ನನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ, ಉಮಾಪತಿ ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು: ಅರುಣ ಕುಮಾರಿ
ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ 25 ಕೋಟಿ ವಂಚನೆ ಪ್ರಕರಣದಲ್ಲಿ ಕೇಳಿಬರುತ್ತಿರುವ ಮುಖ್ಯ ಆರೋಪಿ ಅರುಣ ಕುಮಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ನನ್ನನ್ನು ಎಳೆದುತಂದು ದುರುಪಯೋಗಪಡಿಸಿಕೊಳ್ಳಲಾಗಿದೆ. ನಿರ್ಮಾಪಕ ಉಮಾಪತಿಯವರು ಮಾಡಿದ್ದು ತಪ್ಪು, ನನ್ನನ್ನು ಬಳಸಿಕೊಂಡು ಹೆಣ್ಣು ಸಮಾಜದ ಮುಂದೆ ತಲೆಯೆತ್ತಿ ಬದುಕದಂತೆ ಮಾಡಿದ್ದೀರಿ, ಇಂದು ನಾನು ಹೊರಗೆ ಬಂದು ಜನರ ಮುಂದೆ ಮುಖ ತೋರಿಸಿ ಹೇಗೆ ಬದುಕಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಉಮಾಪತಿ ಅವರಿಗೆ ಲಾಭನೋ ನಷ್ಟಾನೋ ಗೊತ್ತಿಲ್ಲ. ನೇರವಾಗಿ ದರ್ಶನ್ ಸರ್ ಅವರಿಗೆ ಹೇಳಬಹುದಿತ್ತು. ಇದು ಸಣ್ಣ ವಿಷಯ. ಅವರು ದೊಡ್ಡ ವ್ಯಕ್ತಿಗಳು, ಅವರ ಮಧ್ಯೆಯೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಸುಮ್ಮನೆ ಹೊರಗೆ ಎಳೆದುತಂದು ದೊಡ್ಡ ವಿಷಯ ಮಾಡಲಾಗಿದೆ. ಈಗ ನನಗೆ ಅವಮಾನ ಆಗುತ್ತಿದೆ. ಒಂದು ಹೆಣ್ಣಿಗೆ ಏಕೆ ಇಷ್ಟೊಂದು ಅವಮಾನ ಮಾಡುತ್ತಿದ್ದೀರಿ, ನನ್ನನ್ನು ಬಳಸಿಕೊಂಡು ಈ ರೀತಿ ಮಾಡುತ್ತಿರುವುದು ತಪ್ಪು, ನನ್ನನ್ನು ಇದರಿಂದ ದಯವಿಟ್ಟು ಹೊರಗೆ ತನ್ನಿ, ನನ್ನ ಪರಿಸ್ಥಿತಿ ಶೋಚನೀಯವಾಗಿದೆ, ನಾನು ಖಿನ್ನತೆಗೆ ಹೋಗಿದ್ದೇನೆ, ನನ್ನ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದೆ ಎಂದು ಹೇಳಿಕೊಂಡರು.
ಲೋನ್ ಗೆ ಅಪ್ರೋಚ್ ಮಾಡಿದ್ದಾರಷ್ಟೆ: ಅವರು ಸಾಲ ತೆಗೆದುಕೊಂಡಿದ್ದಾರೆ ಎಂದು ವರದಿಯಾಗುತ್ತಿದೆ. ಆದರೆ ಸಾಲ ತೆಗೆದುಕೊಂಡಿಲ್ಲ, ಸಾಲ ತೆಗೆದುಕೊಳ್ಳಲು ಸಂಪರ್ಕಿಸಿದ್ದಾರಷ್ಟೆ, ನಾನು ದರ್ಶನ್ ಅವರ ಫಾರ್ಮ್ ಹೌಸ್ ಗೆ ಹೋಗಿದ್ದೇನೆ ಹೌದು, ಆದ್ರೆ ನಾನು ಕಳ್ಳತನ ಮಾಡಿದ್ದೀನಾ? ಯಾರಿಗೂ ಮೋಸ ಆಗಿಲ್ಲ, ನನಗೆ ದರ್ಶನ್ ಖಾತೆಯಿಂದ ಯಾವುದೇ ದುಡ್ಡು ಬಂದಿಲ್ಲ. ದರ್ಶನ್ ಅವರು ಒಂದು ಸಂದರ್ಶನದಲ್ಲಿ ಸೀಲು ಹಾಕಿ 2 ಲಕ್ಷ ಲಂಚ ತೆಗೆದುಕೊಂಡಿದ್ದಾರೆ ಎಂದರು, ಅದು ನನ್ನ ಜೀವನ, ನನ್ನ ಜೀವನಕ್ಕೆ ನಾನೇ ಜವಾಬ್ದಾರಳು, ನನ್ನ ಜೀವನ ಕೆಟ್ಟರೆ ದರ್ಶನ್, ಉಮಾಪತಿಯವರು ಯಾರೂ ಬರುವುದಿಲ್ಲ ನಾನೇ ನೋಡಿಕೊಳ್ಳಬೇಕು ಎಂದರು.
ಈ ಪ್ರಕರಣದಲ್ಲಿ ಉಮಾಪತಿಗೆ ಲಾಭ ಏನು? ನನ್ನನ್ನು ಉಪಯೋಗಿಸಿದ್ದು ತಪ್ಪು. ಅವರ ಜೊತೆಗೆ ಚಾಟಿಂಗ್ ಮಾಡುವಾಗ ಹಾರ್ಟ್ ಸಿಂಬಲ್ ಕಳುಹಿಸಿದ್ದರಲ್ಲ ಏನು ತಪ್ಪಿದೆ, ಅಪ್ಪ ಮಕ್ಕಳಿಗೆ ಕಳುಹಿಸಲ್ವಾ? ಅಣ್ಣ ತಂಗಿಗೆ ಕಳುಹಿಸಲ್ವಾ? ಅವರ ಜೊತೆ ವಾಟ್ಸಾಪ್ ಚಾಟಿಂಗ್ 32 ಪೇಜ್ ಇದೆ ಎನ್ನುವುದು ಸುಳ್ಳು. ಅವರೊಂದಿಗೆ ಕಳೆದ ಮಾರ್ಚ್ 30ರಿಂದ ಸಂಪರ್ಕದಲ್ಲಿದ್ದೆ, ನನ್ನ ಗಂಡ ನೀಡಿದ ಫೋಟೋಗಳು ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ನನ್ನ ಪತಿ ಸಾಚಾ ಅಲ್ಲ. ನನಗೆ ಆತನನ್ನು ಗಂಡ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ. ಈಗ ಬಂದಿರುವುದು ಎಲ್ಲ ಸತ್ಯವಲ್ಲ. ಪೊಲೀಸರ ತನಿಖೆಯಲ್ಲಿ ಎಲ್ಲದ್ದಕ್ಕೂ ಉತ್ತರ ಸಿಗಲಿದೆ. ನನಗೆ ಪೊಲೀಸರಿಂದ ನ್ಯಾಯ ಸಿಗುವ ನಂಬಿಕೆಯಿದೆ ಎಂದರು.

