ಕೆಆರ್ ಎಸ್, ಕಬಿನಿಯಿಂದ ಜುಲೈ 28ಕ್ಕೆ ನಾಲೆಗಳಿಗೆ ನೀರು- ಸಚಿವ ಎಸ್.ಟಿ.ಸೋಮಶೇಖರ್

ಕಬಿನಿ ಹಾಗೂ ಕೆಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ಜುಲೈ ೨೮ರಿಂದ ಕಟ್ಟುಪದ್ಧತಿಯಲ್ಲಿ ನೀರು ಹರಿಸಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೆಆರ್ ಎಸ್ ಜಲಾಶಯ
ಕೆಆರ್ ಎಸ್ ಜಲಾಶಯ
Updated on

ಮಂಡ್ಯ: ಕಬಿನಿ ಹಾಗೂ ಕೆಆರ್ ಎಸ್ ಜಲಾಶಯದಿಂದ ನಾಲೆಗಳಿಗೆ ಜುಲೈ ೨೮ರಿಂದ ಕಟ್ಟುಪದ್ಧತಿಯಲ್ಲಿ ನೀರು ಹರಿಸಬೇಕು. 
ಹಾರಂಗಿ ಜಲಾಶಯಗಳಿಂದಲೂ ಅದೇ ದಿನ ಇಲ್ಲವೇ ಆದಷ್ಟು ಶೀಘ್ರವಾಗಿ ನೀರು ಬಿಡಲು ಹಾರಂಗಿ ಐ.ಸಿ.ಸಿ. ಸಭೆ ಮಾಡಿ ಕ್ರಮ 
ಕೈಗೊಳ್ಳಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅಧಿಕಾರಿಗಳಿಗೆ
ಸೂಚನೆ ನೀಡಿದ್ದಾರೆ.

ಕೆಆರ್ ಎಸ್  ಬೃಂದಾವನ ಗಾರ್ಡನ್ ಕಾವೇರಿ ಸಭಾಂಗಣದಲ್ಲಿಂದು ನಡೆದ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲಾ ಶಾಸಕರು ನೀರಾವರಿ 
ಸಲಹಾ ಸಮಿತಿಗಳ ಸದಸ್ಯರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ ೨೮ ರಿಂದ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡಲು ಸಮಿತಿಯ ಎಲ್ಲಾ ಶಾಸಕರು ಒಪ್ಪಿಗೆ ಸೂಚಿದ್ದಾರೆ. ಕೆಲವು ನಾಲೆಗಳ ದುರಸ್ತಿ ಇದ್ದು, ಇದನ್ನು ಶೀಘ್ರ ಮುಗಿಸಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. 

ಸವಡೆಗಳಿಗೆ ೬ ತಿಂಗಳಿನಿಂದ ವೇತನ ನೀಡದಿರುವ ಬಗ್ಗೆ ಸಭೆಯಲ್ಲಿ ಶಾಸಕರು ಗಮನಕ್ಕೆ ತಂದಿದ್ದಾರೆ. ಇವರಿಗೆ ಶೀಘ್ರದಲ್ಲೇ ವೇತನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,೧೪೯೨ ಸವಡೆಗಳ ನೇಮಕ, ವೇತನ ಸೇರಿದಂತೆ ಸೇರಬೇಕಾದ ಇತರ ಸೌಲಭ್ಯಗಳ ಬಗ್ಗೆ ಶೀಘ್ರ ಕ್ರಮವಹಿಸಲಾಗುವುದು. ಅವರ ಕೆಲಸ ಬಹಳ ಮುಖ್ಯವಾಗಿದೆ,ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

ಕಳೆದ ೧೦ ದಿನಗಳ ಹಿಂದೆ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದಾಗ ನೀರಿನ ಅವಶ್ಯಕತೆ ಬಗ್ಗೆ ಚರ್ಚೆಯಾಗಿತ್ತು. 
ಈ ಹಿನ್ನೆಲೆಯಲ್ಲಿ ಸಚಿವರಾದ ನಾರಾಯಣಗೌಡ ಅವರಲ್ಲಿ ಚರ್ಚಿಸಿ ಸಭೆಯನ್ನು ನಿಗದಿ ಮಾಡಲಾಯಿತು.ಈ ಹಿನ್ನೆಲೆಯಲ್ಲಿ
ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಇದಕ್ಕೂ ಮುನ್ನಾ ನಡೆದ ಸಭೆಯಲ್ಲಿ ಕಬಿನಿಯಲ್ಲಿ ೧೫ ಟಿಎಂಸಿ ನೀರನ್ನು ಬಳಕೆ ಮಾಡಬಹುದಾಗಿದ್ದು, ಕೆರೆಗಳಿಗೆ ತುಂಬಿಸಲು 
೨ ರಿಂದ ೨.೫ ನೀರನ್ನು ಕೊಡಬಹುದಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 

ಸವಡೆಗಳಿಗೆ ಈ ಹಿಂದೆ ಇರುವ ಬಾಕಿ ವೇತನವನ್ನು ೨-೩ ವಾರಗಳಲ್ಲಿ ಪಾವತಿಯಾಗಬೇಕು. ಜೊತೆಗೆ ಮುಂದೆ ಬರುವ ಹೊಸ ಏಜೆನ್ಸಿಯಿಂದ ಅವರನ್ನು ಪುನರ್ ನೇಮಕ ಮಾಡಿಕೊಂಡು ಸರಿಯಾದ ಸಮಯಕ್ಕೆ ವೇತನ ಹಾಗೂ ಪಿಎಫ್, ಇಎಸ್ಐ 
ಸೌಲಭ್ಯಗಳನ್ನು ಸರಿಯಾಗಿ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂಬ ಸಲಹೆಗಳು ವ್ಯಕ್ತವಾದವು. 

ಒಟ್ಟಲು ಹಾಕುವ ಸಮಯ ಇದಾಗಿದ್ದು, ಈ ವಾರದ ಕೊನೆಯಲ್ಲಿ ನೀರು ಬಿಟ್ಟರೆ ಉತ್ತಮ ಎಂದು ಮಂಡ್ಯ ಹಾಗೂ ಮೈಸೂರು
ಜಿಲ್ಲಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. 

ಸಂಸದ ಪ್ರತಾಪ್ ಸಿಂಹ,ಶಾಸಕರಾದ ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ನಾಗೇಂದ್ರ, ಅಶ್ವಿನ್ ಕುಮಾರ್, ಡಾ.ಎಸ್.ಯತೀಂದ್ರ,ಧರ್ಮಸೇನ ಸೇರಿದಂತೆ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಜಿಪಂ ಸಿಇಒಗಳು ಇತರರು ಇದ್ದರು. 

ಕೆಆರ್ ಎಸ್ ನಲ್ಲಿ  ಕಾವೇರಿ ಮಾತೆಗೆ ಸಚಿವದ್ವಯರಿಂದ ಪೂಜೆ:
ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಭೇಟಿ ನೀಡಿದ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಪೌರಾಡಳಿತ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರು ಕಾವೇರಿ ಮಾತೆ ವಿಗ್ರಹಕ್ಕೆ  ಪೂಜೆ ಸಲ್ಲಿಸಿದರು. 

ವರದಿ:ನಾಗಯ್ಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com