'ಕೊರೋನಾ'ಎಫೆಕ್ಟ್: ಆನ್ ಲೈನ್ ಶಾಪಿಂಗ್ ನಲ್ಲಿ ಹಠಾತ್ ಏರಿಕೆ 

ಕೊರೋನಾ ವೈರಾಣು ಸಾಂಕ್ರಾಮಿಕ ರೋಗದ ಭಯದಿಂದ ಮನೆಬಿಟ್ಟು ಹೊರಗೆ ಹೋಗಲು ಭಯಪಡುವ ಜನರು ಇತ್ತೀಚಿಗೆ ಆನ್ ಲೈನ್ ಶಾಪಿಂಗ್ ಗೆ ಹೆಚ್ಚು ಮೊರೆ ಹೋಗುತ್ತಿದ್ದಾರಂತೆ. ಇದರಿಂದಾಗಿ ಆನ್ ಲೈನ್ ಶಾಪಿಂಗ್ ಗಳು ಜಾಸ್ತಿಯಾಗಿವೆ. 
'ಕೊರೋನಾ'ಎಫೆಕ್ಟ್: ಆನ್ ಲೈನ್ ಶಾಪಿಂಗ್ ನಲ್ಲಿ ಹಠಾತ್ ಏರಿಕೆ 
Updated on

ಬೆಂಗಳೂರು: ಕೊರೋನಾ ವೈರಾಣು ಸಾಂಕ್ರಾಮಿಕ ರೋಗದ ಭಯದಿಂದ ಮನೆಬಿಟ್ಟು ಹೊರಗೆ ಹೋಗಲು ಭಯಪಡುವ ಜನರು ಇತ್ತೀಚಿಗೆ ಆನ್ ಲೈನ್ ಶಾಪಿಂಗ್ ಗೆ ಹೆಚ್ಚು ಮೊರೆ ಹೋಗುತ್ತಿದ್ದಾರಂತೆ. ಇದರಿಂದಾಗಿ ಆನ್ ಲೈನ್ ಶಾಪಿಂಗ್ ಗಳು ಜಾಸ್ತಿಯಾಗಿವೆ. 
ಜನಸಂದಣಿ ಸೇರುವಲ್ಲಿ, ಮಾರುಕಟ್ಟೆಗಳಲ್ಲಿ, ಸೂಪರ್ ಮಾರ್ಕೆಟ್ ಗಳಲ್ಲಿ ಕಳೆದೊಂದು ವಾರ-ಹತ್ತು ದಿನಗಳಿಂದ ಜನರು ವಿರಳವಾಗಿವೆ. ಇದರ ಬದಲು ಆನ್ ಲೈನ್ ಮೂಲಕ ಹೆಚ್ಚೆಚ್ಚು ಖರೀದಿಸುತ್ತಿದ್ದಾರೆ. 


ಬೆಂಗಳೂರಿನ ಆರ್ ಟಿ ನಗರ ನಿವಾಸಿ ಜೈದೀಪ್ ಪ್ರಕಾಶ್, ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಸುಮಾರು 200 ಮನೆಗಳ ಜನರು ಕೊರೋನಾ ವೈರಸ್ ನಿಂದಾಗಿ ಆನ್ ಲೈನ್ ಶಾಪಿಂಗ್ ಮೊರೆ ಹೋಗಿದ್ದಾರೆ ಎನ್ನುತ್ತಾರೆ.


ಸಾಮಾನ್ಯವಾಗಿ ಸೂಪರ್ ಮಾರ್ಕೆಟ್ ಗಳಲ್ಲಿ ಅದರಲ್ಲೂ ವಾರಾಂತ್ಯಗಳಲ್ಲಿ ಜನರು ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ. ನಮ್ಮ ಮನೆಗೆ ಹತ್ತಿರ ಡಿ ಮಾರ್ಟ್ ಸ್ಟೋರ್ ಇದೆ. ಆದರೆ ಅಲ್ಲಿಗೆ ಸದ್ಯಕ್ಕೆ ಹೋಗುವುದಿಲ್ಲ. ಮನೆಗೆ ಬೇಕಾದ ದಿನಸಿ, ತರಕಾರಿಗಳಿಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡುತ್ತೇವೆ ಎಂದರು.


ಜೆ ಸಿ ನಗರದ ಪಿಕೆ ಮಾರ್ಟಿನ್ ಸಿಬ್ಬಂದಿ, ನಮ್ಮ ಮಳಿಗೆಗೆ ಕಳೆದೊಂದು ವಾರದಿಂದ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಿಲ್ಲ. ತಿಂಗಳ ಮಧ್ಯ ಭಾಗದಲ್ಲಿ ಸಾಮಾನ್ಯವಾಗಿ ನಮ್ಮ ಮಳಿಗೆಯಲ್ಲಿ ತಂದ ಅರ್ಧದಷ್ಟು ಸಾಮಾನುಗಳು ಖಾಲಿಯಾಗುತ್ತಿದ್ದವು. ತಿಂಗಳ ಕೊನೆಗೆ ಮತ್ತೆ ಸಂಗ್ರಹಿಸಬೇಕಾಗುತ್ತಿತ್ತು. ಆದರೆ ಈಗ, ತಂದಿರುವ ಸಾಮಾನುಗಳಲ್ಲಿ ಮುಕ್ಕಾಲು ಭಾಗ ಹಾಗೆಯೇ ಇದ್ದು ಮಾರಾಟದಲ್ಲಿ ಶೇಕಡಾ 60 ಭಾಗ ಕುಸಿದಿದೆ. ನಮ್ಮ ಎಂದಿನ ಗ್ರಾಹಕರು ಕೂಡ ಆನ್ ಲೈನ್ ಶಾಪಿಂಗ್ ಮೊರೆ ಹೋಗಿದ್ದಾರೆ ಎಂದರು.


ಸೋಮುಸಂದರಪಾಳ್ಯದ ಶಾಪ್ ಆನ್ ಸೂಪರ್ ಮಾರ್ಕೆಟ್ ಸಿಬ್ಬಂದಿ, ಕಳೆದ ಕೆಲ ದಿನಗಳಿಂದ ಇಲ್ಲಿಗೆ ಒಂದೆರಡು ಸಾಮಾನುಗಳನ್ನು ಖರೀದಿಸಲು ಜನರು ಬಂದು ಹೋಗುತ್ತಾರೆ. ಶೇಕಡಾ 80ಕ್ಕಿಂತ ಹೆಚ್ಚು ನಮ್ಮ ಗ್ರಾಹಕರು ಬರುವುದು ಕಡಿಮೆಯಾಗಿದ್ದು ನಮಗೆ ಸಾಕಷ್ಟು ನಷ್ಟವಾಗಿದೆ ಎಂದರು.


ಆನ್ ಲೈನ್ ದಿನಸಿ ಮಳಿಗೆಯ ಸಿಇಒ ಅಲ್ಬಿಂದರ್ ಸಿಂಡ್ಸಾ ಹೇಳುವುದು ಹೀಗೆ: ಕಳೆದ ಕೆಲ ದಿನಗಳಿಂದ ನಮ್ಮಲ್ಲಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ದಿನನಿತ್ಯದ ಆಹಾರ ಪದಾರ್ಥಗಳನ್ನು ಖರೀದಿಸುತ್ತಿದ್ದಾರೆ. ಮುಂಬೈ, ಬೆಂಗಳೂರು, ಪುಣೆ ಮತ್ತು ಅಹಮದಾಬಾದ್ ಗಳಲ್ಲಿ  ಆನ್ ಲೈನ್ ಶಾಪಿಂಗ್ ಶೇಕಡಾ 80ರಷ್ಟು ಹೆಚ್ಚಾಗಿದ್ದು ದೆಹಲಿ, ಎನ್ಆರ್ ಸಿ ಮತ್ತು ಹೈದರಾಬಾದ್ ಗಳಲ್ಲಿ ಶೇಕಡಾ 60ರಷ್ಟು ಹೆಚ್ಚಾಗಿದೆ. ವೈಯಕ್ತಿಕ ಸ್ವಚ್ಛತಾ ಸಾಮಗ್ರಿಗಳಿಗೆ ಕೊರೋನಾ ವೈರಸ್ ನಿಂದಾಗಿ ಬೇಡಿಕೆ ಹೆಚ್ಚಾಗಿದೆ. ನಂತರ ನೆಲ ಸ್ವಚ್ಛಗೊಳಿಸುವ, ಶಕ್ತಿ ವರ್ಧಕ ಉತ್ಪನ್ನಗಳಿಗೂ ಬೇಡಿಕೆ ಜಾಸ್ತಿಯಾಗಿದೆ. ಹಿಟ್ಟು, ದಾಲ್ ಮತ್ತು ಅಕ್ಕಿಗಳನ್ನು ಬೃಹತ್ ಪ್ರಮಾಣದಲ್ಲಿ ಕೊಳ್ಳುತ್ತಾರೆ.ನಮ್ಮ ಮಳಿಗೆಯ ಕೋಣೆಗಳನ್ನು ಪ್ರತಿದಿನ ಸ್ಯಾನಿಟೈಸರ್ ಹಾಕಿ ತೊಳೆಯುತ್ತೇವೆ. ನಮ್ಮ ಡೆಲಿವರಿ ಬಾಯ್, ಗ್ರಾಹಕರ ಸುರಕ್ಷತೆ ನಮ್ಮ ಆದ್ಯತೆ ಎಂದರು.


ಆನ್ ಲೈನ್ ನಲ್ಲಿ ಬಹುತೇಕ ಮಂದಿ ಮೊರೆಹೋಗುತ್ತಿರುವುದರಿಂದ ಮಳಿಗೆಗಳಿಗೆ ಸಮಯಕ್ಕೆ ಸರಿಯಾಗಿ ಗ್ರಾಹಕರ ಮನೆಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ವಿಳಂಬಕ್ಕೆ ಕ್ಷಮೆಯಿರಲಿ ಎಂದು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಗ್ರಾಹಕರಲ್ಲಿ ಬಿಗ್ ಬಾಸ್ಕೆಟ್ ಕಂಪೆನಿ ಕ್ಷಮೆ ಕೋರುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com