ದ್ವಿತೀಯ ಪಿಯುಸಿ ಫಲಿತಾಂಶ: ಶೇ.61.80 ವಿದ್ಯಾರ್ಥಿಗಳು ತೇರ್ಗಡೆ, ಉಡುಪಿ ಪ್ರಥಮ; ಬಾಲಕಿಯರದೇ ಮೇಲುಗೈ

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಒಟ್ಟು ಶೇ.61.80 ಫಲಿತಾಂಶ ದಾಖಲಾಗಿದೆ. ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲಾವಾರು ಪೈಕಿ ಉಡುಪಿ ಪ್ರಥಮ ಸ್ಥಾನ ಹಾಗೂ ವಿಜಯಪುರ ಕೊನೆಯ ಸ್ಥಾನ ಪಡೆದುಕೊಂಡಿವೆ. 
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
Updated on

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಒಟ್ಟು ಶೇ.61.80 ಫಲಿತಾಂಶ ದಾಖಲಾಗಿದೆ. ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲಾವಾರು ಪೈಕಿ ಉಡುಪಿ ಪ್ರಥಮ ಸ್ಥಾನ ಹಾಗೂ ವಿಜಯಪುರ ಕೊನೆಯ ಸ್ಥಾನ ಪಡೆದುಕೊಂಡಿವೆ. 

ಫಲಿತಾಂಶದ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ರಾಜ್ಯಾದ್ಯಂತ ಒಟ್ಟು 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಒಟ್ಟು 4,17,297 ಮಂದಿ ತೇರ್ಗಡೆ ಹೊಂದಿದ್ದಾರೆ. ಇದು ಶೇ. 61.80ರಷ್ಟು ಫಲಿತಾಂಶವಾಗಿದೆ ಎಂದು ಮಾಹಿತಿ ನೀಡಿದರು. 

ಉಡುಪಿ ಶೇ. 90.71ರಷ್ಟು ಫಲಿತಾಂಶದಿಂದ ಮೊದಲ ಸ್ತಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆ ಶೇ. 90.71 ಹಾಗೂ ಕೊಡಗು ಶೇ. 81.53ರಷ್ಟು ಫಲಿತಾಂಶದಿಂದ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ. ಉತ್ತರಕನ್ನಡ ಶೇ. 80.97, ಚಿಕ್ಕಮಗಳೂರು ಜಿಲ್ಲೆ ಶೇ. 79.11 ಫಲಿತಾಂಶದಿಂದ ಕ್ರಮವಾಗಿ ಐದು ಹಾಗೂ ಆರನೇ ಸ್ಥಾನದಲ್ಲಿದ್ದರೆ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ನಂತರದ ಸ್ಥಾನ ಪಡೆದುಕೊಂಡಿವೆ(ಶೇ. 77.56 ಮತ್ತು ಶೇ. 75.54) 

ವಿಜಯಪುರ ಶೇ. 54.22 ಹಾಗೂ ರಾಯಚೂರು ಶೇ. 56.22ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. 

ಪ್ರಸಕ್ತ ಸಾಲಿನಲ್ಲಿ ಕೂಡ ಬಾಲಕಿಯರು ಮೇಲುಗೈ ಸಾಧಿಸಿದ್ದು, ಶೆ. 68.73ರಷ್ಟು ಬಾಲಕಿಯರು ಮತ್ತು ಶೇ. 54.77ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ(ಶೇ. 58.99) ಹೋಲಿಸಿದರೆ ನಗರ ಪ್ರದೇಶದ (62.60) ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. 

ರಾಜ್ಯದಲ್ಲಿ 3 ಸರ್ಕಾರಿ ಪದವಿ ಪೂರ್ವ ಕಾಲೇಜು, 1 ಅನುದಾನಿತ ಪದವಿ ಪೂರ್ವ ಕಾಲೇಜು ಮತ್ತು 88 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದಿವೆ. 

5 ಸರ್ಕಾರಿ ಪದವಿ ಪೂರ್ವ ಕಾಲೇಜು, 5 ಅನುದಾನಿತ ಪದವಿ ಪೂರ್ವ ಕಾಲೇಜು ಮತ್ತು 78 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ. 

ಪ್ರಸಕ್ತ ಸಾಲಿನಲ್ಲಿ 3.84 ಲಕ್ಷ ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದು, 69.20ರಷ್ಟು ಫಲಿತಾಂಶ ದಾಖಲಾಗಿದೆ. 25602 ಪುನರಾವರ್ತಿತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೆ. 46.56ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಉಳಿದಂತೆ ಶೇ. 24.11 ಖಾಸಗಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 

ಕಲಾ ವಿಭಾಗದಲ್ಲಿ ಶೇ. 41.27, ವಾಣಿಜ್ಯ ವಿಭಾಗದಲ್ಲಿ ಶೇ. 65.52 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ. 76.2 ಫಲಿತಾಂಶ ದಾಖಲಾಗಿದೆ. 

ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ. 47.56 ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ. 72.45ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಜಿಲ್ಲಾವಾರ ವಿವರ: 
ಉಡುಪಿ ಶೇ. 90.71, ದಕ್ಷಿಣಕನ್ನಡ ಶೇ.90.71, ಕೊಡಗು ಶೇ.81.53, ಉತ್ತರ ಕನ್ನಡ ಶೇ.80.97, ಚಿಕ್ಕಮಗಳೂರು ಶೇ.79.11, ಬೆಂಗಳೂರು ದಕ್ಷಿಣ ಶೇ.77.56, ಬೆಂಗಳೂರು ಉತ್ತರ ಶೇ. 75.54, ಬಾಗಲಕೋಟೆ ಶೇ.74.59, ಚಿಕ್ಕಬಳ್ಳಾಪುರ ಶೇ.73.74, ಶಿವಮೊಗ್ಗ ಶೇ.72.19, ಹಾಸನ ಶೇ.70.18, ಚಾಮರಾಜನಗರ ಶೇ. 69.29, ಬೆಂಗಳೂರು ಗ್ರಾಮಾಂತರ ಶೇ.69.02, ಹಾವೇರಿ ಶೇ.62.01, ಮೈಸೂರು ಶೇ.67.98, ಕೋಲಾರ ಶೇ.67.42, ಧಾರವಾಡ ಶೇ. 67.31, ಬೀದರ್ ಶೇ.64.61,ದಾವಣಗೆರೆ ಶೇ. 64.09, ಚಿಕ್ಕೋಡಿ ಶೇ.63.88, ಮಂಡ್ಯ ಶೇ. 63.82, ಗದಗ ಶೇ.63, ತುಮಕೂರು ಶೇ.62.26, ಬಳ್ಳಾರಿ ಶೇ.62.02, ರಾಮನಗರ ಶೇ.60.96, ಕೊಪ್ಪಳ ಶೇ.60.9, ಬೆಳಗಾವಿ ಶೇ.59.9, ಯಾದಗಿರಿ ಶೇ. 58.8, ಕಲಬುರಗಿ ಶೇ.58.27, ಚಿತ್ರದುರ್ಗ ಶೇ.56.8, ರಾಯಚೂರು ಶೇ.56.22, ವಿಜಯಪುರ ಶೇ. 54.22

ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ:

ಫಲಿತಾಂಶದಲ್ಲಿ ಅನುತ್ತೀರ್ಣರಾದವರಿಗೆ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಪೂರಕ ಪರೀಕ್ಷೆ ನಡೆಸಲಾಗುವುದು. ಶುಲ್ಕ ಪಾವತಿಗೆ ಜುಲೈ 31 ಕೊನೆಯ ದಿನ ಎಂದರು. ಮರು ಮೌಲ್ಯಮಾಪನಕ್ಕೆ ಸಹ ಅವಕಾಶವಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಕೊರೋನಾ ವೈರಸ್ ಕಾರಣದಿಂದ ಈ ವರ್ಷ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com