ಟಿಎಚ್ಓ ಮಂಜುನಾಥ್
ಟಿಎಚ್ಓ ಮಂಜುನಾಥ್

ಕಾಣೆಯಾಗಿದ್ದ ವೈದ್ಯಾಧಿಕಾರಿ ಹಾಸನದಲ್ಲಿ ಪತ್ತೆ; ಹೇಳಿಕೆಯಲ್ಲಿ ಗೊಂದಲ

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹೊಸಕೋಟೆ ವೈದ್ಯಾಧಿಕಾರಿ ಕೊನೆಗೂ ಹಾಸನ ಜಿಲ್ಲೆಯ ಶಾಂತಿಗ್ರಾಮದ ಬಳಿ ಪತ್ತೆಯಾಗಿದ್ದಾರೆ.
Published on

ಬೆಂಗಳೂರು: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹೊಸಕೋಟೆ ವೈದ್ಯಾಧಿಕಾರಿ ಕೊನೆಗೂ ಹಾಸನ ಜಿಲ್ಲೆಯ ಶಾಂತಿಗ್ರಾಮದ ಬಳಿ ಪತ್ತೆಯಾಗಿದ್ದಾರೆ.

ಹೊಸಕೋಟೆ ವೈದ್ಯಾಧಿಕಾರಿ ಡಾ.ಮಂಜುನಾಥ್ ಅವರು ಇದೇ ಡಿ.15 ರ ಬೆಳಗ್ಗೆ ನಾಪತ್ತೆಯಾಗಿದ್ದರು. ಈ ಬಗ್ಗೆ ಹೊಸಕೋಟೆ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಡಾ. ಮಂಜುನಾಥ್ ಹೊಸಕೋಟೆ ನಗರದಲ್ಲಿ ನಕಲಿ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳುಲು ಮುಂದ್ದಾಗಿದ್ದರು. ಈ ವೇಳೆ ಡಾ.ಮಂಜುನಾಥ್ ಅವರಿಗೆ ಬೆದರಿಕೆ ಕರೆಗಳು ಸಹ ಬಂದಿದ್ದು, ಪ್ರಭಾವಿ ನಾಯಕರೊಬ್ಬರ ಆಪ್ತ ಜಯರಾಜ್ ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಡಾ. ಗೋಪಾಲಕೃಷ್ಣ ಎಂಬುವರು ಡಿ.16 ರಂದು ಟಿಎಚ್ಓ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲು ಮಾಡಿದ್ದರು.

ಡಾ. ಮಂಜುನಾಥ್ ಅವರನ್ನು ಅಪಹರಣ ಮಾಡಿರುವ ಬಗ್ಗೆ ವದಂತಿ ಸಹ ಹರಿದಾಡಿತ್ತು. ಪ್ರಕರಣದ ಗಂಭೀರತೆ ಅರಿತ ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಡಾ. ಮಂಜುನಾಥ್ ಪತ್ತೆಗಾಗಿ 10 ಸರ್ಕಲ್ ಇನ್ಸ್ ಪೆಕ್ಟರ್ಗಳ ತಂಡಗಳನ್ನು ರಚನೆ ಮಾಡಿದ್ದರು. ಈ ನಡುವೆ ಡಿ.16ರ ಬೆಳಗ್ಗೆ ತಮ್ಮ ಪತ್ನಿಗೆ ಫೋನ್ ಮಾಡಿದ ಡಾಕ್ಟರ್ ಮಂಜುನಾಥ್ ತಾನು ಚನ್ನರಾಯಪಟ್ಟಣದಲ್ಲಿ ಇರುವುದಾಗಿ ತಿಳಿಸಿದ್ದರು. ಇಂದು ಬೆಳಗ್ಗೆ ರವಿಚನ್ನಣ್ಣವರ್ಗೆ ಫೋನ್ ಮಾಡಿದ ಡಾ. ಮಂಜುನಾಥ್ ತಾವು ಬರುತ್ತಿರುವ ಮಾಹಿತಿ ತಿಳಿಸಿದರು. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಶಾಂತಿಗ್ರಾಮದಲ್ಲಿ ಡಾಕ್ಟರ್ ಮಂಜುನಾಥ್ ಪತ್ತೆಯಾಗಿದ್ದು ಅವರನ್ನು ನೆಲಮಂಗಲ ನಗರ ಠಾಣೆಗೆ ಕರೆದುಕೊಂಡು ಬರಲಾಗಿದೆ.

ಮನಸ್ಸಿಗೆ ಬೇಸರವಾದ ಕಾರಣದಿಂದ ಪ್ರವಾಸ ಸ್ಥಳಗಳಿಗೆ ಹೋಗಿದ್ದೆ ಎಂದು ವಿಚಾರಣೆ ಸಮಯದಲ್ಲಿ ಡಾ. ಮಂಜುನಾಥ್ ಹೇಳಿದ್ದಾರೆ. ರಾಮನಗರ, ಚನ್ನರಾಯಪಟ್ಟಣ, ಚಿಕ್ಕಬಳ್ಳಾಪುರ, ಕೊಡಗು, ಎಚ್ಡಿ ಕೋಟೆ, ಮಡಿಕೇರಿಗೆ ಭೇಟಿ ನೀಡಿದ್ದು ನಾಪತ್ತೆ ಎಂದು ಸುದ್ದಿ ಪ್ರಸಾರವಾದ ಹಿನ್ನೆಲೆ ಪದೇ ಪದೇ ಮೊಬೈಲ್ಗೆ ಕರೆಗಳು ಬರುತ್ತಿದ್ದ ಕಾರಣ ಫೋನ್ ಸ್ವಿಚ್ ಆಫ್ ಮಾಡಿದ್ದಾಗಿ ತಿಳಿಸಿದ್ದಾರೆ.

ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದು ಡಾ.ಮಂಜುನಾಥ್ ನಾಪತ್ತೆ ಪ್ರಕರಣದ ಸತ್ಯವನ್ನು ಬಯಲುಗೊಳಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com