ಸರಕು ಮತ್ತು ಸೇವಾ ತೆರಿಗೆ ಸುಧಾರಿಸಲು ಸಚಿವರ ಗುಂಪು ಸದ್ಯದಲ್ಲಿಯೇ ಸಭೆ ಸೇರಿ ಚರ್ಚೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯನ್ನು ಸುಧಾರಿಸುವ ಕುರಿತು ಸದ್ಯದಲ್ಲಿಯೇ ಸಭೆಯನ್ನು ನಡೆಸಿ ಚರ್ಚಿಸಲಾಗುವುದು ಎಂದು ಸಚಿವರ ಗುಂಪಿನ(GoM) ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ.
ನಿನ್ನೆ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಗುಂಪಿನ ಸಭೆಯ ವರದಿಗಳನ್ನು ಎರಡು ತಿಂಗಳೊಳಗೆ ನೀಡಬೇಕು ಎಂದು ಹೇಳಿದರು.
ಜಿಎಸ್ಟಿಯ ಪುನರ್ರಚನೆ ಮತ್ತು ಸುಧಾರಿಸುವಿಕೆ ಹಾಗೂ ಮುಂಬರುವ ದಿನಗಳಲ್ಲಿ ಆದಾಯವನ್ನು ಹೆಚ್ಚಿಸುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳಿವೆ. ನಾವು ಆ ಎಲ್ಲ ವಿಷಯಗಳನ್ನು ವಿವರವಾಗಿ ಚರ್ಚಿಸಿದ್ದೇವೆ. ನಾನು ಶೀಘ್ರದಲ್ಲೇ ಸರ್ಕಾರದ ಮೊದಲ ಸಭೆಯನ್ನು ಕರೆಯುತ್ತೇನೆ ಎಂದು ಹೇಳಿದರು.
ರಾಜ್ಯದ ಮೂಲಸೌಕರ್ಯ ಯೋಜನೆಗಳಿಗಾಗಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ನಬಾರ್ಡ್) ಯೋಜನೆಯಡಿ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುವಂತೆ ನಿನ್ನೆ ಮುಖ್ಯಮಂತ್ರಿ ಬೊಮ್ಮಾಯಿ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಮನವಿ ಮಾಡಿದರು. ಕರ್ನಾಟಕವು ನಬಾರ್ಡ್ನಿಂದ ಸಾಲವನ್ನು ಹೆಚ್ಚಿಸಲು ಕೇಳಿದ್ದು ಈ ವರ್ಷ ಸಾವಿರದ 500 ಕೋಟಿ ರೂಪಾಯಿ ನೀಡಬೇಕಿದೆ. ಇದರಿಂದ ರೈತರಿಗೆ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಸಿಎಂ ಹೇಳಿದರು.
ನವೆಂಬರ್ ಮೊದಲ ವಾರದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆಯಿದೆ ಮತ್ತು ನಬಾರ್ಡ್ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ಯೋಜನೆಗಳ ಕುರಿತು ಚರ್ಚಿಸಲು ಅವರು ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು. SIDBIಯಿಂದ ಸಣ್ಣ ಕೈಗಾರಿಕೆಗಳು ಮತ್ತು ಮೈಕ್ರೋ ಫೈನಾನ್ಸ್ ಆರಂಭಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.