ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ರಾಜ್ಯದ ಗಡಿ ಪ್ರವೇಶಿಸಿದ ತಕ್ಷಣ ರೈಲಿನಲ್ಲಿ ಬಾಂಬ್ ಇಟ್ಟಿದ್ದು, ಸ್ಫೋಟಗೊಳ್ಳುವುದಾಗಿ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ರೈಲನ್ನು ತೀವ್ರ ತಪಾಸಣೆ ನಡೆಸಲಾಗಿದೆ.
ಮಂಗಳವಾರ ಸಂಜೆ ಆಗ್ರಾದ ರೈಲ್ವೆ ನಿಯಂತ್ರಣ ಕೊಠಡಿಯಿಂದ ಕರ್ನಾಟಕದ ಸರ್ಕಾರಿ ರೈಲ್ವೆ ಪೊಲೀಸ್(GRP)ಗೆ ಹುಸಿ ಬಾಂಬ್ ಬೆದರಿಕೆ ಕರೆ ಬಗ್ಗೆ ಮಾಹಿತಿ ನೀಡಲಾಗಿದೆ.
ರೈಲಿನಲ್ಲಿರುವ ತನ್ನ ಪುರುಷ ಸಂಬಂಧಿಯೊಬ್ಬರ ಬಳಿ ಬಾಂಬ್ ಇದೆ ಎಂದು ವ್ಯಕ್ತಿಯೊಬ್ಬರು ಪೊಲೀಸ್ ಕಂಟ್ರೋಲ್ ರೂಮ್ ಕರೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ರೈಲನ್ನು ತೀವ್ರ ತಪಾಸಣೆ ನಡೆಸಿದ್ದಾರೆ.
"ಕರ್ನಾಟಕ ಎಕ್ಸ್ಪ್ರೆಸ್ ಕರ್ನಾಟಕದ ಗಡಿ ಪ್ರವೇಶಿಸಿದ ತಕ್ಷಣ ಸ್ಫೋಟ ಸಂಭವಿಸುತ್ತದೆ ಮತ್ತು ಇದು ಗರಿಷ್ಠ ಸಂಖ್ಯೆಯ ಪ್ರಯಾಣಿಕರನ್ನು ಬಲಿ ಪಡೆಯುತ್ತದೆ" ಎಂದು ಆಗ್ರಾದಿಂದ ಕರೆ ಮಾಡಿದ ವ್ಯಕ್ತಿ ಹೇಳಿರುವುದಾಗಿ ಎಂದು ರೈಲ್ವೇ ಉನ್ನತ ಮೂಲಗಳು ತಿಳಿಸಿವೆ.
ಕಲಬುರಗಿ ನಿಲ್ದಾಣಕ್ಕೆ ರೈಲು ಪ್ರವೇಶಿಸಿದ ತಕ್ಷಣ ಬಾಂಬ್ ನಿಷ್ಕ್ರಿಯ ದಳ, ರೈಲ್ವೆ ರಕ್ಷಣಾ ಪಡೆ ಮತ್ತು ಜಿಆರ್ಪಿ ಸ್ನಿಫರ್ ಡಾಗ್ಗಳೊಂದಿಗೆ ರೈಲನ್ನು ತೀವ್ರ ತಪಾಸಣೆ ನಡೆಸಿತು.
ರೈಲನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ಮಾರ್ಗಮಧ್ಯದ ಎಲ್ಲಾ ನಿಲ್ದಾಣಗಳಿಗೂ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ಎಕ್ಸ್ಪ್ರೆಸ್ ನಂತರ ಆಂಧ್ರಪ್ರದೇಶವನ್ನು ಪ್ರವೇಶಿಸುತ್ತದೆ ಮತ್ತು ಹಿಂದೂಪುರ ನಿಲ್ದಾಣದಲ್ಲಿ ಮತ್ತೆ ರೈಲನ್ನು ತಪಾಸಣೆ ನಡೆಸಲಾಗಿದೆ. ಬುಧವಾರ ಬೆಳಗಿನ ಜಾವ 1.40ಕ್ಕೆ ರೈಲು ಕೆಎಸ್ಆರ್ ರೈಲು ನಿಲ್ದಾಣ ತಲುಪುವವರೆಗೂ ತಪಾಸಣೆ ಮುಂದುವರಿದಿತ್ತು. ಅಂತಿಮವಾಗಿ ಇದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಕ್ತಿಯೊಬ್ಬರು ಕುಡಿದ ಅಮಲಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿರಬಹುದು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ. "ಆದಾಗ್ಯೂ, ನಾವು ಯಾವುದೇ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಕಟ್ಟುನಿಟ್ಟಾದ ಭದ್ರತಾ ತಪಾಸಣೆ ನಡೆಸಲಾಯಿತು" ಎಂದು ಅವರು ಹೇಳಿದ್ದಾರೆ.
Advertisement