ವಕ್ಫ್ ಮಂಡಳಿ ಹಗರಣದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಸಿಎಂ ಯಡಿಯೂರಪ್ಪ ರಾಜಿ: ಪ್ರಧಾನಿಗೆ ಅನ್ವರ್ ಮಾಣಿಪ್ಪಾಡಿ ಪತ್ರ

ಸುಮಾರು 4 ಲಕ್ಷ ಕೋಟಿ ಹಗರಣ ನಡೆದಿದೆ ಎನ್ನಲಾಗುವ ರಾಜ್ಯ ವಕ್ಫ್ ಮಂಡಳಿ ಹಗರಣ ವರದಿಯನ್ನು ಕಾಂಗ್ರೆಸ್ ನಾಯಕರ ಅನುಕೂಲಕ್ಕೆ ತಕ್ಕಂತೆ ಹತ್ತಿಕ್ಕಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬ ರಾಜಿ ಮಾಡಿಕೊಂಡಿದೆ ಎಂದು ಅನ್ವರ್ ಮಾಣಿಪ್ಪಾಡಿ ಗಂಭೀರ ಆರೋಪ ಮಾಡಿದ್ದಾರೆ.
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
Updated on

ಮಂಗಳೂರು: ಸುಮಾರು 4 ಲಕ್ಷ ಕೋಟಿ ಹಗರಣ ನಡೆದಿದೆ ಎನ್ನಲಾಗುವ ರಾಜ್ಯ ವಕ್ಫ್ ಮಂಡಳಿ ಹಗರಣ ವರದಿಯನ್ನು ಕಾಂಗ್ರೆಸ್ ನಾಯಕರ ಅನುಕೂಲಕ್ಕೆ ತಕ್ಕಂತೆ ಹತ್ತಿಕ್ಕಲು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಕುಟುಂಬ ರಾಜಿ ಮಾಡಿಕೊಂಡಿದೆ ಎಂದು ಬಿಜೆಪಿ ನಾಯಕ ಮತ್ತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಮತ್ತು ಇತರ ಪ್ರಮುಖ ನಾಯಕರಿಗೆ ಪತ್ರ ಬರೆದಿರುವ ಅವರು, ವರದಿಯನ್ನು ತಿರಸ್ಕರಿಸುವಂತೆ ಮತ್ತು ಅದನ್ನು ಬೆಳಕಿಗೆ ತಾರದಂತೆ ನಾನು ಎಷ್ಟು ಹಣಕ್ಕೆ ಬೇಡಿಕೆ ಇಡುತ್ತೇನೆಯೋ ಅಷ್ಟು ಹಣ ನೀಡಲು ಸಿದ್ಧ ಎಂದು ಸ್ವತಃ ಯಡಿಯೂರಪ್ಪನವರ ಪುತ್ರನೇ ನನಗೆ ಆಮಿಷವೊಡ್ಡಿದ್ದಾರೆ. ಅದು ಲಕ್ಷ, ಕೋಟಿಯಲ್ಲಲ್ಲ, ಬದಲಿಗೆ ಟ್ರಿಲಿಯನ್ ಗಳಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ನಡುವೆ ಒಪ್ಪಂದ ನಡೆದಿದೆ, ವಕ್ಫ್ ಹಗರಣ ವರದಿಯನ್ನು ಮತ್ತು ಲೋಕಾಯುಕ್ತದ ವಾಸ್ತವಾಂಶ ವರದಿಯನ್ನು ಸಿಬಿಐಗೆ ತನಿಖೆಗೆ ವಹಿಸುವಂತೆ ನಾನು ಮುಖ್ಯಮಂತ್ರಿಗಳಿಗೆ ಸವಾಲು ಹಾಕುತ್ತೇನೆ ಎಂದು ಅನ್ವರ್ ಮಾಣಿಪ್ಪಾಡಿ ಆಕ್ರೋಶ ಹೊರಹಾಕಿದ್ದಾರೆ.

ವಕ್ಫ್ ಮಂಡಳಿಯ ಹಗರಣ ವರದಿಯನ್ನು ಮುಖ್ಯಮಂತ್ರಿಗಳು ಅಮಾನತಿನಲ್ಲಿಟ್ಟಿದ್ದಾರೆ, ಅವರು ಪ್ರಾಮಾಣಿಕರಾಗಿದ್ದರೆ, ಈ ಹಗರಣದಲ್ಲಿ ಪಾತ್ರ ವಹಿಸಿರದಿದ್ದರೆ ಇದರಲ್ಲಿ ವರದಿಯನ್ನು ಬಯಲಿಗೆಳೆದು ಸಿಬಿಐ ತನಿಖೆಗೆ ನೀಡಬೇಕಾಗಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರ ವಕ್ಫ್ ಹಗರಣ ವರದಿಯನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿತ್ತು,ನಂತರ ಸರ್ಕಾರ ಬದಲಾಯಿತು, ಈಗ ಮುಖ್ಯಮಂತ್ರಿಗಳಾಗಿರುವ ಯಡಿಯೂರಪ್ಪನವರು ಹಗರಣ ಬಯಲಿಗೆಳೆಯಲು ಏಕೆ ಮನಸ್ಸು ಮಾಡುತ್ತಿಲ್ಲ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಅನ್ವರ್ ಮಾಣಿಪ್ಪಾಡಿ  ಕೇಳಿದ್ದಾರೆ.

ಕೊನೆಗೆ ದೂರು ಸುಪ್ರೀಂ ಕೋರ್ಟ್ ತಲುಪಿದಾಗ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಯಡಿಯೂರಪ್ಪನವರು ಸದನದಲ್ಲಿ ಮಂಡಿಸಲು ಮುಂದಾದರು. ಆದರೆ ಇದು ತೋರಿಕೆಯಷ್ಟೆ,ಕಾಯ್ದೆ ಪ್ರಕಾರ ಸದನದಲ್ಲಿ ಮಂಡಿಸುತ್ತಿಲ್ಲ ಎಂದು ಪತ್ರದಲ್ಲಿ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com