ಬೆಂಗಳೂರು ಕೇಂದ್ರ ಕಾರಾಗೃಹ ಈಗ ವಿವಿಐಪಿ ವಲಯ: ಜೈಲಿನಲ್ಲಿರುವ ರಾಜಕೀಯ ನಾಯಕರೆ ಈಗ ಸುದ್ದಿಯ ಕೇಂದ್ರ ಬಿಂದು!

ಕೇಂದ್ರ ಕಾರಾಗೃಹ ಈಗ ವಸ್ತುಶಃ ವಿವಿಐಪಿ ಕೈದಿಗಳ ಕೇಂದ್ರವಾಗಿದೆ, ಶ್ರೀಮಂತ, ರಾಜಕೀಯ ನಾಯಕರು, ಖ್ಯಾತ, ಗ್ಲಾಮರ್ ಹೊಂದಿರುವವರು ಕಾರಾಗೃಹ ಸೇರಿ ಸುದ್ದಿಯ ಕೇಂದ್ರ ಬಿಂದುವಾಗಿದೆ. 
ಬೆಂಗಳೂರು ಕೇಂದ್ರ ಕಾರಾಗೃಹ
ಬೆಂಗಳೂರು ಕೇಂದ್ರ ಕಾರಾಗೃಹ
Updated on

ಬೆಂಗಳೂರು: ಕೇಂದ್ರ ಕಾರಾಗೃಹ ಈಗ ವಸ್ತುಶಃ ವಿವಿಐಪಿ ಕೈದಿಗಳ ಕೇಂದ್ರವಾಗಿದೆ, ರಾಜಕೀಯ ನಾಯಕರು, ಖ್ಯಾತ, ಗ್ಲಾಮರ್ ಹೊಂದಿರುವವರು ಕಾರಾಗೃಹ ಸೇರಿ ಸುದ್ದಿಯ ಕೇಂದ್ರ ಬಿಂದುವಾಗಿದೆ. 

ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಈಗ ಮಾಜಿ ಮೇಯರ್ ಸಂಪತ್ ರಾಜ್, ಕೇರಳದ ಮಾಜಿ ಸಚಿವ ಕೊಡಿಯಾರಿ ಬಾಲಕೃಷ್ಣ ಪುತ್ರ ಬಿನೀಶ್ ಕೊಡಿಯಾರಿ, ತಮಿಳು ನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಹಚರೆ ಶಶಿಕಲಾ, ಡ್ರಗ್ಸ್ ಆರೋಪದಲ್ಲಿ ಬಂಧಿತರಾಗಿರುವ ರಾಗಿಣಿ ದ್ವಿವೇದಿ ಮತ್ತು ಸಂಜನಾ ಈಗಾಗಲೇ ಇದ್ದಾರೆ. 

ಈಗ ಅವರ ಜೊತೆ ಹೊಸದಾಗಿ ಸೇರ್ಪಡೆಯಾಗಿದ್ದು ಮಾಜಿ ಸಚಿವರಾದ ರೋಶನ್ ಬೇಗ್ . ಐಎಂಎ ಹಗರಣದಲ್ಲಿ ಕೈದಿ ಸಂಖ್ಯೆ 8823 ಆಗಿ ರೋಶನ್ ಬೇಗ್ ಜೈಲು ಸೇರಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಮನ್ಸೂರ್ ಖಾನ್ ನ ಆಡಿಯೊ ಟೇಪ್ ಹೊರಬಂದು ಅದರಲ್ಲಿ ರೋಶನ್ ಬೇಗ್ 400 ಕೋಟಿ ಲಂಚ ಪಡೆದಿದ್ದರು ಎಂಬ ಆರೋಪ ಕೇಳಿಬಂದಾಗಿನಿಂದ ಸಿಬಿಐ ತನಿಖೆಯ ಕೆಂಗಣ್ಣಿಗೆ ರೋಶನ್ ಬೇಗ್ ಗುರಿಯಾಗಿದ್ದರು.


ಇನ್ನು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡರ್ ಕೊಲೆ ಕೇಸಿನಲ್ಲಿ ಆರೋಪಿಯಾಗಿ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದಾರೆ. ಈ ಕೇಸು 2016ರಲ್ಲಿ ಭಾರೀ ವಿವಾದ ಸೃಷ್ಟಿಸಿತ್ತು.

ಈ ವರ್ಷ ಜೈಲು ಸೇರಿರುವ ಎಲ್ಲಾ ವಿವಿಐಪಿಗಳು ಸಾರ್ವಜನಿಕ ವಲಯದಲ್ಲಿ ಅಪರಾಧ ಮತ್ತು ಹಗರಣ ಪ್ರಕರಣಗಳಲ್ಲಿ ಆರೋಪಿಗಳೇ. ಬೆಂಗಳೂರಿನ ಡಿ ಜೆ ಹಳ್ಳಿ ಬೆಂಕಿ ಗಲಭೆ ಪ್ರಕರಣದ ಮುಖ್ಯ ಆರೋಪಿ ಸಂಪತ್ ರಾಜ್. 

ಬೆಂಗಳೂರಿನ ಕೇಂದ್ರ ಕಾರಾಗೃಹ ವಿವಿಐಪಿ ಕೈದಿಗಳಿಗೆ ಹೊಸದೇನಲ್ಲ. ರಾಜಕೀಯ ಜೀವನ ಮತ್ತು ಕಾರಾಗೃಹ ಒಟ್ಟೊಟ್ಟಿಗೆ ಹೋಗುವಂಥದ್ದು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 25 ದಿನಗಳ ಕಾಲ ಹಿಂದಿನ ಬಾರಿ ಮುಖ್ಯಮಂತ್ರಿಯಾದ ನಂತರ ಇದೇ ಕಾರಾಗೃಹದಲ್ಲಿ ಕಳೆದಿದ್ದರು. ಗಾಲಿ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಎಸ್ ಎನ್ ಕೃಷ್ಣಯ್ಯ ಶೆಟ್ಟಿ ಕೂಡ ಇದೇ ಕಾರಾಗೃಹ ವಾಸ ಅನುಭವಿಸಿ ಹೊರಬಂದಿದ್ದರು.

ತುರ್ತು ಪರಿಸ್ಥಿತಿ ಸಮಯದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹ ಸೇರಿದ್ದರು ಮಾಜಿ ಪ್ರಧಾನ ಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಮಾಜಿ ಗೃಹ ಸಚಿವ ಲಾಲ್ ಕೃಷ್ಣ ಅಡ್ವಾಣಿ. ರಾಜಕೀಯ ನಾಯಕರು ಇಲ್ಲಿ ಕೈದಿಗಳಾಗಿ ಸೇರಿದಾಗ ಅನಾರೋಗ್ಯದ ನೆಪವೊಡ್ಡಿ ಜೈಲಿನ ಆಸ್ಪತ್ರೆಗೆ ಸೇರುತ್ತಾರೆ, ಆ ಮೂಲಕ ಕಾರಾಗೃಹ ವಾಸವನ್ನು ತಪ್ಪಿಸಿಕೊಳ್ಳಲು ನೋಡುತ್ತಾರೆ.

ನಮ್ಮ ಕಾನೂನಿನಲ್ಲಿ ವಿಚಾರಣಾಧೀನ ಕೈದಿಗಳು ಮತ್ತು ಅಪರಾಧಿಗಳ ಮಧ್ಯೆ ವ್ಯತ್ಯಾಸವಿರುತ್ತದೆ. ನ್ಯಾಯಾಂಗ ಬಂಧನಕ್ಕೊಳಗಾಗಿರುವವರನ್ನು ಒಂದೇ ಜೈಲಿನಲ್ಲಿ ಒಟ್ಟಿಗೆ ಹಾಕುತ್ತಾರೆ, ಅಪರಾಧಿಗಳೆಂದು ಸಾಬೀತಾದರೆ ಅವರನ್ನು ಕಾರಾಗೃಹದ ಪ್ರತ್ಯೇಕ ವಿಭಾಗದಲ್ಲಿ ಕೂಡಿ ಹಾಕುತ್ತಾರೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿ 60 ದಿನಗಳನ್ನು ಕಳೆದಿದ್ದರು. ತಿಹಾರ್ ಜೈಲಿನಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಕಳೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com