ಕೃತಕ ಯೂರಿಯಾ ರಸಗೊಬ್ಬರ ಅಭಾವ ಸೃಷ್ಟಿ: 117 ಅಂಗಡಿಗಳ ಪರವಾನಿಗೆ ರದ್ದು

ರಸಗೊಬ್ಬರ, ಯೂರಿಯಾ ಗೊಬ್ಬರದ ಕೃತಕ ರಸಗೊಬ್ಬರ ಅಭಾವ ಸೃಷ್ಟಿಸಿ ಸಮಸ್ಯೆ ಹುಟ್ಟಿಹಾಕಿದ್ದ ರಾಜ್ಯಗಳ 117 ಅಂಗಡಿಗಳ ಪರವಾನಿಗೆಯನ್ನು ರದ್ದುಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಬಿಸಿ ಪಾಟೀಲ್
ಬಿಸಿ ಪಾಟೀಲ್
Updated on

ಮೈಸೂರು: ರಸಗೊಬ್ಬರ, ಯೂರಿಯಾ ಗೊಬ್ಬರದ ಕೃತಕ ರಸಗೊಬ್ಬರ ಅಭಾವ ಸೃಷ್ಟಿಸಿ ಸಮಸ್ಯೆ ಹುಟ್ಟಿಹಾಕಿದ್ದ ರಾಜ್ಯಗಳ 117 ಅಂಗಡಿಗಳ ಪರವಾನಿಗೆಯನ್ನು ರದ್ದುಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಮೈಸೂರಿನಲ್ಲಿಂದು ಕೃಷಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಇದೇ ಮೊದಲ ಬಾರಿಗೆ ತಮ್ಮ ಅವಧಿಯಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ಜಾಲವನ್ನು ಭೇದಿಸಲಾಗಿದ್ದು, ಹಾವೇರಿ ಜಿಲ್ಲೆ ಮೊದಲ ಬಾರಿಗೆ 12 ಕೋಟಿ ರೂ.ಮೊತ್ತದ ಕಳಪೆ ಬೀಜ ಪತ್ತೆ ಮಾಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಕೃತಕ ಗೊಬ್ಬರ ಅಭಾವ ಸೃಷ್ಟಿಸುವವರ ವಿರುದ್ಧ ಜಾಗೃತ ದಳ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಅಂಗಡಿ ಮಾರಾಟಗಾರರ ವಿರುದ್ಧ ದಾಳಿ ನಡೆಸಿದ್ದಾರೆ. ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರು ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸದೇ ಬಿಡುವುದಿಲ್ಲ. ಸೂಕ್ತ ಬಿತ್ತನೆ ಮಾಡಿದಾಗ ಕಳಪೆಯಾಗಿರುವುದು ಸಾಬೀತಾದಲ್ಲಿ ಬೀಜ ವಿತರಿಸಿದ ಕಂಪೆನಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು, ಅಲ್ಲದೇ ಆ ಕಂಪೆನಿ ಬಿತ್ತನೆ ನಷ್ಟ ಭರಿಸಿಕೊಡಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.

23 ದಿನಗಳಲ್ಲಿ 74 ಲಕ್ಷ ರೈತರು ರಾಜ್ಯದ್ಯಾಂತ ಬೆಳೆ ಸಮೀಕ್ಷೆಗೆ ತಮ್ಮ ಫೋಟೋ ಅಪ್ಲೋಡ್ ಮಾಡಿದ್ದಾರೆ. ರೈತರು ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ. ಬೆಳೆ ಸಮೀಕ್ಷೆ ಆ್ಯಪ್ ಜನಾಂದೋಲನವಾಗಿದೆ. ಹೊಲಕ್ಕೆ ಹೋಗಿ ಬೆಳೆ ಸಮೀಕ್ಷೆ ಮಾಡಲಾಗದ ರೈತರು ತಮಗೆ ಹೊಲಕ್ಕೆ ಹೋಗಲಾಗುತ್ತಿಲ್ಲ. ತಮ್ಮ ಬದಲಿಗೆ ಬೇರೆಯವರನ್ನು ಸಮೀಕ್ಷೆಗೆ ಅಧಿಕಾರ ಕೊಡುತ್ತಿರುವುದಾಗಿ ಪತ್ರ ಕೊಟ್ಟರೂ ಸ್ವೀಕರಿಸಲಾಗುತ್ತದೆ. ಸೆಪ್ಟೆಂಬರ್ 10 ರಿಂದ ಪಬ್ಲಿಕ್ ರೆಸಿಡಿನ್ಸ್ ಗೂ ಅವಕಾಶ ಮಾಡಿಕೊಡಲಾಗುತ್ತಿದೆ.ಈ ಪಬ್ಲಿಕ್ ರೆಸಿಡಿನ್ಸ್ ಅಂದರೆ ನೆಟ್ವರ್ಕ್ ಇಲ್ಲದ ಜಾಗದಲ್ಲಿ ಗ್ರಾಮದ ನಕ್ಷೆಯನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಫೋಟೋ ತೆಗೆದುಕೊಂಡು ಬಳಿಕ ನೆಟ್ವರ್ಕ್ ಇರುವ ಜಾಗಕ್ಕೆ ಹೋಗಿ ಅಪ್ಲೋಡ್ ಮಾಡಬಹುದಾಗಿದೆ ಎಂದರು.

ಬೆಳೆ ಸಮೀಕ್ಷೆಗೆ ರೈತರು ಹೆಚ್ಚು ಒತ್ತು ನೀಡಬೇಕು. ಬೆಳೆ ಸಮೀಕ್ಷೆ ನಿರೀಕ್ಷೆ ಮಟ್ಟದಲ್ಲಿ ಆಗದ ಕಾರಣ ಮತ್ತು ಕರ್ತವ್ಯ ನಿರ್ಲಕ್ಷ್ಯವಹಿಸಿದ ಮೇರೆಗೆ ಚಾಮರಾಜನಗರ, ಮಂಡ್ಯ, ಅರಸಿಕೆರೆ, ಕಡೂರು ಜಿಲ್ಲೆಗಳ ಕೃಷಿ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಲಾಗುತ್ತಿದೆ. ಕೃಷಿ ಅದಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವಾರದಲ್ಲಿ ಸಂಪೂರ್ಣ ಬೆಳೆ ಸಮೀಕ್ಷೆಯಾಗಬೇಕು. ಸೆಪ್ಟೆಂಬರ್ 23 ರ ಬಳಿಕ ಪರಿಶೀಲನೆ ಕಾರ್ಯ ಆರಂಭವಾಗಲಿದೆ. ಬೆಳೆ ಸಮೀಕ್ಷೆ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು.ಖಾಸಗಿ ನಿವಾಸಿಗಳ ಸಹಾಯಪಡೆದು ರೈತರು ತಮ್ಮ ಜಮೀನಿನ ಬೆಳೆಸಮೀಕ್ಷೆಯನ್ನು ತಾವೇ ಮಾಡಿ ವಿವರ ದಾಖಲಿಸಿ ಫೋಟೋ ಅಪ್ಲೋಡ್ ಮಾಡಬೇಕು.ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತ್ತು ಆದಷ್ಟುಬೇಗ ಎಲ್ಲಾ ರೈತರು ಬೆಳೆ ಸಮೀಕ್ಷೆ ಆ್ಯಪ್ನಲ್ಲಿ ವಿವರ ದಾಖಲಿಸಲೇಬೇಕು ಎಂದು ಸಚಿವರು ಒತ್ತಿ ಹೇಳಿದರು.

10 ಲಕ್ಷ ಮೆಕ್ಕೆಜೋಳ ರೈತರಿಗೆ 5 ಸಾವಿರ ರೂ.ನಂತೆ 500 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದಂತೆ 7 ಲಕ್ಷದ 6 ಸಾವಿರ ರೈತರ ಅಕೌಂಟ್ ಗೆ ಬಿಡುಗಡೆ ಮಾಡಲಾಗಿದೆ. ಜಂಟಿ ಖಾತೆ ಇರುವ ರೈತರು ತಮ್ಮ ಒಪ್ಪಿಗೆ ಪತ್ರದ ಪ್ರಮಾಣ ಪತ್ರವನ್ನು ಇಲಾಖೆಗೆ ನೀಡಬಹುದಾಗಿದೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಯೂರಿಯಾ ಗೊಬ್ಬರದ ಬೇಡಿಕೆ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಮೈಸೂರು ವಿಭಾಗದ 8 ಜಿಲ್ಲೆಗಳಲ್ಲಿ 43,230 ಟನ್ ಹೆಚ್ಚುವರಿ ಯೂರಿಯಾ ಸಂಗ್ರಹವಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಒಟ್ಟು 52,49,236 ರೈತರಿಗೆ 4,845.15 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯಡಿ 1,010 ಕೋಟಿ ಇಲ್ಲಿಯವರೆಗೂ ಹೋಗಿದೆ ಎಂದು ಕೃಷಿ ಸಚಿವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com