ಷರಿಯಾ ಕಾನೂನು ಮುಂದಿಟ್ಟು ಎರಡನೇ ವಿವಾಹ ಸಮರ್ಥಿಸಿದವನ ವಾದ ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು: ಷರಿಯಾ ಕಾನೂನನ್ನು ಮುಂದಿಟ್ಟುಕೊಂಡು ತನ್ನ ಎರಡನೇ ವಿವಾಹವನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯೋರ್ವನ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.
ಎರಡನೇ ವಿವಾಹ ಮೊದಲನೇ ಪತ್ನಿಗೆ ಮಾಡುವ ಅಗಾಧವಾದ ಕ್ರೌರ್ಯ ಎಂದು ಹೇಳಿದೆ.
ಮುಸ್ಲಿಮರ ಕಾನೂನಿನಲ್ಲಿ ಬಹುಪತ್ನಿತ್ವ ಮಾನ್ಯವಿರಬಹುದು ಆದರೆ ಅದು ಮೊದಲ ಪತ್ನಿಯೆಡೆಗೆ ಅಗಾಧವಾದ ಕ್ರೌರ್ಯ ಎಂದು ವಿಚಾರಣೆ ವೇಳೆ ಹೈಕೋರ್ಟ್ ನ ಕಲಬುರಗಿ ವಿಭಾಗದ ಹೈಕೋರ್ಟ್ ಪೀಠದ ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ.ಪಿ ಕೃಷ್ಣಭಟ್ ಹೇಳಿದ್ದಾರೆ. ಈ ಮೂಲಕ ಕೆಳ ಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳಿಸಬೇಕೆಂದು ಯೂಸೂಫ್ ಪಟೇಲ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ವಿಜಯಪುರದ ನಿವಾಸಿ ಯೂಸೂಫ್ ಎಂಬಾತ 2014 ರಲ್ಲಿ ರಾಮ್ಜಾನ್ಭಿ ಎಂಬ ಮಹಿಳೆಯನ್ನು ಷರಿಯಾ ಕಾನೂನಿನ ಪ್ರಕಾರ ವಿವಾಹವಾಗಿದ್ದ ಇದಾದ ಕೆಲವೇ ದಿನಗಳಲ್ಲಿ ಎರಡನೇ ವಿವಾಹ ಮಾಡಿಕೊಂಡಿದ್ದ.
ಎರಡನೇ ವಿವಾಹವನ್ನು ಪ್ರಶ್ನಿಸಿ ಮೊದಲ ಪತ್ನಿ ಕೋರ್ಟ್ ಮೆಟ್ಟಿಲೇರಿ ಅನೂರ್ಜಿತಗೊಳಿಸಬೇಕೆಂದು ಮನವಿ ಮಾಡಿದ್ದರು. ಅಷ್ಟೇ ಅಲ್ಲದೇ ಪತಿಯ ಮನೆಯವರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂದೂ ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಯೂಸೂಫ್, ತಾನು ಮೊದಲ ಪತ್ನಿಯನ್ನು ಪ್ರೀತಿಸುತ್ತೇನೆ, ಆದರೆ ಷರಿಯಾ ಕಾನೂನಿನ ಪ್ರಕಾರ ಎರಡು ವಿವಾಹವಾಗುವುದಕ್ಕೆ ಅವಕಾಶವಿದೆ. ತಮ್ಮದು ಪ್ರಬಹವಿ ಕುಟುಂಬವಾಗಿದ್ದು, ಪೋಷಕರ ಒತ್ತಡಕ್ಕೆ ಮಣಿದು ಎರಡನೇ ವಿವಾಹವಾದೆ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ