ಅವಧಿಗೂ ಮುನ್ನ ಶಶಿಕಲಾ ಬಿಡುಗಡೆ: ಜೈಲಿನ ಸಿಡಿಯ ಎಫ್ ಎಸ್ ಎಲ್ ವರದಿಗಾಗಿ ಕಾಯುತ್ತಿರುವ ಎಸಿಬಿ

ಎಐಡಿಎಂಕೆ ನಾಯಕಿ ವಿಕೆ ಶಶಿಕಲಾ ಅವರ ಅವಧಿಗೂ ಮುನ್ನ ಬಿಡುಗಡೆ ಸಂಬಂಧ ವಿನಯ್ ಕುಮಾರ್ ಆಯೋಗ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಡಿ ನೀಡಿದ್ದು, ಎಫ್ ಎಸ್ ಎಲ್ ವರದಿಗಾಗಿ ಎಸಿಬಿ ಅಧಿಕಾರಿಗಳು ಕಾಯುತ್ತಿದ್ದಾರೆ
ಶಶಿಕಲಾ
ಶಶಿಕಲಾ

ಬೆಂಗಳೂರು: ಎಐಡಿಎಂಕೆ ನಾಯಕಿ ವಿಕೆ ಶಶಿಕಲಾ ಅವರ ಅವಧಿಗೂ ಮುನ್ನ ಬಿಡುಗಡೆ ಸಂಬಂಧ ವಿನಯ್ ಕುಮಾರ್ ಆಯೋಗ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಡಿ ನೀಡಿದ್ದು, ಎಫ್ ಎಸ್ ಎಲ್ ವರದಿಗಾಗಿ ಎಸಿಬಿ ಅಧಿಕಾರಿಗಳು ಕಾಯುತ್ತಿದ್ದಾರೆ.

ಶಶಿಕಲಾ ಮತ್ತು ಅವರ ನಾದಿನಿ ಇಳವರಿಸಿಯನ್ನು 2017 ರಿಂದ ಬೆಂಗಳೂರು ಕಾರಾಗೃಹದಲ್ಲಿರಿಸಲಾಗಿದೆ. ವಿನಯ್ ಕುಮಾರ್ ಕಮಿಟಿ ಸಲ್ಲಿಸಿರುವ ಮೂರು ಸಿಡಿಗಳನ್ನು ಎಸಿಬಿ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ನೀಡಿದೆ. ಶಶಿಕಲಾಗೆ ಸಂಬಂಧಿಸಿದಂತೆ ಜೈಲಿನಲ್ಲಿ ನಡೆದಿರುವ ವಿಷಯಗಳ ಸಂಬಂಧ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಸಿಬಿ ಒಂದು ಸಿಡಿಯ ಎಫ್‌ಎಸ್‌ಎಲ್ ವರದಿಯನ್ನು ಸ್ವೀಕರಿಸಿದ್ದು ಮತ್ತು  ಎರಡರ ವರದಿಯನ್ನು ಶೀಘ್ರವಾಗಿ ನೀಡುವಂತೆ ಸೂಚಿಸಿದೆ, ವಿನಯ್ ಕುಮಾರ್ ಆಯೋಗದ ವರದಿಯು ಹಲವಾರು ಅಕ್ರಮಗಳನ್ನು ಕಂಡುಹಿಡಿದಿದೆ ಮತ್ತು ಅಂದಿನ ಕೆಲವು ಜೈಲು ಅಧಿಕಾರಿಗಳಿಂದ ದಾಖಲೆಗಳನ್ನು ಸುಳ್ಳು ಎಂದು ಆರೋಪಿಸಲಾಗಿದ್ದು ಆಯೋಗ ಸಲ್ಲಿಸಿರುವ ವರದಿಯನ್ನು ಸರ್ಕಾರ ಗೌಪ್ಯವಾಗಿರಿಸಿದೆ.

ಅವಧಿಗೂ ಮುನ್ನ ಶಶಿಕಲಾ ಬಿಡುಗಡೆ ಕೋರಿರುವುದರ ಹಿನ್ನೆಲೆಯಲ್ಲಿ ಎಸಿಬಿ ತನಿಖೆ ನಿರ್ಣಾಯಕವಾಗಲಿದೆ. ಜನವರಿ 27 ರಂದು ಶಶಿಕಲಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ತಮ್ಮ ಒಳ್ಳೆಯ ನಡತೆ ಆಧರಿಸಿ ಅವಧಿಗೂ ಮುನ್ನ ರಿಲೀಸ್ ಮಾಡುವಂತೆ ಶಶಿಕಲಾ ಮನವಿ ಮಾಡಿದ್ದಾರೆ.

ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷೆಗೊಳಗಾದ ಖೈದಿಗಳು ನಿಯಮಿತ ಜೈಲು ಮಾನದಂಡಗಳ ಅಡಿಯಲ್ಲಿ ಉತ್ತಮ ನಡವಳಿಕೆಯ ಆಧಾರದ ಮೇಲೆ ಬಿಡುಗಡೆಯಾಗಲು ಅವಕಾಶವಿಲ್ಲ. ಕಾರಾಗೃಹ ಇಲಾಖೆ ಡಿಐಜಿ ರೂಪಾ ಅವರು ತಮ್ಮ ಮೊದಲ ಭೇಟಿಯ ವೇಳೆ ಜೈಲಿನಲ್ಲಿ ಹಲವು ಅಕ್ರಮಗಳ ಬಗ್ಗೆ ಸಲ್ಲಿಸಿದ್ದ ವಿಡಿಯೋ ಮತ್ತು ಫೋಟೋಗಳು ಕೂಡ ಸಿಡಿಯಲ್ಲಿವೆ.

ಜೈಲಿನಲ್ಲಿ ಶಶಿಕಲಾ ಅವರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ ಎಂದು 2017 ರಲ್ಲಿ ಡಿ ರೂಪಾ ಹಲವು ಗಂಭೀರ ಆರೋಪ ಮಾಡಿದ್ದರು, ಜೈಲು ಅಧಿಕಾರಿಗಳು ಬಹುಕೋಟಿ ಸ್ಟಾಂಪ್ ಹಗರಣದ ಕರೀಂ ತೆಲಗಿ ಸೇರಿದಂತೆ ಹಲವರಿಗೆ ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆಂದು ರೂಪಾ ಆರೋಪ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com