ಮಂಗಳೂರು: ಬಾಹ್ಯಾಕಾಶ ತಂತ್ರಜ್ಞಾನ ಸಂಬಂಧ ಸಂಶೋಧನೆ ನಡೆಸಲು ಉತ್ಸುಕರಾಗಿರುವ ಯುವ ವಿದ್ಯಾರ್ಥಿಗಳಿಗೆ ರೀಜನಲ್ ಅಕಾಡೆಮಿಕ್ ಸೆಂಟರ್ ಫಾರ್ ಸ್ಪೇಸ್ (ಆರ್ಎಸಿ-ಎಸ್) ಅವಕಾಶ ಕಲ್ಪಿಸಿದ್ದು ಇದೀಗ ಸುರತ್ಕಲ್ ನ ಎನ್ಐಟಿಕೆ ಕ್ಯಾಪಸ್ ನಲ್ಲಿ ಇದರ ಘಟಕ ಪ್ರಾರಂಭಿಸಲಿದೆ. ಇಡೀ ದಕ್ಷಿಣ ಭಾರತದಲ್ಲಿ ಬಾಹ್ಯಾಕಾಶ ಕುರಿತು ಸಂಶೋಧನಾ ಅಧ್ಯಯನವನ್ನು ನಡೆಸುತ್ತಿರುವ ಏಕೈಕ ಕೇಂದ್ರ ಇದಾಗಲಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸುರತ್ಕಲ್ (ಎನ್ಐಟಿಕೆ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಹಭಾಗಿತ್ವದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅನ್ವಯಗಳ ಕ್ಷೇತ್ರದಲ್ಲಿ ಸುಧಾರಿತ ಸಂಶೋಧನಾ ಚಟುವಟಿಕೆಗಳನ್ನು ಕೈಗೊಂಡಿವೆ.ಈ ಸಂಬಂಧ ಒಡಂಬಡಿಕೆಗೆ ಇಸ್ರೋ ಸಿಪಿಬಿಒ ನಿರ್ದೇಶಕ ಡಾ.ಪಿ.ವಿ.ವೆಂಕಿಟಕೃಷ್ಣನ್ ಮತ್ತು ಎನ್ಐಟಿಕೆ ಸುರತ್ಕಲ್ ನಿರ್ದೇಶಕ ಡಾ.ಉಮಮಹೇಶ್ವರ ರಾವ್ ಅವರು ಶುಕ್ರವಾರ ಸಹಿ ಹಾಕಿದರು.
ಈ ಕೇಂದ್ರವು ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಈ ಮುದಲು ಜೈಪುರ, ಗವಾಹಟಿ ಮತ್ತು ಕುರುಕ್ಷೇತ್ರದಲ್ಲಿ ಇಂತಹಾ ಕೇಂದ್ರಗಳನ್ನು ತೆರೆಯಲಾಗಿತ್ತು. ಎನ್ಐಟಿಕೆ ಸುರತ್ಕಲ್ ನಲ್ಲಿರುವ ಕೇಂದ್ರವು ಇಡೀ ದಕ್ಷಿಣ ಭಾರತವನ್ನು ವಿಶೇಷವಾಗಿ ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಪಾಂಡಿಚೆರಿ, ತಮಿಳುನಾಡು ಮತ್ತು ಲಕ್ಷದ್ವೀಪಗಳ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಳ್ಳುತ್ತದೆ. ಡಾ.ಪಿ.ವಿ.ವೆಂಕಿಟಕೃಷ್ಣನ್ ಅವರು, ಕೇಂದ್ರಕ್ಕೆ 2 ಕೋಟಿ ರೂ. ವಾರ್ಷಿಕ ಹಣಕಾಸು ವಿನಿಯೋಜಿಸಲಾಗುತ್ತದೆ, ಇದು ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಮುಂದುವರಿಯುತ್ತದೆ ಎಂದಿದ್ದಾರೆ.
Advertisement