ಕೋವಿಡ್-19 ಸಾಂಕ್ರಾಮಿಕ: ದಸರಾ, ದೀಪಾವಳಿಗೆ ಅವಧಿಗೆ ಮುನ್ನವೇ ಶಾಪಿಂಗ್, ಗ್ರಾಹಕರ ಖರೀದಿ ಪಟ್ಟಿಯಲ್ಲಿ ಕಡಿತ

ಕೋವಿಡ್-19 ಸಾಂಕ್ರಾಮಿಕ ಹಬ್ಬದ ಸಮಯದಲ್ಲಿ ಜನರ ಶಾಪಿಂಗ್ ರೀತಿನೀತಿಗಳನ್ನು ಬದಲಾಯಿಸಿದೆ. ಈ ಬಾರಿ ಜನರು ಆನ್ ಲೈನ್ ನಲ್ಲಿ ಶಾಪಿಂಗ್ ಗೆ ಹೆಚ್ಚು ಒತ್ತು ನೀಡುವುದಲ್ಲದೆ ದಸರಾ ಮತ್ತು ದೀಪಾವಳಿಗೆ ಬೇಗನೆ ಖರೀದಿಗೆ ಮುಂದಾಗಿದ್ದಾರೆ. ಕೊನೆ ಕ್ಷಣದಲ್ಲಿ ಶಾಪಿಂಗ್ ಗೆಂದು ಅಂಗಡಿಗಳಿಗೆ ಹೋಗುತ್ತಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ಹಬ್ಬದ ಸಮಯದಲ್ಲಿ ಜನರ ಶಾಪಿಂಗ್ ರೀತಿನೀತಿಗಳನ್ನು ಬದಲಾಯಿಸಿದೆ. ಈ ಬಾರಿ ಜನರು ಆನ್ ಲೈನ್ ನಲ್ಲಿ ಶಾಪಿಂಗ್ ಗೆ ಹೆಚ್ಚು ಒತ್ತು ನೀಡುವುದಲ್ಲದೆ ದಸರಾ ಮತ್ತು ದೀಪಾವಳಿಗೆ ಬೇಗನೆ ಖರೀದಿಗೆ ಮುಂದಾಗಿದ್ದಾರೆ. ಕೊನೆ ಕ್ಷಣದಲ್ಲಿ ಶಾಪಿಂಗ್ ಗೆಂದು ಅಂಗಡಿಗಳಿಗೆ ಹೋಗುತ್ತಿಲ್ಲ.

ಅಲ್ಲದೆ ವಾರಾಂತ್ಯದ ಮತ್ತು ಡಿಸ್ಕೌಂಟ್ ಆಫರ್ ಗಳಿಗೂ ಕಾಯುತ್ತಿಲ್ಲ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ನಾವು ಅಪಾಯ ತಂದುಕೊಳ್ಳಲು ಸಿದ್ಧರಿಲ್ಲ. ಈ ಬಾರಿ ಮನೆಗೆ ಯಾರನ್ನೂ ಕರೆಯಲು ಸಾಧ್ಯವಿಲ್ಲದಿರುವುದರಿಂದ ಮತ್ತು ಎಲ್ಲಿಗೂ ಹೋಗಲು ಸಾಧ್ಯವಾಗದಿರುವುದರಿಂದ ದಸರಾ ಮತ್ತು ದೀಪಾವಳಿಗೆ ಕೇವಲ ಒಂದು ಬಟ್ಟೆ ಖರೀದಿಸಲಿದ್ದೇವೆ. ಸಾಮಾನ್ಯವಾಗಿ ನವರಾತ್ರಿ ಸಮಯದಲ್ಲಿ ನಾವು ಶಾಪಿಂಗ್ ಮಾಡುತ್ತೇವೆ. ಆದರೆ ಈ ಬಾರಿ ಈಗಾಗಲೇ ಹೊಸಬಟ್ಟೆ ಖರೀದಿಸಿ ಆಗಿದೆ ಎಂದು ಸಾಫ್ಟ್ ವೇರ್ ಎಂಜಿನಿಯರ್ ತೇಜಸ್ವಿನಿ ಎಲ್ ಹೇಳುತ್ತಾರೆ.

ಮಡಕೆ ಮಾಡುವವರಿಗೆ ಈಗಲೇ ದೀಪಾವಳಿ ಹಣತೆಗೆ ಬೇಡಿಕೆ: ನಮ್ಮಲ್ಲಿ ಇರುವ ಸಣ್ಣ ಸಣ್ಣ ವಸ್ತುಗಳು, ವಿಷಯಗಳಿಂದಲೇ ನಾವು ಸಂತೋಷವಾಗಿರಬಹುದು ಎಂಬುದನ್ನು ನಮಗೆ ಲಾಕ್ ಡೌನ್ ಮತ್ತು ಅನ್ ಲಾಕ್ ಡೌನ್ ಹೇಳಿಕೊಟ್ಟಿದೆ. ಇಷ್ಟು ವರ್ಷ ಹಬ್ಬಗಳ ಸಮಯದಲ್ಲಿ ನಾವು ಖರೀದಿಸುತ್ತಿದ್ದ ವಸ್ತುಗಳು ಮತ್ತು ಈ ವರ್ಷ ಏನೆಲ್ಲಾ ಕಡಿತ ಮಾಡಬಹುದು ಎಂಬುದನ್ನು ನಾವು ಪಟ್ಟಿ ಮಾಡಿದೆವು. ಕೇವಲ ಆಹಾರ ಬಳಕೆ ಮತ್ತು ಪೂಜೆ ಸಾಮಗ್ರಿಗಳು ಉಳಿದುಕೊಂಡಿವೆ, ಅದನ್ನು ನಾವು ಆನ್ ಲೈನ್ ನಲ್ಲಿ ಖರೀದಿಸಲಿದ್ದೇವೆ ಎಂದು ಗೃಹಿಣಿ ವಿಭಾ ಹೇಳುತ್ತಾರೆ.

ಮಣ್ಣಿನ ಹಣತೆ ತಯಾರಿಸುವ ಮಡಕೆದಾರರಿಗೆ ಈಗಲೇ ಬೇಡಿಕೆ ಬಂದಿದೆ. ಸಾಮಾನ್ಯವಾಗಿ ದಸರಾ ಮುಗಿದ ನಂತರ ಹಣತೆಗೆ ಬೇಡಿಕೆ ಬರುತ್ತದೆ. ಆದರೆ ಈ ವರ್ಷ ಈಗಾಗಲೇ ಹಣತೆ ಮಾರಾಟ ಮಾಡಲು ಆರಂಭಿಸಿದ್ದೇವೆ ಎಂದು ಮೆಜೆಸ್ಟಿಕ್ ಪ್ರದೇಶದಲ್ಲಿ ಮಣ್ಣಿನ ಹಣತೆ ಮಾರಾಟ ಮಾಡುವ ಕಮಲ್ ಎಂಬುವವರು ಹೇಳುತ್ತಾರೆ.

ಕಮರ್ಷಿಯಲ್ ಸ್ಟ್ರೀಟ್ ಶಾಪ್ ಕೀಪರ್ ಅಸೋಸಿಯೇಷನ್ ಉಪಾಧ್ಯಕ್ಷ ಅಜಯ್ ಮೊಟ್ವನಿ, ಸೆಪ್ಟೆಂಬರ್ ನಂತರ ಮಾರಾಟ ಸ್ವಲ್ಪ ಹೆಚ್ಚಾಗುತ್ತಿದೆ. ಅಕ್ಟೋಬರ್ ಕೊನೆಗೆ ಶೇಕಡಾ 60ರಷ್ಟು ಮಾರಾಟವಾಗಬಹುದು ಎಂದು ಅಂದುಕೊಂಡಿದ್ದೇವೆ. ವಾರಾಂತ್ಯಗಳಲ್ಲಿ ಗ್ರಾಹಕರು ಅಂಗಡಿಗಳಿಗೆ ಹಿಂದೆ ಬರುತ್ತಿದ್ದರು, ಆದರೆ ಕೊರೋನಾ ಬಂದ ಮೇಲೆ ಈಗ ವಾರದ ದಿನಗಳಲ್ಲಿ ಗ್ರಾಹಕರು ಹೆಚ್ಚಾಗಿ ಬರುತ್ತಾರೆ. ನಿಧಾನವಾಗಿ ಚಟುವಟಿಕೆ ಆರಂಭವಾಗುತ್ತಿರುವ ಲಕ್ಷಣವಿದು ಎನ್ನುತ್ತಾರೆ.

ಸಗಟು ಮಾರಾಟ ಮಾರುಕಟ್ಟೆ ವ್ಯವಹಾರ ಇನ್ನೂ ಚೇತರಿಕೆ ಕಂಡುಬಂದಿಲ್ಲ. ತಮ್ಮಲ್ಲಿರುವ ಚಿಲ್ಲರೆ ವಸ್ತುಗಳನ್ನು ಮೊದಲು ಮಾರಾಟ ಮಾಡಿ ಸಗಟು ಮಾರಾಟಗಾರರಿಗೆ ಹಣ ನೀಡಬೇಕು. ಆರ್ಥಿಕತೆ ಮತ್ತು ಜನರ ಆರೋಗ್ಯ ಇನ್ನೂ ಚೇತರಿಕೆ ಕಾಣದಿರುವುದರಿಂದ ಮಾರುಕಟ್ಟೆಯಲ್ಲಿ ವ್ಯವಹಾರ ಇನ್ನೂ ಸಂಪೂರ್ಣವಾಗಿ ಚಟುವಟಿಕೆ ಕಾಣುತ್ತಿಲ್ಲ ಎಂದು ಸಗಟು ಬಟ್ಟೆ ವ್ಯಾಪಾರಿಗಳ ಒಕ್ಕೂಟದ ಸಜ್ಜನ್ ರಾಜ್ ಮೆಹ್ತಾ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com