ವಿಧಾನಪರಿಷತ್ ಮಾಜಿ ಸದಸ್ಯ ಗೋವಿಂದರಾಜು ಡೈರಿ ಪ್ರಕರಣ: ಐಟಿ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಎಫ್ ಐ ಆರ್ ವಜಾ

ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದ್ದನ್ನು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಮಹಾ ನಿರ್ದೇಶಕರು, ನಿರ್ದೇಶಕರು ಹಾಗೂ ಕೇಂದ್ರ ಆಯುಕ್ತರು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದರು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಧಾನಪರಿಷತ್ ಮಾಜಿ ಸದಸ್ಯ ಕೆ. ಗೋವಿಂದರಾಜು ಅವರ ಮನೆಯಲ್ಲಿ ಶೋಧ ನಡೆಸುವಾಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು ಎನ್ನಲಾದ ಡೈರಿಗೆ ಸಂಬಂಧಿಸಿದಂತೆ ಬೆಂಗಳೂರಿನ ಇಂದಿರಾನಗರ ಪೊಲೀಸರು ಐಟಿ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ಎಫ್ ಐ ಆರ್ ಅನ್ನು ಹೈಕೋರ್ಟ್ ವಜಾ ಮಾಡಿದೆ.

ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದ್ದನ್ನು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಮಹಾ ನಿರ್ದೇಶಕರು, ನಿರ್ದೇಶಕರು ಹಾಗೂ ಕೇಂದ್ರ ಆಯುಕ್ತರು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದರು.

“ಆದಾಯ ತೆರಿಗೆ ಇಲಾಖೆ ಕಾಯಿದೆ ಸೆಕ್ಷನ್ಗಳಾದ 132 ಮತ್ತು 138(2)ರ ಅಡಿ ಅಧಿಕಾರಿಗಳು ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಸಂಬಂಧಿತ ದಾಖಲೆ ಅಥವಾ ವಿವರವನ್ನು ಯಾವುದೇ ಸರ್ಕಾರಿ ಅಧಿಕಾರಿಯ ಮುಂದೆ ಪ್ರಸ್ತುತಪಡಿಸುವ ಅಗತ್ಯವಿಲ್ಲ” ಎಂದು ಪೀಠ ತೀರ್ಪಿನಲ್ಲಿ ಹೇಳಿದೆ. ಅಂತೆಯೇ, ಶಾಸಕರೊಬ್ಬರ ದೂರನ್ನು ಆಧರಿಸಿ ಸಿ ಆರ್ ಪಿ ಸಿ ಸೆಕ್ಷನ್ 91ರ ಅಡಿ ಆದಾಯ ತೆರಿಗೆ ಅಧಿಕಾರಿಗಳಿಗೆ ಇಂದಿರಾನಗರ ಪೊಲೀಸರು ನೀಡಿದ್ದ ನೋಟಿಸ್ ಅನ್ನು ನ್ಯಾಯಾಲಯವು ವಜಾ ಮಾಡಿದೆ.

ಶಾಸಕರು ತಮ್ಮ ದೂರಿನಲ್ಲಿ ಡೈರಿ ಬಗ್ಗೆ ಉಲ್ಲೇಖಿಸಿದ್ದಾರೆ. ಅಂತೆಯೇ ಪೊಲೀಸರು ಅರ್ಜಿದಾರರಾಗಿರುವ ಐಟಿ ಅಧಿಕಾರಿಗಳಿಂದ ಡೈರಿ ಪಡೆಯಲು ಪ್ರಯತ್ನಿಸಿದ್ದಾರೆ. ಇಡೀ ದೂರಿನ ಬಗ್ಗೆ ತನಿಖೆ ನಡೆಸಲು ಪೊಲೀಸರು ಡೈರಿ ಹೊರತುಪಡಿಸಿ ಬೇರೆ ಏನನ್ನೂ ಕೇಳಿಲ್ಲ ಎಂಬುದು ಆಘಾತ ಉಂಟು ಮಾಡಿದೆ ಎಂದಿರುವ ನ್ಯಾಯಾಲಯವು ಇಂದಿರಾ ನಗರ ಪೊಲೀಸರು 2017ರ ಫೆಬ್ರವರಿ 28ರಂದು ದಾಖಲಿಸಿದ್ದ ಎಫ್ಐಆರ್ ಮತ್ತು ಆನಂತರದ ಎಲ್ಲಾ ಪ್ರಕ್ರಿಯೆಗಳನ್ನು ರದ್ದು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com