ಇಡಿ ಅಧಿಕಾರಿಗಳು ನೊಟೀಸ್ ಕೊಟ್ಟಿಲ್ಲ, ಅವರು ನಿರೀಕ್ಷೆ ಇಟ್ಟು ಬಂದದಕ್ಕೆ ತಕ್ಕಂತೆ ಸಿಕ್ಕಿಲ್ಲ: ಶಾಸಕ ಜಮೀರ್ ಅಹ್ಮದ್  

ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಮ್ಮ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಪರಿಶೋಧನೆ ನಡೆಸಿದ ಬಗ್ಗೆ ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
ಜಮೀರ್ ಅಹ್ಮದ್
ಜಮೀರ್ ಅಹ್ಮದ್
Updated on

ಬೆಂಗಳೂರು: ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಮ್ಮ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಪರಿಶೋಧನೆ ನಡೆಸಿದ ಬಗ್ಗೆ ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಮನೆ ಮೇಲಿನ ದಾಳಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಜಮೀರ್ ಅಹ್ಮದ್, ಬೆಳಗ್ಗೆ 8 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳು ಮನೆ ಬಳಿ ಬಂದರು. ಮನೆ ಯಾವಾಗ ನಿರ್ಮಾಣ ಮಾಡಿದ್ದೀರಿ, ಎಲ್ಲಿಂದ ದುಡ್ಡು ತಂದಿರಿ, ಎಷ್ಟು ಖರ್ಚಾಯಿತು, ಕಾಂಟ್ರ್ಯಾಕ್ಟ್ ರ್ ಯಾರು ಅದರ ಅಕೌಂಟ್ ವಿವರ ಎಲ್ಲ ಕೇಳಿದರು. ಎಲ್ಲ ಮಾಹಿತಿಯನ್ನು ಅವರಿಗೆ ನೀಡಿದ್ದೇನೆ, ನಾನು ವೈಟ್ ಮನಿಯಿಂದಲೇ ಮನೆ ಕಟ್ಟಿಸಿದ್ದು, ಬ್ಲ್ಯಾಕ್ ಮನಿಯಿಂದ ಅಲ್ಲ ಎಂದರು.

ಮನೆಯ ನಿರ್ಮಾಣ ವೆಚ್ಚ ಎಲ್ಲಿಂದ ಹಣ ತಂದಿದ್ದು ಎಂದು ಎಲ್ಲ ವಿವರ ನೀಡಿದ್ದೇನೆ. ನಾನು ಕೊಟ್ಟಿರುವ ವಿವರ ಅವರಿಗೆ ಸಮಾಧಾನವಾಗಿದೆ ಎಂದು ಭಾವಿಸುತ್ತೇನೆ, ನಾವು ವಿಚಾರಣೆಗೆ ಕರೆದರೆ ಬರಬೇಕು ಎಂದು ಹೇಳಿ ಹೋಗಿದ್ದಾರೆ, ನನಗೆ ನೊಟೀಸ್ ಏನೂ ಕೊಟ್ಟಿಲ್ಲ, ನಮ್ಮ ಮನೆಯ ವಿಚಾರಕ್ಕೆ ಇಡಿ ಅಧಿಕಾರಿಗಳು ಬಂದಿದ್ದು ಎಂದರು.

ಇಡಿ ಅಧಿಕಾರಿಗಳು ಮನೆ ಶೋಧಿಸಿದ್ದಾರೆ, ನನ್ನ ಸೋದರ ಮತ್ತು ಸೋದರಿಯ ಮನೆಯನ್ನೂ ಶೋಧಿಸಿದ್ದಾರೆ, ಅವರು ನಿರೀಕ್ಷೆ ಇಟ್ಟುಕೊಂಡು ಬಂದಿದ್ದಕ್ಕೆ ತಕ್ಕಂತೆ ಅವರಿಗೆ ಏನೂ ಸಿಗಲಿಲ್ಲ, ಎಲ್ಲ ವಿವರ ನೀಡಿದ್ದು ಅವರಿಗೆ ಸಮಾಧಾನವಾಗಿದೆ ಎಂದು ಭಾವಿಸುತ್ತೇನೆ, ಅವರು ಕರೆದರೆ ಹೋಗುತ್ತೇನೆ ಎಂದು ಹೇಳಿದರು.

ಕೇವಲ  ನನ್ನ ಮನೆ ನಿರ್ಮಾಣ ವಿಚಾರವಾಗಿ ಮಾತ್ರ ಕೇಳಿದ್ದಾರೆ, ಐಎಂಎ ಹಗರಣ, ಮಾನ್ಸೂರ್ ಖಾನ್ ಬಗ್ಗೆ ಏನೂ ಕೇಳಲಿಲ್ಲ. ಯಾರೋ ನನ್ನ ಬಗ್ಗೆ ಇಡಿ, ಐಟಿ ಇಲಾಖೆಗೆ ದೂರು ನೀಡಿದ್ದಾರೆ, ಅದಕ್ಕೆ ಬಂದಿದ್ದಿರಬೇಕು ಎಂದರು.

ನಾನು ಈ ಮನೆಯನ್ನು ಕಟ್ಟಲು 7 ವರ್ಷ ತೆಗೆದುಕೊಂಡಿದ್ದೇನೆ, ಇದು ನನ್ನ ಸ್ವಂತ ದುಡಿಮೆಯಿಂದ ಮಾಡಿದ್ದು, ಯಾವುದೇ ಬ್ಲ್ಯಾಕ್ ಮನಿಯಿಂದಲ್ಲ, ವೈಟ್ ಮನಿಯಿಂದ, ನಾನು ಮನೆ ನಿರ್ಮಿಸಿದ ಮೇಲೆ ಎಲ್ಲರಿಗೂ ನನ್ನ ಮೇಲೆ ಕಣ್ಣಿದೆ, ರಾಜಕೀಯದಲ್ಲಿ ಶತ್ರುಗಳು ಇರುವುದು ಸಹಜ.ಯಾರೋ ನನ್ನ ಬಗ್ಗೆ ನಾಲ್ಕೈದು ಸಲ ದೂರು ಕೊಟ್ಟಿದ್ದರಂತೆ. ನನಗೆ ಒಂದು ರೀತಿಯಲ್ಲಿ ಇಡಿ ಅಧಿಕಾರಿಗಳು ಬಂದು ಹೋಗಿದ್ದು ಸಮಾಧಾನವಾಯಿತು ಎಂದರು.

ಇಡಿ ಅಧಿಕಾರಿಗಳು ಏನೋ ದೊಡ್ಡದಾಗಿ ಸಿಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡು ಬಂದಂತೆ ಕಾಣಿಸುತ್ತದೆ, ಅದಕ್ಕೆ ಸರಿಯಾಗಿ ಸಿಕ್ಕಿಲ್ಲ. ನನ್ನ ಆಸ್ತಿಯನ್ನು ಬಡವರಿಗೆ ಹಂಚುತ್ತೇನೆ ಎಂದರು.

ನನ್ನ ಬಗ್ಗೆ ದೂರು ನೀಡಬೇಕೆಂದರೆ ರಾಜಕೀಯ ಹಿನ್ನೆಲೆ ಇರಬೇಕು, ಯಾರು ನೀಡಿದ್ದಾರೆ ಎಂದು ಕೇಳಲಿಲ್ಲ.ನಾನು ಕಳ್ಳತನ, ಲೂಟಿ ಮಾಡಿ ಮನೆ ನಿರ್ಮಿಸಿಲ್ಲ, ನನ್ನ ಸ್ವಂತ ದುಡಿಮೆಯಿಂದ ಮಾಡಿದ್ದು, ನನ್ನ ಆಸ್ತಿ ನನ್ನ ಅಭಿಮಾನಿಗಳು, ನನ್ನ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಗೊತ್ತಾದ ತಕ್ಷಣ ಬೆಳಗ್ಗೆ, ಮಧ್ಯಾಹ್ನದಿಂದ ತಿಂಡಿ-ಊಟ ಮಾಡದೆ ನನಗಾಗಿ ಬೇಸರಪಟ್ಟು ಕಾಯುತ್ತಾ ಕುಳಿತಿದ್ದರಂತೆ, ಅವರಿಗೆ ಮಾಧ್ಯಮ ಮೂಲಕ ಧನ್ಯವಾದ ಹೇಳುತ್ತೇನೆ ಎಂದು ಕೊನೆಗೆ ಜಮೀರ್ ಅಹ್ಮದ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com