ಬೆಂಗಳೂರಿನ ರಸ್ತೆಗಳು ಹೊಂಡ ಗುಂಡಿಗಳಿಂದ ಮುಕ್ತವಾಗಿಲ್ಲ ಏಕೆ?: ಪ್ರಶ್ನೆಗೆ ಕಾರಣ ನೀಡಿ ಉತ್ತರಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು: ಈ ವರ್ಷ ಅಕಾಲಿಕ ಮಳೆಯಿಂದ ಮಹಾನಗರ ಬೆಂಗಳೂರಿನ ರಸ್ತೆಗಳು ಹೊಂಡಗುಂಡಿ ಬಿದ್ದು ರಸ್ತೆಯಲ್ಲಿ ಸವಾರಿ ಮಾಡುವ ವಾಹನ ಸವಾರರು ಸರ್ಕಾರಕ್ಕೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ವಿಷಯ ನಿನ್ನೆ ಬೆಳಗಾವಿ ಅಧಿವೇಶನದಲ್ಲಿ ಕೂಡ ಸದ್ದು ಮಾಡಿತು. ಬೆಂಗಳೂರಿನ ರಸ್ತೆಗಳನ್ನು ಪದೇ ಪದೇ ಏಕೆ ಅಗೆಯಲಾಗುತ್ತದೆ, ಕಳೆದ ಐದು ವರ್ಷಗಳಲ್ಲಿ ರಸ್ತೆಗಳ ಡಾಂಬರೀಕರಣ ಮತ್ತು ದುರಸ್ತಿಗೆ 20 ಸಾವಿರ ಕೋಟಿ ರೂಪಾಯಿಗಳನ್ನು ಏಕೆ ಖರ್ಚು ಮಾಡಲಾಗಿದೆ ಎಂದು ಬೆಂಗಳೂರು ಮೇಯರ್ ಆಗಿದ್ದ ಕಾಂಗ್ರೆಸ್ ಎಂಎಲ್ಸಿ ಪಿಆರ್ ರಮೇಶ್ ಪ್ರಶ್ನಿಸಿದರು.
ನಗರದ 11 ಸಾವಿರದ 283 ಕಿಲೋ ಮೀಟರ್ ಉದ್ದದ ರಸ್ತೆಗಳಲ್ಲಿ ಒಂದು ಕಿಲೋ ಮೀಟರ್ ಕೂಡ ಹೊಂಡಗುಂಡಿಗಳಿಂದ ಮುಕ್ತವಾಗಿಲ್ಲ ಎಂದರೆ ಹೇಗೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು. ಒಂದೇ ಕೆಲಸಕ್ಕೆ ಪುನರಾವರ್ತಿತ ಬಿಲ್ಗಳನ್ನು ಕ್ಲೈಮ್ ಮಾಡುತ್ತಿವೆಯೇ, ವ್ಯವಸ್ಥೆಯ ದುರುಪಯೋಗವನ್ನು ತಡೆಯಲು ಕೆಲಸದ ಅಂಕಿಅಂಶ ನಡೆಯುತ್ತಿದೆಯೇ ಎಂದು ಸರ್ಕಾರದಿಂದ ಉತ್ತರ ಬಯಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಬೆಂಗಳೂರು ರಸ್ತೆಗಳನ್ನು ಕೇವಲ ಸಂಚಾರಕ್ಕೆ ಮಾತ್ರ ಬಳಸಲಾಗುತ್ತಿಲ್ಲ. ರಸ್ತೆಗಳ ಅಡಿಯಲ್ಲಿ ವಿದ್ಯುತ್, ಎಲ್ಪಿಜಿ ಮತ್ತು ನೀರಿನ ಸಂಪರ್ಕ ಮಾರ್ಗಗಳನ್ನು ಸಹ ಹಾಕಲಾಗಿದೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳ ಸ್ಥಿತಿ ಹದಗೆಟ್ಟಿದೆ ಎಂದರು.
ಬೆಂಗಳೂರಿನ ವ್ಯಾಪ್ತಿಯಲ್ಲಿರುವ 110 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆಗಳ ಅಡಿಯಲ್ಲಿ ಒಳಚರಂಡಿ ಪೈಪ್ಗಳನ್ನು (UGD) ಹಾಕುವ ಕೆಲಸವನ್ನು ಬಿಡಬ್ಯುಎಸ್ ಎಸ್ ಬಿ ಕೈಗೆತ್ತಿಕೊಂಡಿದೆ. ನೆಲದಡಿಯಲ್ಲಿ 6 ಸಾವಿರ ಕಿಮೀ ಕೇಬಲ್ಗಳನ್ನು ಹಾಕುವ ಕೆಲಸ ಪ್ರಗತಿಯಲ್ಲಿದೆ. GAIL ಕೂಡ 1,500 ಕಿಮೀ ಗ್ಯಾಸ್ ಪೈಪ್ಲೈನ್ಗಳನ್ನು ಹಾಕುತ್ತಿದೆ. ಇವುಗಳು ಮತ್ತು ಇತರ ಅಗತ್ಯ ಕಾಮಗಾರಿಗಳಿಂದಾಗಿ, ಗುಂಡಿ ಮುಕ್ತ ರಸ್ತೆಗಳನ್ನು ನಿರ್ವಹಿಸುವಲ್ಲಿ ಸರ್ಕಾರವು ಸವಾಲನ್ನು ಎದುರಿಸುತ್ತಿದೆ ಎಂದು ಸಿಎಂ ವಿವರಿಸಿದರು.
ಕಳೆದ ಡಿಸೆಂಬರ್ 10ರಿಂದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 430 ಆರ್ಟಿರಿಯಲ್ ಮತ್ತು ಉಪ ಮಾರ್ಗಗಳ ರಸ್ತೆಗಳ ಡಾಂಬರೀಕರಣವನ್ನು ಪ್ರಾರಂಭಿಸಿದೆ. ಈ ಪೈಕಿ 834 ಕಿಲೋ ಮೀಟರ್ ಅಳತೆಯ 311 ರಸ್ತೆಗಳನ್ನು ಗುಂಡಿ ಮುಕ್ತ ಮಾಡಲಾಗಿದೆ. ಉಳಿದ 159 ಕಿಲೋ ಮೀಟರ್ ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. 180 ಕಿಲೋ ಮೀಟರ್ ಉದ್ದದ ರಸ್ತೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು, ಹಂತ ಹಂತವಾಗಿ ನಡೆಯುತ್ತಿದೆ ಎಂದರು. 100 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, 30 ಕಿಲೋ ಮೀಟರ್ ಉದ್ದದ ಟೆಂಡರ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೂಡ ಬೆಂಗಳೂರಿನ ರಸ್ತೆ ಕಾಮಗಾರಿಗಳ ಬಗ್ಗೆ ಸಿಎಂ ವಿವರಿಸಿದರು.