ಬೆಂಗಳೂರು: ತಾಯಿಯಿಂದ ಬೇರ್ಪಟ್ಟು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರೈಕೆಯಲ್ಲಿರುವ ಮರಿಯಾನೆಯನ್ನು ಮರಳಿ ತಾಯಿ ಜೊತೆಗೂಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮುಖ್ಯ ಅರಣ್ಯ ಸಂರಕ್ಷಕ ಪುಣತಿ ಶ್ರೀಧರ್ ತಿಳಿಸಿದ್ದಾರೆ.
ತಾಯಿಯಿಂದ ಬೇರೆಯಾಗಿರು ಮರಿಯಾನೆ ಪತ್ತೆಯಾದಾಗಿನಿಂದ ತಾಯಿಯಾನೆಗಾಗಿ ಶೋಧ ನಡೆಯುತ್ತಿದೆ. ಮರಿಯಾನೆ ಕೂಡ ದಣಿದಿದೆ ಎಂದು ಅವರು ಹೇಳಿದ್ದಾರೆ.
‘ಬೇರ್ಪಡೆಯಾಗಿರುವ ತಾಯಿ ಮತ್ತು ಮರಿಯನ್ನು ಸೇರ್ಪಡೆ ಮಾಡುವುದು ಅತ್ಯಂತ ಮುಖ್ಯ. ಇದೊಂದು ಮಾನವೀಯ ಕಾರ್ಯ. ಹಾಗಾಗಿ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ವೈದ್ಯರು ಮತ್ತು ತಜ್ಞರ ಸಲಹೆಯಂತೆ ಕ್ರಮ ಕೈಗೊಳ್ಳಲಾಗುವುದು. ಬೆಳಗಿನ ಜಾವ 3 ರಿಂದ 4ರ ಸಮಯದಲ್ಲಿ ಆನೆಗಳ ಜಾಡು ಹಿಡಿದು ಮರಿಯನ್ನು ಸೇರ್ಪಡೆ ಮಾಡಲು ಕಾರ್ಯಾಚರಣೆ ಕೈಗೊಳ್ಳುವಂತೆ ತಿಳಿಸಲಾಗಿದೆ’ ಎಂದರು.
‘ಕಾರ್ಯಾಚರಣೆಯಲ್ಲಿ ತಾಯಿ ಮತ್ತು ಮರಿಯು ಜೊತೆಯಾದರೆ ಮರುಜನ್ಮ ಸಿಕ್ಕಿದಂತಾಗುತ್ತದೆ. ಹಾಗಾಗಿ ಆನೆ ಮರಿ ದೊರೆತ ಸ್ಥಳದಲ್ಲಿ ಕಾರ್ಯಾಚರಣೆ ಕೈಗೊಳ್ಳುವಂತೆ ತಿಳಿಸಲಾಗಿದೆ. ತಾಯಿಯಾನೆ ಸತ್ತಿಲ್ಲ, ಬದಲಾಗಿ ಪ್ರಸವದ ದಣಿವರಿಕೆಯಿದಂ ಬೇರೆಲ್ಲೋ ಇರಬಹುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ದಿನೇಶ್ ಸಿಂಗ್ ಮರಿಯಾನೆಯನ್ನು ದತ್ತು ಪಡೆದಿದ್ದು, ಸರಸ್ವತಿ ಎಂದು ನಾಮಕರಣ ಮಾಡಿದ್ದಾರೆ.
Advertisement