ದೇಶಭಕ್ತರ ಮೂರ್ತಿಗಳಿಗೆ ಅಗೌರವ ತೋರಿಸುವುದು ಸರಿಯಲ್ಲ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಸರ್ಕಾರ ಸಹಿಸುವುದಿಲ್ಲ: ಸಿಎಂ ಬೊಮ್ಮಾಯಿ
ಹುಬ್ಬಳ್ಳಿ: ದೇಶಭಕ್ತರ ಮೂರ್ತಿಗಳನ್ನು ಅವರು ದೇಶಕ್ಕೆ ಮಾಡಿದ ತ್ಯಾಗ, ಬಲಿದಾನ, ಸೇವೆಗಳ ಗೌರವಾರ್ಥವಾಗಿ ಸ್ಥಾಪನೆ ಮಾಡಲಾಗುತ್ತದೆ. ಅದು ಶಿವಾಜಿ ಮಹಾರಾಜರ ಪ್ರತಿಮಯಾಗಿರಲಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಯಾಗಿರಲಿ, ಅವರಿಗೆ ಗೌರವವನ್ನು ಕೊಡಬೇಕಾದದ್ದು ನಮ್ಮ ಕರ್ತವ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ವಿಚಾರದಲ್ಲಿ ಬೇಡದಿರುವ ವಿಷಯಗಳನ್ನು ತಂದು ಗದ್ದಲವೆಬ್ಬಿಸುವುದು, ಸಮಾಜದ ಸ್ವಾಸ್ಥ್ಯ ಕೆದಡುವುದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಏನೇ ಹೇಳುವುದಿದ್ದರೂ ಶಾಂತಿಯುತವಾಗಿ ಹೇಳಬೇಕು ಎಂದರು.
ಕನ್ನಡಪರ ಹೋರಾಟಗಾರರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾರೇ ಇರಲಿ, ಬೀದಿಗಿಳಿದು ಹೋರಾಟ ನಡೆಸುವಾಗ ಶಾಂತಿಯುತವಾಗಿರಲಿ, ಕಾನೂನನ್ನು ಕೈಗೆತ್ತಿಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದು ಬೇಡ ಎಂದರು.
ದೇಶಭಕ್ತರಿಗೆ ಗೌರವ ಕೊಡಬೇಕೆಂದು ಎಲ್ಲರಿಗೂ ಮನವಿ ಮಾಡುತ್ತೇನೆ. ದೇಶಕ್ಕಾಗಿ ತ್ಯಾಗ ಮಾಡಿದ್ದಕ್ಕೆ ಅವರ ಮೂರ್ತಿ ಸ್ಥಾಪಿಸಲಾಗಿದೆ. ನಮ್ಮ ಸರ್ಕಾರ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಪುನರುಚ್ಛರಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ