ಬೆಂಗಳೂರು: ಪೌರ ಕಾರ್ಮಿಕರ ನಿಯೋಗವೊಂದು ಬಿಬಿಎಂಪಿ ಆಯುಕ್ತ ಬಿ ಎಚ್ ಅನಿಲ್ ಕುಮಾರ್ ಅವರನ್ನು ಭೇಟಿ ಮಾಡಿ ನಗರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಸುರಕ್ಷತಾ ಸಾಧನ ಮತ್ತು ಸ್ವಚ್ಛತೆಯ ಕ್ರಮಗಳನ್ನು ಒದಗಿಸಿಕೊಡಿ ಎಂದು ಬೇಡಿಕೆ ಮುಂದಿಟ್ಟಿದೆ.
25 ವರ್ಷದ ಪೌರ ಕಾರ್ಮಿಕ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ಸರಿಯಾಗಿ ಸಿಗದೆ ಅಸುನೀಗಿದ ಘಟನೆ ಬಳಿಕ ಪೌರ ಕಾರ್ಮಿಕರು ತಮ್ಮ ಸುರಕ್ಷತೆ ಬಗ್ಗೆ ಇನ್ನಷ್ಟು ಎಚ್ಚೆತ್ತುಕೊಂಡಿದ್ದಾರೆ. ಕೋವಿಡ್-19ಗೆ ಮರಣ ಹೊಂದುತ್ತಿರುವ 5ನೇ ಪೌರ ಕಾರ್ಮಿಕರು ಇವರಾಗಿದ್ದಾರೆ. ನಿನ್ನೆ ತಮ್ಮ ಸುರಕ್ಷತೆಗಾಗಿ ಒತ್ತಾಯಿಸಿ ಹಲವು ಪೌರ ಕಾರ್ಮಿಕರು ನಗರದ ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪೌರ ಕಾರ್ಮಿಕರ ಜೊತೆ ಹಲವು ನಾಗರಿಕ ಗುಂಪುಗಳು ಸಹ ಸೇರಿ ಮನೆಗಳ ಮುಂದೆ ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅನಿಲ್ ಕುಮಾರ್, ಪೌರ ಕಾರ್ಮಿಕರ ರಕ್ಷಣೆಗೆ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೆಲಸ ಆರಂಭಕ್ಕೆ ಮುನ್ನ ಪೌರ ಕಾರ್ಮಿಕರ ದೇಹದ ಉಷ್ಣತೆ ತಪಾಸಣೆ ಮಾಡಲಾಗುತ್ತದೆ. ಕೋವಿಡ್-19 ಬಂದರೆ ಅವರಿಗೆ ಚಿಕಿತ್ಸೆ ನೀಡಲು ಬಿಬಿಎಂಪಿ ಕೋವಿಡ್ ಕೇಂದ್ರಗಳನ್ನು ನಿರ್ಮಾಣ ಮಾಡಲಿದೆ. ಕೋವಿಡ್-19ಗೆ ಮೃತಪಟ್ಟರೆ ಪೌರ ಕಾರ್ಮಿಕರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದರು.
Advertisement