ಕೊರೋನಾ ಹಿನ್ನೆಲೆ: ಶ್ರಾವಣ ಶನಿವಾರಗಳಂದು ಬಿಆರ್ ಹಿಲ್ಸ್ಗೆ ಪ್ರವೇಶ ನಿಷೇಧ
ಚಾಮರಾಜನಗರ: ಕೊವಿಡ್ ಸಾಂಕ್ರಾಮಿಕ ಸೋಂಕು ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶ್ರಾವಣ ಮಾಸದಲ್ಲಿ ಶನಿವಾರಗಳಂದು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟ (ಬಿಆರ್ ಹಿಲ್) ದೇವಸ್ಥಾನ ಮತ್ತು ಇತರ ದೇವಾಲಯಗಳಿಗೆ ಭಕ್ತರ ಪ್ರವೇಶವನ್ನು ಧಾರ್ಮಿಕ ದತ್ತಿ ಇಲಾಖೆ ತಾತ್ಕಾಲಿಕವಾಗಿ ನಿಷೇಧಿಸಿದೆ.
ಹಿಂದೂಗಳ ಪವಿತ್ರ ಮಾಸವಾದ ಶ್ರಾವಣ ಮಂಗಳವಾರದಿಂದ (ಜುಲೈ 22) ಆರಂಭವಾಗುತ್ತದೆ. ಶ್ರಾವಣ ಮಾಸದ ಸಮಯದಲ್ಲಿ ಪ್ರತಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಆರ್ ಹಿಲ್ಸ್ ನ ರಂಗನಾಥ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಭಕ್ತರನ್ನು ದೇವಸ್ಥಾನಕ್ಕೆ ಒಂದು ತಿಂಗಳು ನಿರ್ಬಂಧಿಸುವ ನಿರ್ಧಾರವನ್ನು ತಾಲ್ಲೂಕು ಆಡಳಿತ ಕೈಗೊಂಡಿದೆ. ಪ್ರತಿವರ್ಷ ಈ ಮಾಸದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಆದರೆ, ಈ ವರ್ಷ, ಶನಿವಾರದಂದು ಭಕ್ತರಿಗೆ ದೇವಸ್ಥಾನಕ್ಕೆ ಅನುಮತಿಸಲಾಗುತ್ತಿಲ್ಲ. ಆದರೆ, ಇತರ ದಿನಗಳಲ್ಲಿ ನಿಗದಿತ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ. ಜನರು ತಾವು ಬೆಳೆದ ಕೃಷಿ ಉತ್ಪನ್ನವನ್ನು ದೇವರಿಗೆ ಅರ್ಪಿಸುವುದು ಸಂಪ್ರದಾಯವಾಗಿದೆ. ಶ್ರಾವಣ ಮಾಸದಲ್ಲಿ ಬೆಟ್ಟದಲ್ಲಿ ಹಬ್ಬದ ವಾತಾವರಣ ಇರುತ್ತದೆ. ಕೊವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಭಕ್ತರು ಶನಿವಾರಗಳಂದು ಮನೆಯಲ್ಲೇ ಇದ್ದು, ಪೂಜೆ ನೆರವೇರಿಸಬೇಕು. ಇದರಿಂದ ಆಚರಣೆಯನ್ನು ಅರ್ಥಪೂರ್ಣವಾಗಿಸಬಹುದು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಂ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ