ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ಭೀತಿ ಹೆಚ್ಚಾಗಿದ್ದು, ಈಗಾಗಲೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 9 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಲು ಸೂಚಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲೂ ಕೊರೋನಾ ಭೀತಿಯಿಂದಾಗಿ ಬಸ್ ಪ್ರಯಾಣಿಕರ ಸಂಖ್ಯೆ ಭಾರೀ ಇಳಿಮುಖವಾಗಿದೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಗೂ ಕೊರೋನಾ ಬಿಸಿ ತಟ್ಟಿದೆ. ಸೋಮವಾರ 468 ಮಾರ್ಗಗಳ ಸಂಚಾರ ರದ್ದಾಗಿದ್ದು ಸುಮಾರು 5.30 ಕೋಟಿ ರು ಮೊತ್ತದ ಹಣ ನಷ್ಟವಾಗಿದೆ.
ಒಟ್ಟಾರೆ 818 ಮಾರ್ಗಗಳ ಸಂಚಾರ ರದ್ದಾಗಿದ್ದು, ಅವತಾರ್ ರಿಸರ್ವೇಸನ್ ಪ್ರತಿದಿನಕ್ಕೆ 22 ಸಾವಿರದಿಂದ 23 ಸಾವಿರ ಇದ್ದದ್ದು 5,500 ಕ್ಕೆ ಇಲಿದಿದೆ, ಮಂಗಳವಾರದಿಂದ ಕೆಎಸ್ ಆರ್ ಟಿಸಿ ಪ್ರೀಮಿಯಮ್ ಬಸ್ ಗಳಲ್ಲಿದ್ದ ಎಲ್ಲಾ ಬ್ಲಾಂಕೆಟ್ ಮತ್ತು ಬೆಡ್ ಸ್ಪ್ರೆಡ್ ಗಳನ್ನು ತೆಗೆಯಲಾಗಿದೆ.
ಬಿಎಂಟಿಸಿ ಕೂಡ 1.8 ಕೋಟಿ ರು ನಷ್ಟ ಅನುಭವಿಸಿದೆ. ಪ್ರತಿದಿನ ಬಸ್ ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಚಾಲಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಪೂರೈಸುತ್ತಿದ್ದೇವೆ ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ ರೆಡ್ಡಿ ತಿಳಿಸಿದ್ದಾರೆ.
Advertisement