ಬೆಂಗಳೂರು: ಅಕ್ರಮ ಹಣ ಭಾರತದಿಂದ ಹೊರದೇಶಗಳಿಗೆ ರವಾನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಮುಂದಾಗಿದ್ದಾರೆ.
ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಈತ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ದಂಧೆ, ರಾಜಕೀಯ, ಸಿನಿಮಾ ಕ್ಷೇತ್ರದ ವ್ಯಕ್ತಿಗಳಿಗೆ ಪ್ರಾಣ ಬೆದರಿಕೆ ಹಾಕಿ ಅಕ್ರಮವಾಗಿ ಹಣ ಗಳಿಸಿ ಭಾರತದಿಂದ ಹೊರದೇಶಗಳಿಗೆ ಹಣ ರವಾನಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈತನ ವಿಚಾರಣಗೆ ಜಾರಿ ನಿರ್ದೇಶನಾಲಯ ಮುಂದಾಗಿದೆ.
ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದ ಸೆನಗಲ್ ನಲ್ಲಿ ಪೂಜಾರಿಯನ್ನು ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ರವಿ ಪೂಜಾರಿ ವಿರುದ್ಧ ಬೆಂಗಳೂರಿನಲ್ಲಿ 39, ಮಂಗಳೂರಿನಲ್ಲಿ 36 ಸೇರಿ 93ಕ್ಕೂ ಹೆಚ್ಚು ಪ್ರಕರಣಗಳಿದೆ.
ಕಳೆದ ಜನವರಿಯಲ್ಲಿ ರವಿ ಪೂಜಾರಿ ಆಪ್ತ ಗುಲಾಂ ಎಂಬಾತನನ್ನು ಬಂಧಿಸಿ 10 ದಿನಗಳ ಕಾಲ ವಿಚಾರಣೆ ನಡಿಸಿದಾಗ ಸಿಸಿಬಿ ಅಧಿಕಾರಿಗಳ ಎದುರು ರವಿ ಪೂಜಾರಿ ಅಕ್ರಮ ಹಣದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದ ಎನ್ನಲಾಗ್ತಿದೆ. ಸದ್ಯ ಇದರ ಆಧಾರದ ಮೇರೆಗೆ ಪರಪ್ಪನ ಅಗ್ರಹಾರಕ್ಕೆ ತೆರಳಿ ಪೂಜಾರಿಯ ವಿಚಾರಣೆಯನ್ನ ಇಡಿ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
Advertisement