ಬೆಂಗಳೂರು: ಡಿಸೆಂಬರ್ 5ಕ್ಕೆ ಹಿಂದೆಂದೂ ನಡೆಯದ ರೀತಿಯಲ್ಲಿ ಕರ್ನಾಟಕ ಬಂದ್ ನಡೆಯುತ್ತದೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ "ಕನ್ನಡವನ್ನು ಹಾಳು ,ಮಾಡೋ ಏಕೈಕ ಮುಖ್ಯಮಂತ್ರಿ ಎಂದರೆ ಅದು ಯಡಿಯೂರಪ್ಪ. ಯಡಿಯೂರಪ್ಪ ಅಂದರೆ ಸುಳ್ಳು, ಸುಳ್ಳು ಎಂದರೆ ಯಡುಯೂರಪ್ಪ. ಯಾರೂ ಅವರ ಮಾತು ನಂಬಬೇಡಿ." ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರಾಠಾ ಪ್ರಾಧಿಕಾರ, ನಿಗಮಗಳು ಬಸವಕಲ್ಯಾಣ ಉಪಚುನಾವಣೆಗಾಗಿ ಯಡಿಯೂರಪ್ಪ ಆಡುತ್ತಿರುವ ನಾಟಕ ಎಂದು ವಾಟಾಳ್ ಆರೋಪಿಸಿದ್ದಾರೆ. ಅಲ್ಲದೆ ಬಳ್ಳಾರಿಯನ್ನು ಎರಡು ಭಾಗ ಮಾಡಿದ ಸಿಎಂ ಅಧಿಕಾರದಲ್ಲಿ ಮುಂದುವರಿದರೆ ನಿಪ್ಪಾಣಿ, ಕಾರವಾರ ಮತ್ತು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲಿದೆ ಎಂದರು.
ನಾಡಿದ್ದಿನ ಬಂದ್ ನಲ್ಲಿ 1,400 ಕನ್ನಡಪರ ಸಂಘಟನೆಗಳು ಭಾಗವಹಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇಂದು ನಗರದ ಕೆಆರ್ ಪುರಂನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಿದ ವಾಟಾಳ್ ಹಾಗೂ ಬೆಂಬಲಿಗರು ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಇದಲ್ಲದೆ ನವೆಂಬರ್ 30ರಂದು ಮೈಸೂರು ಬ್ಯಾಂಕ್ ಸರ್ಕಲ್ ಬಂದ್ ಗೆ ಮುನ್ನ ಬೃಹತ್ ಸಭೆ ಆಯೋಜಿಸಲು ಕನ್ನಡಪರ ಸಂಘಟನೆಗಳು ಇಂದು ತೀರ್ಮಾನ ತೆಗೆದುಕೊಂಡಿದೆ.
Advertisement