ಬೆಳಗಾವಿ: ಕಳೆದ ಮೂರು ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಮಿತಿ ಮೀರುತ್ತಿದೆ. ಇದೇ ವೇಳೆ ಬೆಳಗಾವಿ ಲೋಕಸಭೆ ಉಪ ಚುನಾವಣೆ ಪ್ರಚಾರದ ವೇಳೆ ಸಿಎಂ ಯಡಿಯೂರಪ್ಪ ವಾಸ್ತವ್ಯ ಹೂಡಿದ್ದ ಹೋಟೆಲ್ ನ 12 ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ.
ಬೆಳಗಾವಿ ಚುನಾವಣಾ ಪ್ರಚಾರ ಮುಗಿಸಿ ಬಂದ ನಂತರ ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಹೋಟೆಲ್ ನಲ್ಲಿ ಸಿಎಂ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಿಬ್ಬಂದಿಯ ದ್ರವ ಮಾದರಿಯನ್ನು ಏಪ್ರಿಲ್ 16 ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು.
ಆದರೆ 20 ದಿನಗಳ ನಂತರ ಕೊರೋನಾ ಪರೀಕ್ಷೆ ಬಂದಿತ್ತು, ವರದಿ ವಿಳಂಬವಾದ ಕಾರಣ ಈ 12 ಮಂದಿ ಜೊತೆ ಯಾರೊಬ್ಬರು ಸಂಪರ್ಕ ಹೊಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ 14 ಮತ್ತು 15 ರಂದು ಬೆಳಗಾವಿಯಲ್ಲಿ ವಿವಿಧ ರೋಡ್ ಶೋ ಮತ್ತು ರ್ಯಾಲಿಯಲ್ಲಿ ಸಿಎಂ ಭಾಗವಹಿಸಿದ್ದರು, ಜ್ವರದ ನಡುವೆಯೂ ಸಿಎಂ ಪ್ರಚಾರ ಕಾರ್ಯಕ್ರಮ ಸೇರಿದಂತೆ ಹಲವು ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಸಿಎಂ ಅವರಿಗೆ ಎರಡನೇ ಬಾರಿಗೆ ಸೋಂಕು ಪತ್ತೆಯಾದ ನಂತರ ಹೋಟೆಲ್ ನ 40 ಸಿಬ್ಬಂದಿ ಪರೀಕ್ಷೆಗೊಳಗಾಗಿದ್ದರು.
Advertisement