ಬೆಂಗಳೂರು: ಕೊರೋನಾ ಲಾಕ್ ಡೌನ್ ಸೋಂಕು ತಡೆಗಟ್ಟುವಲ್ಲಿ ಸಹಾಯವಾಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಬೇಟೆಗಾರರಿಗೆ ಅನುಕೂಲವಾಗಿರುವುದಂತೂ ಸುಳ್ಳಲ್ಲ.
ಲಾಕ್ ಡೌನ್ ಇರುವಾಗ ಕಾಡುಪ್ರಾಣಿಗಳ್ಳರು ಕದ್ದುಮುಚ್ಚಿ ಓಡಾಡಿ ಜಿಂಕೆ ಸೇರಿದಂತೆ ಹಲವು ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲುತ್ತಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಬಾರಿ ದೀರ್ಘ ಲಾಕ್ ಡೌನ್ ಹೇರಿಕೆಯಾಗಿ ಅದು ಸಡಿಲಿಕೆಯಾದ ನಂತರ ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಪ್ರಾಣಿಗಳ ಬೇಟೆಯಾಡಿದ 8 ಕೇಸುಗಳು ವರದಿಯಾದವು. ಇದೀಗ ಮತ್ತೆ ಲಾಕ್ ಡೌನ್ ಹೇರಿರುವುದು ಅರಣ್ಯಾಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಸಾಂಬಾರ ಜಿಂಕೆ ಸೇರಿದಂತೆ ಕಾಡುಪ್ರಾಣಿಗಳನ್ನು ಬೇಟೆಯಾಡಿದ ಬಗ್ಗೆ ಮಾಹಿತಿ ಸಿಕ್ಕಿ ಇತ್ತೀಚೆಗೆ ಅರಣ್ಯಾಧಿಕಾರಿಗಳು ವೀರನಹೊಸಳ್ಳಿ ವಲಯದಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದರು. ಇಲ್ಲಿ ಸಾಂಬಾರ್ ಜಿಂಕೆಯ ಅಂಗಗಳು ಸಿಕ್ಕಿವೆ. ಆದರೆ ಆರೋಪಿಗಳು ಪತ್ತೆಯಾಗಿಲ್ಲ.
ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ಗುಪ್ತಚರ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪುವ ಹೊತ್ತಿಗೆ ಬೇಟೆಗಾರರು ಸಾಂಬಾರ ಜಿಂಕೆಯೊಂದಿಗೆ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸ್ಥಳದ ಮಾಲೀಕರು ಬೆಂಗಳೂರಿನಲ್ಲಿದ್ದು ಲಾಕ್ ಡೌನ್ ನಿಂದಾಗಿ ಓಡಾಡಲು ಸಾಧ್ಯವಾಗದಿರುವುದರಿಂದ ಕಳ್ಳರಿಗೆ ಸುಲಭವಾಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಾಗರಹೊಳೆ ಹುಲಿ ಅಭಯಾರಣ್ಯ ನಿರ್ದೇಶಕ ಮಹೇಶ್ ಕೆ, ಆರೋಪಿಗಳ ಪತ್ತೆಹಚ್ಚಲು ಎಲ್ಲಾ ಮೂಲಗಳಿಂದ ಮಾಹಿತಿ ಪಡೆಯುತ್ತಿದ್ದೇವೆ. ವಸ್ತುಗಳು ಮತ್ತು ಪ್ರಾಣಿಯ ದೇಹದ ಅಂಗಗಳನ್ನು ಬಿಟ್ಟುಹೋಗಿರುವುದನ್ನು ನೋಡಿದರೆ ಇದು ಸಾಂಬಾರ ಜಿಂಕೆ ಎಂದು ಗೊತ್ತಾಗುತ್ತದೆ. ಬಹುತೇಕ ಬೇಟೆಯಾಡಿರುವ ಪ್ರಕರಣಗಳಲ್ಲಿ ಸಾಂಬಾರ ಜಿಂಕೆ ಮತ್ತು ಚುಕ್ಕೆ ಜಿಂಕೆಗಳು ಹೆಚ್ಚಾಗಿವೆ. ಇತ್ತೀಚೆಗೆ ಚಿರತೆಯೊಂದು ಸತ್ತಿರುವುದು ವರದಿಯಾಗಿದೆ. ಬೇಟೆಗಾರರನ್ನು ಪತ್ತೆಹಚ್ಚಿ ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
Advertisement