ವಿಜಯಪುರ: ಮಹಾರಾಷ್ಟ್ರದ ಸತಾರ ಜಿಲ್ಲೆಯ ಕೊಯ್ನಾ ಅಣೆಕಟ್ಟು ಬಳಿ ಶನಿವಾರ ಬೆಳಿಗ್ಗೆ 3.1 ತೀವ್ರತೆಯ ಭೂಕಂಪ ಸಂಭವಿಸುವುದರೊಂದಿಗೆ ರಾಜ್ಯದ ಕೃಷ್ಣ ನದಿ ಪಾತ್ರದಲ್ಲಿ ಆತಂಕ ಸೃಷ್ಟಿಯಾಗಿತ್ತು.
ರಿಕ್ಟರ್ ಮಾಪಕದದಲ್ಲಿ 3.1 ತೀವ್ರತೆಯ ಲಘು ಭೂಕಂಪ ಶನಿವಾರ ಬೆಳಿಗ್ಗೆ 10.22ಕ್ಕೆಸಂಭವಿಸಿದೆ. ಇದರ ಕೇಂದ್ರಬಿಂದು ಕೊಯ್ನಾ ಅಣೆಕಟ್ಟಿನಿಂದ 13.60 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಭೂಕಂಪದ ಸುದ್ದಿ ಹರಡುತ್ತಿದ್ದಂತೆ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಕೃಷ್ಣಾ ನದಿ ತೀರದಲ್ಲಿ ವಾಸಿಸುವ ಜನರು ಆತಂಕಕ್ಕೊಳಗಾಗಿದ್ದರು.
ಕೊಯ್ನಾ ಅಣೆಕಟ್ಟಿನಿಂದ ಹೆಚ್ಚು ನೀರು ಬಿಡುಗಡೆಯಾದರೆ ಸಂಭವನೀಯ ಪ್ರವಾಹದ ಭೀತಿಗೆ ನದಿ ಪಾತ್ರದ ಜನರು ಒಳಗಾಗಿದ್ದರು. ಆದರೆ, ಭೂಕಂಪನದಿಂದಾಗಿ ಅಣೆಕಟ್ಟಿಗೆ ಯಾವುದೇ ರೀತಿ ಹಾನಿಯಾಗಿಲ್ಲ.ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವ ಉದ್ದೇಶವೂ ಇಲ್ಲ ಎಂದು ಅಣೆಕಟ್ಟಿನ ಅಧಿಕಾರಿಗಳು ದೃಢಪಡಿಸಿದ್ದಾರೆ.
Advertisement