ವರ್ಷದಿಂದ ರಜೆ ಇಲ್ಲ, ಕೋವಿಡ್-19 ಸೋಂಕಿತ ಮೃತರಿಗೆ ಗೌರವ ಅಂತ್ಯಸಂಸ್ಕಾರಕ್ಕೆ ನೆರವಾಗುತ್ತಿರುವ ಮಂದಿ ಇವರು...

"ಕೋವಿಡ್-19 ಬಂದಾಗಿನಿಂದಲೂ ನಾನು ಮನೆಗೆ ಹೋಗಿಲ್ಲ, ಈ ವರ್ಷ ರಂಜಾನ್ ನಲ್ಲೂ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಕರ್ತವ್ಯವೇ ನನ್ನ ಜೀವನದ ಬಹುಭಾಗವನ್ನು ಆವರಿಸಿತ್ತು. ಈಗ ಅದೇ ಕರ್ತವ್ಯ ನನ್ನ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಂದ ದೂರವಿರುವ ಅನಿವಾರ್ಯತೆಯನ್ನು ಸೃಷ್ಟಿಸಿದೆ"
ಸಯೀದ್ ಹುಸೇನ್-ರಾಬರ್ಟ್ ರೊಡ್ರಿಗಸ್
ಸಯೀದ್ ಹುಸೇನ್-ರಾಬರ್ಟ್ ರೊಡ್ರಿಗಸ್
Updated on

ಮಡಿಕೇರಿ: ಕೋವಿಡ್-19 ಕಳೆದ ಒಂದು ವರ್ಷದಿಂದ ಹಲವಾರು ಮಂದಿಯನ್ನು ಹಲವು ರೀತಿಗಳಲ್ಲಿ ಬಾಧಿಸಿದೆ. ಕೆಲವರು ತಮ್ಮವನ್ನು ಕಳೆದುಕೊಂಡ ದುಃಖದಲ್ಲಿದ್ದರೆ ಮತ್ತೆ ಕೆಲವರು ತಮ್ಮ ಮನೆಗೆ ಹೋಗಲಾಗದೇ, ಮನೆಯ ಸದಸ್ಯರನ್ನು ನೋಡಲಾಗದೇ, 24/7 ಕರ್ತವ್ಯದಲ್ಲೇ ನಿರತರಾಗಿದ್ದಾರೆ.

ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವಿಧಿವಿಜ್ಞಾನ ವಿಭಾಗದ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಸಯೀದ್ ಹುಸೇನ್ ಹಾಗೂ ಸಹೋದ್ಯೋಗಿಗಳದ್ದೂ ಇದೇ ಪರಿಸ್ಥಿತಿಯಾಗಿದೆ. 

"ಕಳೆದ ವರ್ಷ ಕೋವಿಡ್-19 ಬಂದಾಗಿನಿಂದಲೂ ನಾನು ಮನೆಗೆ ಹೋಗಿಲ್ಲ, ಈ ವರ್ಷ ರಂಜಾನ್ ನಲ್ಲೂ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಕರ್ತವ್ಯವೇ ನನ್ನ ಜೀವನದ ಬಹುಭಾಗವನ್ನು ಆವರಿಸಿತ್ತು. ಈಗ ಅದೇ ಕರ್ತವ್ಯ ನನ್ನ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಂದ ದೂರವಿರುವ ಅನಿವಾರ್ಯತೆಯನ್ನು ಸೃಷ್ಟಿಸಿದೆ" ಎಂದು ಕೋವಿಡ್-19 ಮೃತರ ದೇಹಗಳನ್ನು ಪ್ಯಾಕ್ ಮಾಡುವ ಸಯೀದ್ ಹೇಳಿದ್ದಾರೆ. 

ನಾಲ್ಕು ವರ್ಷಗಳ ಹಿಂದೆ ಸಯೀದ್ ವಿಧಿವಿಜ್ಞಾನ ವಿಭಾಗದ ಸಿಬ್ಬಂದಿಯಾಗಿ ಉದ್ಯೋಗಕ್ಕೆ ಸೇರಿದ್ದರು. ಭ್ರೂಣಗಳ ಮರಣೋತ್ತರ ಪರೀಕ್ಷೆಗಳನ್ನೂ ನಡೆಸಿದ ಉದಾಹರಣೆಗಳಿದ್ದು, ಹೃದಯವಿದ್ರಾವಕವಾಗಿರುತ್ತದೆ ಎಂದು ಸಯೀದ್ ತಮ್ಮ ಕರ್ತವ್ಯದ ಬಗ್ಗೆ ಹೇಳಿದ್ದಾರೆ.

ಕೋವಿಡ್-19 ಯೋಧರಾಗಿ ಜನಸೇವೆ ಮಾಡುತ್ತಿರುವ ಸಯೀದ್ ಹಾಗೂ ರಾಬರ್ಟ್ ರೊಡ್ರಿಗಸ್, (ವಿಧಿವಿಜ್ಞಾನ ವಿಭಾಗದ ಮತ್ತೊಬ್ಬ ಸಿಬ್ಬಂದಿ) ಈ ವರೆಗೂ ಕೊಡಗಿನಲ್ಲಿ ಕೋವಿಡ್-19 ನಿಂದ ಮೃತಪಟ್ಟ 93 ಮೃತದೇಹಗಳನ್ನು ಅಂತ್ಯಸಂಸ್ಕಾರಕ್ಕೆ ಸಹಕಾರಿಯಾಗುವಂತೆ ಪ್ಯಾಕ್ ಮಾಡಿದ್ದಾರೆ. " ಕಳೆದ ಮಾರ್ಚ್ ತಿಂಗಳಿನಿಂದ ರಜೆ ಇಲ್ಲದೇ ರಾತ್ರಿ ಹಗಲೆನ್ನದೇ ಕರ್ತವ್ಯ ನಿರ್ವಹಿಸಿದ್ದೇವೆ, ಮನೆಯ ಸದಸ್ಯರನ್ನೂ ಭೇಟಿ ಮಾಡಿಲ್ಲ, ಇತ್ತೀಚೆಗಷ್ಟೆ ನನ್ನ ವಸ್ತುಗಳನ್ನು ತೆಗೆದುಕೊಂಡುಬರಲು ಮನೆಗೆ ಕೆಲವೇ ಗಂಟೆಗಳ ಕಾಲ ಭೇಟಿ ನೀಡಿದ್ದೆ" ಎಂದು ಸಯೀದ್ ಹೇಳಿದ್ದಾರೆ. 

"ಪಿಪಿಇ ಕಿಟ್ ಗಳನ್ನು ಧರಿಸುವುದರಿಂದ ಕೆಲವೊಮ್ಮೆ ಊಟ, ನೀರು ಬಿಟ್ಟು ಕೆಲಸ ಮಾಡುತ್ತೇವೆ. ಸರ್ಕಾರ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಕ ಮಾಡಿಲ್ಲ, ಹೆಚ್ಚುವರಿ ಕೆಲಸ ಮಾಡಿದ್ದಕ್ಕೆ ಪ್ರೋತ್ಸಾಹ ಧನ ಕೂಡ ಸಿಗುವುದಿಲ್ಲ. ನಾವು ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬೇಡಿಕೆಗಳನ್ನು ಮುಂದಿಡಬಾರದು, ಆದ್ದರಿಂದ ನಮ್ಮ ಕೆಲಸಗಳನ್ನು ಮುಂದುವರೆಸುತ್ತಿದ್ದೇವೆ. 

ನಾವು 27/4 ಕೆಲಸ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಿಕ ಪ್ರಚಾರಕ್ಕಾಗಿ ಹಲವಾರು ಮಂದಿ ಸರ್ಕಾರಿ ಆಸ್ಪತ್ರೆಗಳ ಒಳಗೆ ಚಿತ್ರೀಕರಣ ಮಾಡುತ್ತಾರೆ. ಕೆಲವೊಂದು ನ್ಯೂನತೆಗಳು ಇರುತ್ತವೆ, ಅವುಗಳನ್ನೇ ದೊಡ್ಡದು ಮಾಡಿ ಪ್ರಚಾರ ಪಡೆಯುತ್ತಾರೆ. ನಮ್ಮ ಸೇವೆಗೆ ನಾವು ಬಹುದೊಡ್ಡದ್ದನ್ನೇನೂ ಕೇಳುವುದಿಲ್ಲ, ಕನಿಷ್ಟ ಗೌರವವನ್ನಾದರೂ ಬಯಸುತ್ತೇವೆ, ಆರೋಗ್ಯ ಸೇವೆ ಕಾರ್ಯಕರ್ತರನ್ನು ಗೌರವಿಸಿ ಎಂಬುದಷ್ಟೇ ಕೊಡಗು ಜನತೆಯಲ್ಲಿ ನಮ್ಮ ಮನವಿ. ಎಂದು ಸಯೀದ್ ಹೇಳಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com