ಗದಗ ಜಿಲ್ಲೆಯ ಈ ಗ್ರಾಮ ಒಂದು ವಾರ ಸಂಪೂರ್ಣ ಸ್ತಬ್ಧ: ಸ್ವಯಂ ಕರ್ಫ್ಯೂ ಹಾಕಿಕೊಂಡ ಗ್ರಾಮಸ್ಥರು!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂ ಘೋಷಿಸುವ ಮುನ್ನವೇ ಗದಗ ಜಿಲ್ಲೆಯ ಗ್ರಾಮವೊಂದು ಈಗಾಗಲೇ ಬಹುತೇಕ ಬಂದ್ ಆಗಿದೆ.
ಗದಗ ಜಿಲ್ಲೆಯ ಈ ಗ್ರಾಮ ಒಂದು ವಾರ ಸಂಪೂರ್ಣ ಸ್ತಬ್ಧ: ಸ್ವಯಂ ಕರ್ಫ್ಯೂ ಹಾಕಿಕೊಂಡ ಗ್ರಾಮಸ್ಥರು!
Updated on

ಬೆಳಗಾವಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂ ಘೋಷಿಸುವ ಮುನ್ನವೇ ಗದಗ ಜಿಲ್ಲೆಯ ಗ್ರಾಮವೊಂದು ಈಗಾಗಲೇ ಬಹುತೇಕ ಬಂದ್ ಆಗಿದೆ.


ಗದಗದಿಂದ 44 ಕಿಲೋ ಮೀಟರ್ ದೂರದಲ್ಲಿರುವ ಕೊಟಬಾಲ್ ಗ್ರಾಮದಲ್ಲಿ ಕಳೆದ ಬುಧವಾರದಿಂದ ಬಂದ್ ರೀತಿಯ ವಾತಾವರಣವಿದೆ. ಕೊರೋನಾ ವೈರಸ್ ಸೋಂಕು ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿಯಲ್ಲಿ ನಡೆಸಿದ ಸಭೆಯಲ್ಲಿ ಗ್ರಾಮಸ್ಥರೆಲ್ಲರೂ ಅವಿರೋಧವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಗ್ರಾಮದ ಹಿರಿಯರು ನೀಡಿರುವ ಸಲಹೆಯಂತೆ ಒಂದು ವಾರ ಗ್ರಾಮಸ್ಥರೆಲ್ಲರೂ ತಮ್ಮ ತಮ್ಮ ಮನೆಯಿಂದ ಹೊರಗೆ ಬರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿರ್ಣಯ ಹೊರಡಿಸಲಾಯಿತು.


ಗ್ರಾಮಸ್ಥರು ಸ್ವ ನಿರ್ಬಂಧ ಹಾಕಿಕೊಂಡಿದ್ದು ಇಡೀ ಊರಿಗೆ ಊರೇ ಚಟುವಟಿಕೆಗಳಿಂದ ಬಂದ್ ಆಗಿದೆ. ಗ್ರಾಮಸ್ಥರು ಒಟ್ಟೊಟ್ಟಿಗೆ ಸೇರಬಾರದು ಎಂದು ತಡೆಯೊಡ್ಡಲಾಗಿದೆ. 8 ದಿನಗಳ ಕಾಲ ಅಕ್ಕಪಕ್ಕದ ಗ್ರಾಮಸ್ಥರು ಒಂದೂರಿನಿಂದ ಇನ್ನೊಂದೂರಿಗೆ ಹೋಗುತ್ತಿಲ್ಲ, ಕೃಷಿ ಮತ್ತು ಇತರ ಚಟುವಟಿಕೆಗಳು ಸಂಪೂರ್ಣ ಸ್ಥಬ್ಧವಾಗಿದೆ. ಯಾವುದಾದರೂ ತುರ್ತು ಸಂದರ್ಭದಲ್ಲಿ ಗ್ರಾಮಸ್ಥರು ಮಾಸ್ಕ್ ಹಾಕಿಕೊಂಡು ಹೊರಗೆ ಹೋಗುತ್ತಾರೆ. ನಿವಾಸಿಗಳು ತಮ್ಮ ತಮ್ಮ ಮನೆಗಳ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದಾರೆ.
ತಾಲ್ಲೂಕು ಪಂಚಾಯತ್ ಸದಸ್ಯ ಸಿದ್ದಣ್ಣ ಯಲಗಿ, ಕೊರೋನಾ ವೈರಸ್ ಮಾರಕವಾಗಿದ್ದು ನಮ್ಮ ಗ್ರಾಮಕ್ಕೆ ಬರಲಿಕ್ಕಿಲ್ಲ ಎಂದು ಹೇಳುವುದು ಹೇಗೆ, ಹೀಗಾಗಿ ನಾವು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಆರೋಗ್ಯಾಧಿಕಾರಿಗಳು ನೀಡಿದ ಸಲಹೆಯನ್ನು ಪಾಲಿಸುತ್ತಿದ್ದೇವೆ ಎಂದಿದ್ದಾರೆ.


ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿದ್ಲೇಂಶ್ ಪಾಟೀಲ್, ಕೊಟಬಾಲ್ ಮಾದರಿ ಗ್ರಾಮವಾಗಿದ್ದು ನಿವಾಸಿಗಳು ವಾರದವರೆಗೆ ಬಂದ್ ಘೋಷಿಸಿದೆ. ಇಲ್ಲಿ ಸಾಮಾಜಿಕ ಅಂತರವನ್ನು ಗ್ರಾಮಸ್ಥರು ಪಾಲಿಸುತ್ತಿರುವುದರಿಂದ ಕೊರೋನಾ ಹಬ್ಬುವ ಸಾಧ್ಯತೆ ಕಡಿಮೆಯಿರುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com