ಹಾವೇರಿ: ಶಾಲಾ ಕೊಠಡಿ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ಶನಿವಾರ ನಡೆದಿದೆ.
ಬ್ಯಾಡಗಿ ಪಟ್ಟಣದ ಸಂತೆ ಮೈದಾನದಲ್ಲಿ ಶಾಲಾ ಕಟ್ಟಡ ಕಾಮಗಾರಿಯ ಅಡಿಪಾಯಕ್ಕೆ ತೆಗೆದ ಗುಂಡಿಯಲ್ಲಿ ಬಿದ್ದು ಮಕ್ಕಳು ಸಾವನ್ನಪ್ಪಿದ್ದಾರೆ.
ಗೋವಾದಿಂದ ದೇವಿಹೊಸೂರು ಗ್ರಾಮದ ಅಜ್ಜನ ಮನೆಗೆ ಬಂದಿದ್ದ ಇನಾಯತ್ ಹಾವಣಗಿ ಅವರ ಮಕ್ಕಳಾದ ಸೈಯದ್ ಅಕ್ಮಲ್ (8), ಸೈಯದ್ ಅಶ್ಫಾಕ್ (10) ಹಾಗೂ ಕುಂಬಾರ ಓಣಿಯ ಜಾಫರ್ ಅನಾಮುಲ್ಲಾ ಸವಣೂರ(10) ಮೃತಪಟ್ಟ ಮಕ್ಕಳು.
ಸಂತೆಗೆ ಹೊರಟಿದ್ದ ತಾಯಿಯನ್ನು ಹಿಂಬಾಲಿಸಿ ಬರುತ್ತಿದ್ದ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಲಾಗಿತ್ತು. ಆದರೆ ಮೂರು ಮಕ್ಕಳು ಸೇರಿಕೊಂಡು ಆಟವಾಡಲು ಶಾಲಾ ಮೈದಾನಕ್ಕೆ ತೆರಳಿದ್ದವು. ಈ ಸಂದರ್ಭದಲ್ಲಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿವೆ ಎನ್ನಲಾಗಿದೆ.
ತಾಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು. ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ವೈಯಕ್ತಿಕವಾಗಿ ಮಕ್ಕಳಿಗೆ ತಲಾ 25 ಸಾವಿರ ರೂ ಹಾಗೂ ಸರ್ಕಾರದಿಂದ ತಲಾ ₹5 ಲಕ್ಷ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
Advertisement