ಮಂಗಳೂರು ಬಾಂಬ್ ಕೇಸ್: ಹಿಂದೆ ಜೈಲಿನಲ್ಲಿದ್ದಾಗಲೇ ಸಂಚು ರೂಪಿಸಿದ್ದ ಆದಿತ್ಯ ರಾವ್

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಮಂಗಳೂರು ಪೊಲೀಸರು, ಆರೋಪಿ ಆದಿತ್ಯ ರಾವ್ ಈ ಹಿಂದೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ....
ಆದಿತ್ಯ ರಾವ್
ಆದಿತ್ಯ ರಾವ್
Updated on

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಮಂಗಳೂರು ಪೊಲೀಸರು, ಆರೋಪಿ ಆದಿತ್ಯ ರಾವ್ ಈ ಹಿಂದೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿ ಜೈಲು ಸೇರಿದ್ದ ವೇಳೆಯೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲು ಸಂಚು ರೂಪಿಸಿದ್ದ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಪಿಎಸ್ ಹರ್ಷಾ ಅವರು ತಿಳಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹರ್ಷಾ, ಈ ಬಾಂಬ್ ಪ್ರಕರಣದಲ್ಲಿ ಆದಿತ್ಯ ರಾವ್ ಒಬ್ಬನೇ ಭಾಗಿಯಾಗಿದ್ದಾನೆ. ಇದರಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರೋಪಿ ಈ ಹಿಂದೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿ ಚಿಕ್ಕಬಳ್ಳಾಪುರ ಜೈಲು ಪಾಲಾಗಿದ್ದ ವೇಳೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡುವ ಸಂಚು ರೂಪಿಸಿದ್ದ ಎಂದು ಹರ್ಷಾ ತಿಳಿಸಿದ್ದಾರೆ.

ಬಾಂಬ್ ನ ಮಾಸ್ಟರ್ ಮೈಂಡ್ ತಾನೊಬ್ಬನೆ. ಬಾಂಬ್ ಇಡುವ ಬಗ್ಗೆ ಎರಡನೇ ವ್ಯಕ್ತಿಗೆ ಯಾವುದೇ ಮಾಹಿತಿ ಇಲ್ಲ ಎಂದು ಆದಿತ್ಯ ರಾವ್ ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಲು ನಿರ್ಧರಿಸಿದ ನಂತರ ಕುಡ್ಲ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿದ ಆದಿತ್ಯ ರಾವ್, ಬಾಂಬ್ ತಯಾರಿಕೆಗೆ ಸುಮಾರು 100 ಕ್ಕೂ ಹೆಚ್ಚು ಬಗೆಯ ಸಾಮಾಗ್ರಿ ಖರೀದಿಸಿ, ಕೆಲ ವೆಬ್ ಸೈಟ್ ಮೂಲಕ ಬಾಂಬ್ ತಯಾರಿ ಮಾಡುವ ಕುರಿತು ಮಾಹಿತಿ ಸಂಗ್ರಹಿಸಿದ್ದನು ಎಂದು ಹರ್ಷಾ ಅವರು ತಿಳಿಸಿದ್ದಾರೆ.

ನಾಲ್ಕು ವಾರದ ರಜೆಗಳಲ್ಲಿ ಬಾಂಬ್ ಇಡುವ ಪ್ರಯೋಗ ಮತ್ತು ಸ್ಫೋಟಗಳ ಜೋಡಣೆ ಮಾಡಿದ್ದ. ಬಾಂಬ್ ಇಡುವ ಕೆಲವು ದಿನಗಳ ಹಿಂದಷ್ಟೇ ವಾಸ್ತವ್ಯವನ್ನು ಮಂಗಳೂರಿನಿಂದ ಕಾರ್ಕಳಕ್ಕೆ ಶಿಫ್ಟ್ ಮಾಡಿದ್ದ ಎಂದು ಆಯುಕ್ತರು ತಿಳಿಸಿದ್ದಾರೆ.

ಈ ಪ್ರಕರಣವನ್ನು ರಾಷ್ಟ್ರೀಯ ಬೆದರಿಕೆ ಮತ್ತು ವಿಧ್ವಂಸಕ ಕೃತ್ಯವೆಂದು ಪರಿಗಣಿಸಿ, ಆರೋಪಿಯ ವಿರುದ್ಧ ಕಾನೂನುಬಾಹಿರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com