ಶ್ರೀನಿವಾಸ ಗೌಡಗೆ ಸನ್ಮಾನ
ಶ್ರೀನಿವಾಸ ಗೌಡಗೆ ಸನ್ಮಾನ

ಕಂಬಳದ ವೇಗಧೂತ ಶ್ರೀನಿವಾಸ ಗೌಡಗೆ ಸಿಎಂ ಯಡಿಯೂರಪ್ಪರಿಂದ ಸನ್ಮಾನ

ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಜಾನಪದ ಕ್ರೀಡೆಯಲ್ಲಿ ಅತ್ಯಂತ ವೇಗವಾಗಿ ಓಡಿ ನಾಡಿನ ಗಮನ ಸೆಳೆದ ಶ್ರೀನಿವಾಸ ಗೌಡ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಸನ್ಮಾನಿಸಿದರು.

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ ಜಾನಪದ ಕ್ರೀಡೆಯಲ್ಲಿ ಅತ್ಯಂತ ವೇಗವಾಗಿ ಓಡಿ ನಾಡಿನ ಗಮನ ಸೆಳೆದ ಶ್ರೀನಿವಾಸ ಗೌಡ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಸನ್ಮಾನಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಸಮಾರಂಭದಲ್ಲಿ ಯಡಿಯೂರಪ್ಪ ಸನ್ಮಾನ ಮಾಡಿ, ಕಟ್ಟಡ ಕಾರ್ಮಿಕರೂ ಆಗಿರುವ ಶ್ರೀನಿವಾಸ ಗೌಡ ಅವರಿಗೆ ಕಾರ್ಮಿಕ ಇಲಾಖೆ ವತಿಯಿಂದ ಮೂರು ಲಕ್ಷ ರೂ. ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ಬಳಿಕ ಮಾತನಾಡಿದ ಯಡಿಯೂರಪ್ಪ, ಕಂಬಳದಲ್ಲಿ ಅತ್ಯಂತ ವೇಗವಾಗಿ ಓಡುವ ಮೂಲಕ ಶ್ರೀನಿವಾಸ ಗೌಡ ಅವರು ನಾಡಿನ ಗಮನ ಸೆಳೆದಿದ್ದಾರೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಅವರಿಗೆ ಕ್ರೀಡಾ ಲೋಕದಲ್ಲಿ ಬೆಳೆದು ಬೆಳಗಲು ವಿಪುಲ ಅವಕಾಶಗಳನ್ನು ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವೂ ಕೂಡಾ ಮುಂದೆ ಬಂದಿರುವುದು ಶ್ಲಾಘನೀಯ. ಕೋಣಗಳ ಜೊತೆ 146 ಅಡಿ ಓಟವನ್ನು 13.68 ಸೆಕೆಂಡುಗಳಲ್ಲಿ ಓಡಿ ದಾಖಲೆ ಸ್ಥಾಪಿಸಿದ ಶ್ರೀನಿವಾಸ ಗೌಡ ಅವರ ಸಾಧನೆ ಅತ್ಯಂತ ಸಂತಸದ ವಿಷಯವಾಗಿದೆ. ಇದರಿಂದ ಜಾನಪದ ಕ್ರೀಡೆ ಎನಿಸಿರುವ ಕಂಬಳಕ್ಕೆ ಜಗತ್ತಿನಾದ್ಯಂತ ಮನ್ನಣೆ ದೊರೆತಂತಾಗಿದೆ ಎಂದರು. 

ಕಂಬಳ ಕರ್ನಾಟಕದ ಪ್ರಮುಖ ಸಾಂಪ್ರದಾಯಿಕ ಕ್ರೀಡಯಾಗಿದ್ದು, ಶ್ರೀನಿವಾಸ ಗೌಡ ಅವರು ಇನ್ನು ಹೆಚ್ಚಿನ ಸಾಧನೆಯನ್ನು ಮಾಡಲಿ. ಇದಕ್ಕೆ ಸರ್ಕಾರ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ನೀಡಲಿದೆ ಎಂದರು. 

ಪ್ರವಾಸೋದ್ಯಮ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಸಿ. ಟಿ. ರವಿ ಮಾತನಾಡಿ, ಶ್ರೀನಿವಾಸಗೌಡ ಇಚ್ಫಿಸಿದಲ್ಲಿ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುವನ್ನಾಗಿ ತರಬೇತಿ ನೀಡುವಲ್ಲಿ ರಾಜ್ಯ ಸರ್ಕಾರವೇ ಎಲ್ಲಾ ಜವಾಬ್ದಾರಿ ನಿರ್ವಹಿಸಲು ಸಿದ್ಧವಿದೆ. ಅವರಿಗೆ ಕ್ರೀಡೆಗಳಲ್ಲಿ ಭಾಗವಹಿಸುವ ಅರ್ಹತಾ ಪರೀಕ್ಷೆಯನ್ನು ನಡೆಸಿ ಅದರಲ್ಲಿ ಅವರು ತೇರ್ಗಡೆ ಹೊಂದಿದಲ್ಲಿ ಸರ್ಕಾರವೇ ಅವರ ತರಬೇತಿ ವೆಚ್ಚ ಭರಿಸಲಿದೆ ಎಂದು ವಿವರಿಸಿದರು.

ಪ್ರಸ್ತುತ ತಾವು ಒಪ್ಪಿಕೊಂಡಿರುವ ಕಂಬಳಗಳನ್ನು ಪೂರ್ಣಗೊಳಿಸಿ ಮಾರ್ಚ್ 10 ರ ನಂತರ ತಮ್ಮ ಕ್ರೀಡಾ ಇಲಾಖೆ ನಡೆಸುವ ಅರ್ಹತಾ ಪರೀಕ್ಷೆಗೆ ಹಾಜರಾಗಲು ಶ್ರೀನಿವಾಸಗೌಡ ಸಮ್ಮಿತಿಸಿದ್ದಾರೆ. ಅಲ್ಲದೆ, ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಪರಿಗಣಿಸಲು ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಚಿಂತಿಸಲಿದೆ ಎಂದು ಹೇಳಿದರು.

ಕಾರ್ಮಿಕ ಮತ್ತು ಸಕ್ಕರೆ ಸಚಿವ ಅರೆಬೈಲ್ ಶಿವರಾಂ ಹೆಬ್ಬಾರ್ ಅವರು ಈ ಸಂದರ್ಭದಲ್ಲಿ ಮಾತನಾಡಿ. ಶ್ರೀನಿವಾಸಗೌಡ ಅವರು ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ನೀಡುವ ಗುರುತಿನ ಚೀಟಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಅವರ ಈ ಸಾಧನೆಯನ್ನು ಪರಿಗಣಿಸಿ ಕಾರ್ಮಿಕ ಇಲಾಖೆ ಮೂರು ಲಕ್ಷ ರೂ. ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದೆ ಎಂದು ತಿಳಿಸಿದರು.  

ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ಯಾಪ್ಟನ್ ಅಜಯ್ ಕುಮಾರ್ ಬಾಲ್ ಮಾತನಾಡಿ, ದೇಶದ ಗಮನ ಸೆಳೆದಿರುವ ಶ್ರೀನಿವಾಸ ಗೌಡ ಅವರಿಗೆ ತರಬೇತಿ ನೀಡಿ ರಾಷ್ಟ್ರ ಮಟ್ಟದ ಕ್ರೀಡಾಪಟುವನ್ನಾಗಿ ರೂಪಿಸಲು ಕ್ರೀಡಾ ಪ್ರಾಧಿಕಾರ ಉತ್ಸುಕವಾಗಿದೆ. ಶ್ರೀನಿವಾಸ ಗೌಡ ಅವರು ಈಗಾಗಲೇ ಒಪ್ಪಿಕೊಂಡಿರುವ ಕಂಬಳಗಳ ನಂತರ ಪ್ರಾಧಿಕಾರವನ್ನು ಸಂಪರ್ಕಿಸಿದ್ದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಲು ತಾವು ಸಂತೋಷದಿಂದ ನಿರೀಕ್ಷಿಸುವುದಾಗಿ ನುಡಿದರು.
  
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಗೌಡ, ಸರ್ಕಾರದ ಗೌರವ ತಮಗೆ ಅತ್ಯಂತ ಸಂತಸ ತಂದಿದ್ದು, ಸರ್ಕಾರದ ಈ ನಿಲುವಿಗೆ  ಧನ್ಯವಾದ ಅರ್ಪಿಸುತ್ತೇನೆ. ಇದರಿಂದ ಹೊರಗಿನ ಜಗತ್ತಿಗೆ ಕಂಬಳ ಪರಿಚಯಿಸಿದಂತಾಗಿದೆ. ಈ ಸಾಧನೆಗೆ ತಮ್ಮ ಜೊತೆಗೆ ಓಡಿದ ಕೋಣಗಳು ಹಾಗೂ ಅದರ ಮಾಲೀಕರು ಕಾರಣವಾಗಿದ್ದು, ಅವರಿಗೆ ತಮ್ಮ ಕೃತಜ್ಞತೆಗಳನ್ನು ತಿಳಿಸಿದರು.

ಕಳೆದ ಒಂದು ತಿಂಗಳ ಹನ್ನೆರಡು ಕಂಬಳ ಕ್ರೀಡಾ ಕೂಟಗಳಲ್ಲಿ 35 ಕ್ಕೂ ಹೆಚ್ಚು ಮೆಡೆಲ್‍ಗಳನ್ನು ವಿವಿಧ ನಾಲ್ಕು ವಿಭಾಗಗಳಲ್ಲಿ ಪಡೆದಿದ್ದು, ಇನ್ನೂ ಮೂರೂ ಕಂಬಳ ಪಂದ್ಯಗಳು ಬಾಕಿ ಇದೆ. ಅದರಲ್ಲಿಯೂ ಕೂಡಾ ಶ್ರೀನಿವಾಸ ಗೌಡ ಅವರು ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಮಿಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಿ. ಮಣಿವಣ್ಣನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ, ಕಂಬಳ ಸಂರಕ್ಷಣೆ ಮತ್ತು ತರಬೇತಿ ಅಕಾಡೆಮಿಯ ಗುಣಪಾಲ್ ಕದಂಬ ಒಳಗೊಂಡಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Stories

No stories found.

Advertisement

X
Kannada Prabha
www.kannadaprabha.com