ಟಿಎನ್ಐಇ ಇಂಪ್ಯಾಕ್ಟ್: ಮೈಸೂರಿನ ಹೆಚ್ ಡಿ ಕೋಟೆಯಲ್ಲಿ ಬಾಲಕಿಯ ಬಾಲ್ಯ ವಿವಾಹಕ್ಕೆ ತಡೆ

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಯ ಸಮಯಪ್ರಜ್ಞೆಯಿಂದ ಮೈಸೂರಿನ ಹೆಚ್ ಡಿ ಕೋಟೆ ತಾಲ್ಲೂಕಿನ ಕುಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ವಿವಾಹ ತಪ್ಪಿಹೋದ ಪ್ರಸಂಗ ನಡೆದಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ಬೆಂಗಳೂರು: ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಯ ಸಮಯಪ್ರಜ್ಞೆಯಿಂದ ಮೈಸೂರಿನ ಹೆಚ್ ಡಿ ಕೋಟೆ ತಾಲ್ಲೂಕಿನ ಕುಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯ ವಿವಾಹ ತಪ್ಪಿಹೋದ ಪ್ರಸಂಗ ನಡೆದಿದೆ.

ಹೆಚ್ ಡಿ ಕೋಟೆ ತಾಲ್ಲೂಕಿನ ಹುಂಗಲ್ಲಿ ಗ್ರಾಮದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯನ್ನು ಆಕೆಯ ಮನೆಯವರು ಬಲವಂತದಿಂದ ಮದುವೆ ಮಾಡಿಸಲು ಮುಂದಾಗಿದ್ದರು. ಈ ವೇಳೆ ಒಬ್ಬರು ವಿಷಯವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದರು. ಆಗ ಪತ್ರಿಕೆ ಪ್ರತಿನಿಧಿ ವಿಷಯವನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮತ್ತು ಪೊಲೀಸರ ಗಮನಕ್ಕೆ ತಂದರು.

ಡಿಸಿಪಿಒ ದಿವಾಕರ್ ಅವರು ಡಿಸಿಪಿ ಘಟಕ ಮತ್ತು ಅಂಗನವಾಡಿ ಸಿಬ್ಬಂದಿಯನ್ನು ಗ್ರಾಮಕ್ಕೆ ಕಳುಹಿಸಿ ನೋಡಿದಾಗ ಕುಟುಂಬಸ್ಥರು ಮೈಸೂರಿನ ಬೊಗಾಡಿಗೆ ಹೋಗಿರುವುದು ತಿಳಿಯಿತು. ವಿಶೇಷ ಬಾಲಾಪರಾಧ ಪೊಲೀಸ್ ಘಟಕ ಮತ್ತು ಇತರ ತಂಡ ಕುಟುಂಬಸ್ಥರನ್ನು ಪತ್ತೆ ಮಾಡಲು ಮುಂದಾಯಿತು. ಕೊನೆಗೂ ಹೆಚ್ ಡಿ ಕೋಟೆ ಪೊಲೀಸರು ಬಾಲಕಿಯ ತಂದೆ ಕೃಷ್ಣೆ ಗೌಡ ಅವರನ್ನು ಪತ್ತೆ ಹಚ್ಚಿದರು. ಮದುವೆಯನ್ನು ನಿಲ್ಲಿಸಲಾಯಿತು. ಬಾಲಕಿಯ ನಿಶ್ಚಿತಾರ್ಥ ಮಾತ್ರ ಮಾಡಲು ಮುಂದಾಗಿದ್ದೆವಷ್ಟೆ ಎಂದು ಬಾಲಕಿಯ ತಂದೆ ಹೇಳುತ್ತಾರೆ. ಕೊನೆಗೆ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟರು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಕೃಷ್ಣೆ ಗೌಡರನ್ನು ಸಂಪರ್ಕಿಸಿದಾಗ, ನನ್ನ ಸೋದರಿಯ ಮಗನ ಜೊತೆಗೆ ಬಾಲಕಿಯ ನಿಶ್ಚಿತಾರ್ಥ ಮಾತ್ರ ಮಾಡಲು ನಿಶ್ಚಯಿಸಿದ್ದೆವಷ್ಟೆ. ಈಗಲೇ ಮದುವೆ ಮಾಡುವ ಯೋಜನೆಯಿರಲಿಲ್ಲ. 18 ವರ್ಷಕ್ಕಿಂತ ಮೊದಲು ಮದುವೆ ಮಾಡುವುದು ಕಾನೂನುಬದ್ಧವಲ್ಲ ಎಂದು ಗೊತ್ತಿದೆ. ನಾನು ಪೊಲೀಸ್ ಸ್ಟೇಷನ್ ಗೆ ಹೋಗಿ ನನ್ನ ಮಗಳ ಮದುವೆಗೆ ಬಲವಂತ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಬಂದಿದ್ದೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com