಗುವುದಿಲ್ಲ ಎಂದು ಸಮಸ್ಯೆ ಹೇಳಿಕೊಂಡರು.

ಇಂಟರ್ನೆಟ್ ವಿಳಂಬವಾದಾಗ ಆಪ್ ರಿಸ್ಟಾರ್ಟ್ ಆಗಿ ಗೂಗಲ್ ಮ್ಯಾಪ್ ಲೋಡ್ ಮಾಡಲು ಆಗುವುದಿಲ್ಲ ಎಂದು ಮಡಿವಾಳ ಮತ್ತು ಬೆಳ್ಳಂದೂರು ವಲಯಗಳ ಕಾರ್ಯಕರ್ತರು ಹೇಳುತ್ತಾರೆ. ಸಬ್ ಮಿಟ್ ಬಟನ್ ಕೂಡ ಬಹುತೇಕ ಸಮಯಗಳಲ್ಲಿ ಕೆಲಸ ಮಾಡುವುದಿಲ್ಲ. ಆಪ್ ಹಠಾತ್ತನೆ ಬ್ಲಾಂಕ್ ಆಗುತ್ತದೆ, ಆಗ ಫೋನನ್ನು ಸ್ವಿಚ್ ಆಫ್ ಮಾಡಿ ಆನ್ ಮಾಡಬೇಕಾಗುತ್ತದೆ. ಅರ್ಧ ಸಮಯ ಅದರಲ್ಲಿಯೇ ಕಳೆದುಹೋಗುತ್ತದೆ. ಇದನ್ನು ನಾವು ಕೋರ್ ಕಮಿಟಿಯ ಗಮನಕ್ಕೆ ತಂದಿದ್ದೇವೆ ಎಂದು ಕಾರ್ಯಕರ್ತರೊಬ್ಬರು ಹೇಳುತ್ತಾರೆ.

ರಾಜ್ಯ ಕೋವಿಡ್ ವಾರ್ ರೂಂನ ಉಸ್ತುವಾರಿ ಮುನೀಶ್ ಮೌದ್ಗಿಲ್, ಹೌದು ಆಪ್ ನ ಬಗ್ಗೆ ಸಾಕಷ್ಟು ದೂರುಗಳು ಕಾರ್ಯಕರ್ತರಿಂದ ಬಂದಿದೆ. ನಾವು ಹೊಸ ಆಪ್ ನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಬ್ಯಾಕೆಂಡ್ ಅಪ್ ಗ್ರೆಡೇಶನ್ ಕೆಲಸ ಕೂಡ ಪ್ರಗತಿಯಲ್ಲಿದೆ. ಸಮಸ್ಯೆಯಿರುವುದು ಶೇ.50ರಷ್ಟು ಹೋಂ ಕ್ವಾರಂಟೈನ್ ಮಂದಿ ತಪ್ಪು ವಿಳಾಸ ಕೊಟ್ಟಿದ್ದಾರೆ. ಕಾರ್ಯಕರ್ತರು ತಮಗೆ ಸಿಕ್ಕಿರುವ ಮಾಹಿತಿ ಆಪ್ ನಲ್ಲಿ ಅಪ್ ಲೋಡ್ ಮಾಡುತ್ತಾರೆ. ಇನ್ನು ನಾವು ಆಪ್ ನಲ್ಲಿ ಪ್ರತ್ಯೇಕ ಪಟ್ಟಿಯನ್ನು ಸಿದ್ದಪಡಿಸಲು ಮುಂದಾಗಿದ್ದೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com