ಕೊರೋನಾ ಸೋಂಕಿಗೆ ಶೀಘ್ರದಲ್ಲೇ ಲಸಿಕೆ ಸಿಗುವ ವಿಶ್ವಾಸ: ಸಚಿವ ಸುಧಾಕರ್
ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಗೆ ಶೀಘ್ರದಲ್ಲಿ ಲಸಿಕೆ ಕಂಡುಹಿಡಿಯುವ ವಿಶ್ವಾಸವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಮೈಸೂರಿನ ಜೆಎಸ್ಎಸ್ ಸಂಸ್ಥೆ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಜಿಯವರ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ʼಕೋವಿಡ್-19 : ಸವಾಲು ಮತ್ತು ನಿರ್ವಹಣೆ ʼ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಸರ್ಕಾರದ ಪ್ರಮಾಣಿಕ ಪ್ರಯತ್ನಗಳ ಜತೆಗೆ ಸಮಾಜದ ಪ್ರತಿಯೊಬ್ಬರ ಸಹಕಾರ ಮತ್ತು ಸಂಘಟಿತ ಹೋರಾಟದಿಂದ ಮಾತ್ರ ಕೋವಿಡ್ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರಗಳು ಮಾನವೀಯ ನೆಲೆಯಲ್ಲಿ ಬಡವ-ಶ್ರೀಮಂತ, ಹಿರಿಯರು-ಕಿರಿಯರು ಭೇದವಿಲ್ಲದೆ ಸಮಭಾವದಿಂದ ಎಲ್ಲರಿಗೂ ಗುಣಮಟ್ಟದ ಕೋವಿಡ್ ಚಿಕಿತ್ಸೆ ನೀಡುತ್ತಿವೆ. ಅದರಲ್ಲೂ ರೋಗಕ್ಕೆ ತುತ್ತಾಗುವ ಅವಕಾಶಗಳಿರುವ ಮಕ್ಕಳು ಮತ್ತು ಹಿರಿಯರ ವಿಷಯದಲ್ಲಿ ವಿಶೇಷ ಕಾಳಜಿ ವಹಿಸಿದೆ ಎಂದರು.
ಕೆಲ ಮುಂದುವರಿದ ರಾಷ್ಟ್ರಗಳು ತಮ್ಮದೇ ಕಾರಣಗಳಿಂದ ಕೊರೋನಾ ರೋಗಪೀಡಿತರಾದ ಹಿರಿಯ ನಾಗರಿಕರಿಗೆ ಚಿಕಿತ್ಸೆ ನಿರಾಕರಿಸಿದ ಉದಾಹರಣೆಗಳಿವೆ. ಅಂತಹ ಯಾವುದೇ ತಾರತಮ್ಯ ನಮ್ಮಲ್ಲಿ ಮಾಡಿಲ್ಲ ಎಂದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ