ಕೋವಿಡ್-19 ಮಾಹಿತಿಗಾಗಿ ವೆಬ್ ಸೈಟ್, ಕೂಲಿ ಕಾರ್ಮಿಕರ ಹಸಿವು ಇಂಗಿಸಲು ಸಹಾಯವಾಣಿ ಲೋಕಾರ್ಪಣೆ

ರಾಜ್ಯದಲ್ಲಿ ಕೊರೋನಾ ವೈರಾಣು(ಕೋವಿಡ್-19 ) ಕುರಿತ ಅಧಿಕೃತ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿರುವ ವೆಬ್ ಸೈಟ್ ಹಾಗೂ ಅನ್ನವಿಲ್ಲದ ಬಡ ಕೂಲಿ ಕಾರ್ಮಿಕರ ಹಸಿವು ಇಂಗಿಸಲು ಕಾರ್ಮಿಕ ಇಲಾಖೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು(ಕೋವಿಡ್-19 ) ಕುರಿತ ಅಧಿಕೃತ ಮಾಹಿತಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರೂಪಿಸಿರುವ ವೆಬ್ ಸೈಟ್ ಹಾಗೂ ಅನ್ನವಿಲ್ಲದ ಬಡ ಕೂಲಿ ಕಾರ್ಮಿಕರ ಹಸಿವು ಇಂಗಿಸಲು ಕಾರ್ಮಿಕ ಇಲಾಖೆ ಸ್ಥಾಪಿಸಿರುವ ಶುಲ್ಕ-ರಹಿತ ದೂರವಾಣಿ ಸೇವೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ನಗರದ ವಾರ್ತಾ ಸೌಧದ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರದಲ್ಲಿ ಶನಿವಾರ ಲೋಕಾರ್ಪಣೆ ಮಾಡಿದರು.

ಅಧಿಕೃತ ವೆಬ್ಸೈಟ್ : https://covid19.karnataka.gov.in/wordpress/ ಗೆ ಚಾಲನೆ ನೀಡಿದರು. ಅಲ್ಲದೆ, ಇದೇ ಸಂದರ್ಭದಲ್ಲಿ ಬಡ ಕೂಲಿ ಕಾರ್ಮಿಕರು ಹಾಗೂ ವಲಸೆ ಬಂದಿರುವ ಕಾರ್ಮಿಕರ ಹಸಿವು ನೀಗಿಸಲು ಕಾರ್ಮಿಕ ಇಲಾಖೆಯ ಸಹಾಯವಾಣಿ : 155214 ಕರೆ ಮಾಡುವ ಮೂಲಕ ಸಚಿವರು ಲೋಕಾರ್ಪಣೆ ಮಾಡಿದರು. 

ವೆಬ್ಸೈಟ್ ವೈಶಿಷ್ಟ್ಯ: ಮುಖ್ಯಮಂತ್ರಿಯವರ ಸಂದೇಶ, ಸಹಾಯವಾಣಿ ಮಾಹಿತಿ, ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಕೋವಿಡ್-19 ರ ಗುಣ-ಲಕ್ಷಣಗಳು, 21 ದಿನಗಳ ಲಾಕ್ ಡೌನ್ ವಿವರ, ಸ್ವಯಂಸೇವಕರಾಗಿ ಸೇರಬಯಸುವವರಿಗೆ ಅವಕಾಶ ಹಾಗೂ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳು, ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತು ಬಲಿಯಾದವರ ಸಂಖ್ಯೆ ಒಳಗೊಂಡಂತೆ ಕೋವಿಡ್-19 ದೃಢಪಟ್ಟಿರುವವರ ಅಂಕಿ-ಸಂಖ್ಯೆ ಕುರಿತ ತಾಜಾ ಮಾಹಿತಿ ಈ ವೆಬ್ ಸೈಟ್ ಲಭ್ಯವಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಅನ್ನವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕೂಲಿಕಾರರು ಸಹಾಯವಾಣಿಗೆ ಕರೆ ಮಾಡಿದಲ್ಲಿ ಅವರು ಎಲ್ಲಿಂದ ಕರೆ ಮಾಡಿದ್ದಾರೆ? ಎಂಬುದನ್ನು ದೃಢಪಡಿಸಿಕೊಂಡು ಸಮೀಪದ ಇಂದಿರಾ ಕ್ಯಾಂಟೀನ್ ಅಥವಾ ಸರ್ಕಾರೇತರ ಸಂಘ-ಸಂಸ್ಥೆಗಳ ನೆರವಿನಿಂದ ಅವರು ಇದ್ದಲ್ಲೇ ಊಟದ ವ್ಯವಸ್ಥೆ ಮಾಡಲು ಸಹಾಯವಾಣಿ ನೆರವು ಒದಗಿಸಲಿದೆ. ಅಲ್ಲದೆ, ಬೇರೆ ಊರುಗಳಿಂದ ಬಂದು ನೆಲೆ ಇಲ್ಲದ ಜನರಿಗೆ ನೆಲೆ ಒದಗಿಸುವ ಪ್ರಯತ್ನವನ್ನೂ ಸಹಾಯವಾಣಿ ಮಾಡಲಿದೆ ಎಂದರು.

ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 ಉಪಟಳ ಅತೀ ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ. ಮುಂದೆಂದೂ ಮನುಕುಲಕ್ಕೆ ಇಂತಹ ಸಮಸ್ಯೆಗಳು ಕಾಡದಿರಲಿ ಎಂಬ ಶುಭ ಹಾರೈಕೆಯೊಂದಿಗೆ ಈ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ, ಸಾವು ಇನ್ನಿತರ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳಬೇಕಾದ ಸಂಕಷ್ಟ ಎದುರಿಸುತ್ತಿರುವ ಕೂಲಿ ಕಾರ್ಮಿಕರಿಗೂ ಸಹಾಯವಾಣಿ ಸಹಾಯಕ್ಕೆ ಬರಲಿದೆ ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿಯವರ ಇ-ಗವರ್ನೆನ್ಸ್ ಸಲಹೆಗಾರ ಬೇಳೂರು ಸುದರ್ಶನ, ಕಾರ್ಮಿಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕ್ಯಾಪ್ಟನ್ ಪಿ. ಮಣಿವಣ್ಣನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್ ಎನ್ ಸಿದ್ದರಾಮಪ್ಪ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com