ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊನೆಗೂ ಒಲಿದ 'ಅರ್ಕಾವತಿ' ಭೂತಾಯಿ: ಭೂಮಿ ಸಮೀಕ್ಷೆ ಮಾಡಿದ ಬಿಡಿಎ, 700 ನಿವೇಶನ ಹಂಚಿಕೆಗೆ ಸಿದ್ದ 

ಅರ್ಕಾವತಿ ಲೇ ಔಟ್ ನ ಭೂಮಿಯ ಸಮೀಕ್ಷೆ ಮಾಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇದೇ ಮೊದಲ ಬಾರಿಗೆ ನಿವೇಶನಗಳ ವಿವರಗಳನ್ನು ಬಹಿರಂಗಪಡಿಸಿದ್ದು ಹಂಚಿಕೆದಾರರಿಗೆ ನೀಡಲು ಸಿದ್ದವಾಗಿದೆ. ಕಳೆದ ಮಂಗಳವಾರ ಬಿಡಿಎಯ ವೆಬ್ ಸೈಟ್ ನಲ್ಲಿ ಅರ್ಕಾವತಿ ಲೇ ಔಟ್ ನ ಸೈಟ್ ಗಳ ವಿವರಗಳನ್ನು ಬಹಿರಂಗಪಡಿಸಲಾಗಿದೆ. 

ಬೆಂಗಳೂರು: ಅರ್ಕಾವತಿ ಲೇ ಔಟ್ ನ ಭೂಮಿಯ ಸಮೀಕ್ಷೆ ಮಾಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇದೇ ಮೊದಲ ಬಾರಿಗೆ ನಿವೇಶನಗಳ ವಿವರಗಳನ್ನು ಬಹಿರಂಗಪಡಿಸಿದ್ದು ಹಂಚಿಕೆದಾರರಿಗೆ ನೀಡಲು ಸಿದ್ದವಾಗಿದೆ. ಕಳೆದ ಮಂಗಳವಾರ ಬಿಡಿಎಯ ವೆಬ್ ಸೈಟ್ ನಲ್ಲಿ ಅರ್ಕಾವತಿ ಲೇ ಔಟ್ ನ ಸೈಟ್ ಗಳ ವಿವರಗಳನ್ನು ಬಹಿರಂಗಪಡಿಸಲಾಗಿದೆ. 

ಒಟ್ಟು 900 ಎಕರೆ ಭೂಮಿ ಲಭ್ಯವಿದೆ ಎಂದು ತೋರಿಸುತ್ತಿದ್ದು, 700 ನಿವೇಶನಗಳನ್ನು ತಕ್ಷಣವೇ ನೀಡಲಾಗುತ್ತದೆ. 330 ಎಕರೆ ಪ್ರದೇಶ ವ್ಯಾಜ್ಯದಲ್ಲಿದ್ದು ಕೋರ್ಟ್ ಆದೇಶ ಬಂದ ನಂತರ ನಿವೇಶನಗಳನ್ನು ಹಂಚಿಕೆ ಮಾಡಬಹುದು ಎಂದು ಬಿಡಿಎಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಅರ್ಕಾವತಿ ಲೇ ಔಟ್ ಬಡಾವಣೆಯಲ್ಲಿ ತಮಗೆ ಮಂಜೂರಾಗಿದ್ದ ಸೈಟಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದ ಮಂದಿ ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಭೂಮಿ ಕಳೆದುಕೊಂಡು ದಶಕದಿಂದ ನಿವೇಶನಕ್ಕಾಗಿ ಕಾಯುತ್ತಿದ್ದವರಿಗೆ ಕೊನೆಗೂ ಈ ಸುದ್ದಿ ಕೊಂಚ ನಿರಾಳ ತಂದಿದೆ. ಹಿರಿತನ ಆಧಾರ ಮೇಲೆ ಸೈಟ್ ಗಳನ್ನು ಹಂಚಲಾಗುತ್ತದೆ. ಲೇ ಔಟ್ ಗೆ ಸಂಬಂಧಪಟ್ಟಂತೆ ಹತ್ತಾರು ಸಮಸ್ಯೆಗಳಿದ್ದು ಕಳೆದ 13 ವರ್ಷಗಳಿಂದ ನಿವೇಶನ ಹಂಚಿಕೆಯಾದವರಿಗೆ ಸಮಸ್ಯೆಯಾಗುತ್ತಿತ್ತು.

ಅರ್ಕಾವತಿ ಲೇ ಔಟ್ ಗೆ 2003-04ರಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸಿತ್ತು. ಪ್ರಾಥಮಿಕ ಅಧಿಸೂಚನೆಯಲ್ಲಿ 2 ಸಾವಿರದ 750 ಎಕರೆ ಭೂಮಿಯನ್ನು ಮತ್ತು ಬೆಂಗಳೂರು ಪೂರ್ವದ 16 ಹಳ್ಳಿಗಳು ಮತ್ತು ಯಲಹಂಕ ಗ್ರಾಮಗಳಲ್ಲಿ 8 ಸಾವಿರದ 813 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.

ಆದರೆ, ನಂತರ ರಾಜ್ಯ ಸರ್ಕಾರ 3 ಸಾವಿರದ 720 ನಿವೇಶನ ಹಂಚಿಕೆದಾರರಿಗೆ ನಿವೇಶನ ರದ್ದು ಮಾಡಿ ಡಿನೊಟಿಫಿಕೇಶನ್ ನೀಡಿ ಆಘಾತವನ್ನುಂಟುಮಾಡಿತ್ತು. ಇದೀಗ ಉದ್ಯಾನವನಗಳು ಮತ್ತು ಇತರ ಸೌಕರ್ಯಗಳಿಗಾಗಿ ಮೀಸಲಿಟ್ಟ ಪ್ರದೇಶಗಳನ್ನು ವಸತಿ ಪ್ರದೇಶಗಳಾಗಿ ಪರಿವರ್ತಿಸಿ ಜನರಿಗೆ ನೀಡುವುದಾಗಿ ಬಿಡಿಎ ತನ್ನ ಪ್ರಸ್ತಾವನೆಯಲ್ಲಿ ಪ್ರಮುಖವಾಗಿ ಹೇಳಿದ್ದು, ಇದನ್ನು ಸರ್ಕಾರ ಅನುಮೋದಿಸಬೇಕು. ನ್ಯಾಯಾಲಯದ ತೀರ್ಪಿನ ನಂತರ ನಮ್ಮ ಬಳಿಯಲ್ಲಿರುವ ಸೈಟ್‌ಗಳಲ್ಲಿ ಅದನ್ನು ಸೇರಿಸುವ ಮೂಲಕ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಸದ್ಯ ಸುಮಾರು 4 ಸಾವಿರ ಮಂದಿ ಬದಲಿ ನಿವೇಶನಗಳಿಗೆ ಕಾಯುತ್ತಿದ್ದಾರೆ. 1,300 ಮಂದಿ ನಾಡಪ್ರಭು ಕೆಂಪೇಗೌಡ ಲೇ ಔಟ್ ನಲ್ಲಿ ಬದಲಿ ನಿವೇಶನಗಳನ್ನು ಕೊಳ್ಳಲು ಒಪ್ಪಿಕೊಂಡಿದ್ದಾರೆ. ನಮ್ಮಲ್ಲಿ ಈಗ 330 ಎಕರೆ ಭೂಮಿ ಕೋರ್ಟ್ ನಲ್ಲಿ ವ್ಯಾಜ್ಯದಲ್ಲಿದೆ. ಎಲ್ಲಾ ಕೇಸುಗಳನ್ನು ಒಂದು ಮಾಡಿ ಕಳೆದ ವರ್ಷ ಆಲಿಸಲಾಯಿತು. ಇದರ ತೀರ್ಪು ಇನ್ನು ಬರಬೇಕಿದೆ. ತೀರ್ಪು ಹೊರಬಂದ ಮೇಲೆ 1,900 ಮಂದಿ ಕಾಯುತ್ತಿರುವವರಿಗೆ ನಿವೇಶನಗಳನ್ನು ಹಂಚಿಕೆ ಮಾಡಬಹುದು ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ.

Related Stories

No stories found.

Advertisement

X
Kannada Prabha
www.kannadaprabha.com