ನೌಕರರು ಯಾರ ಮಾತಿಗೂ ಕಿವಿಗೊಡದೆ ಸರ್ಕಾರದ ಕ್ರಮಗಳನ್ನು ಗಮನಿಸಬೇಕು: ಸಚಿವ ಡಾ. ಕೆ.ಸುಧಾಕರ್

ಸಾರಿಗೆ ನೌಕರರು ಯಾರ ಮಾತಿಗೂ ಕಿವಿಗೊಡದೆ ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ಗಮನಿಸಬೇಕು. ಸರ್ಕಾರವು ನೌಕರರಿಗಾಗಿ ಕೈಗೊಂಡಿರುವ ಕ್ರಮಗಳನ್ನು ಸಾರ್ವಜನಿಕರು ಕೂಡ ಗಮನಿಸಬೇಕು ಎಂದು  ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಸುಧಾಕರ್
ಸುಧಾಕರ್
Updated on

ಬೆಂಗಳೂರು: ಸಾರಿಗೆ ನೌಕರರು ಯಾರ ಮಾತಿಗೂ ಕಿವಿಗೊಡದೆ ಸರ್ಕಾರವು ಕೈಗೊಂಡಿರುವ ಕ್ರಮಗಳನ್ನು ಗಮನಿಸಬೇಕು. ಸರ್ಕಾರವು ನೌಕರರಿಗಾಗಿ ಕೈಗೊಂಡಿರುವ ಕ್ರಮಗಳನ್ನು ಸಾರ್ವಜನಿಕರು ಕೂಡ ಗಮನಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ನಮ್ಮ ರಾಜ್ಯ ಸರ್ಕಾರ ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದೆ. ಇನ್ನೂ ಒಂದು ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ. ಸರ್ಕಾರ ಈ ರೀತಿ ನೌಕರರಿಗೆ ಸ್ಪಂದಿಸಿರುವುದನ್ನು ಗಮನಿಸಿ ಮುಷ್ಕರ ಕೈ ಬಿಡಬೇಕು ಎಂದು ಮನವಿ ಮಾಡಿದರು.

ಸಾರಿಗೆ ಸಂಸ್ಥೆಯ ನೌಕರರು ಶ್ರಮಜೀವಿಗಳಾಗಿದ್ದು, ಸಾರ್ವಜನಿಕ ಸೇವೆಗಾಗಿ ಬಹಳ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಹಾಗೂ ನೌಕರರ ಪರಸ್ಪರ ಕೊಡು ಕೊಳ್ಳುವಿಕೆಗಳಿಂದಾಗಿ ರಾಜ್ಯದ ಜನತೆಗೆ ಉತ್ತಮ ರಸ್ತೆ ಸಾರಿಗೆ ಸೇವೆ ಒದಗಿಸಲಾಗುತ್ತಿದೆ. ಕಾಲಕಾಲಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟವಾದಾಗಲೂ ನೌಕರರ ಬದುಕು, ಅವರ ಕುಟುಂಬದ ಹಿತಕ್ಕಾಗಿ ಒಟ್ಟು 1,953.45 ಕೋಟಿ ರೂ. ನಷ್ಟು ವೇತನವನ್ನು ಪಾವತಿಸಲಾಗಿದೆ. ವೇತನ ಬಾಕಿ ಇಟ್ಟುಕೊಂಡು ನೌಕರರು ಸಂಕಷ್ಟಕ್ಕೆ ಸಿಲುಕಿಸುವಂತಹ ಯಾವುದೇ ಕೆಲಸವನ್ನು ಸರ್ಕಾರ ಮಾಡಿಲ್ಲ. ಸರ್ಕಾರದ ಈ ನೌಕರ ಹಿತ ಕ್ರಮವನ್ನು ಪರಿಗಣಿಸಿ ನೌಕರರು ಮುಷ್ಕರ ಬಿಟ್ಟು, ನಾಗರಿಕ ಸ್ನೇಹಿ ಆಡಳಿತಕ್ಕೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

2020 ರ ಡಿಸೆಂಬರ್ ನಲ್ಲಿ ನೌಕರರು 4 ದಿನಗಳ ಕಾಲ ಮುಷ್ಕರ ಮಾಡಿದ್ದರು. ಆ ಸಮಯದಲ್ಲಿ 10 ಬೇಡಿಕೆಗಳಲ್ಲಿ, 9 ಬೇಡಿಕೆ ಈಡೇರಿಸುವುದಾಗಿ ಸರ್ಕಾರವು ಸಾರಿಗೆ ನೌಕರರಿಗೆ ಭರವಸೆ ನೀಡಿತ್ತು. ನಂತರ ಕೊಟ್ಟ ಮಾತಿನಂತೆಯೇ ನಡೆದುಕೊಂಡು ನಮ್ಮ ಸರ್ಕಾರ, 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದೆ. ಆದರೆ 6 ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸುವಂತೆ ಕೋರಿದ ಬೇಡಿಕೆಯನ್ನು ಇನ್ನೂ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಸರ್ಕಾರವು ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಬೇಕಿದೆ. ಇದಕ್ಕಾಗಿ ಸಮಿತಿ ಕೂಡ ರಚನೆ ಮಾಡಿದ್ದು, ಈ ಸಮಿತಿಯು 6 ಸಭೆಗಳನ್ನು ನಡೆಸಿ ಚರ್ಚೆ ಮಾಡಿದೆ. ಇಷ್ಟೆಲ್ಲ ಕ್ರಮ ವಹಿಸಿದ ಬಳಿಕವೂ ನೌಕರರು ಮುಷ್ಕರ ನಡೆಸುವುದು ಸರಿಯ. ಆದ್ದರಿಂದ ನೌಕರರು ಮುಷ್ಕರ ಬಿಟ್ಟು ಸರ್ಕಾರಕ್ಕೆ ಸಹಕರಿಸಬೇಕು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com